
ಹುಬ್ಬಳ್ಳಿ: ಅಪರಾಧ ನಿಯಂತ್ರಣಕ್ಕೆ ಪೊಲೀಸರು ಸಾಕಷ್ಟು ಕಠಿಣ ಕ್ರಮ ಕೈಗೊಂಡರೂ, ಆರೋಪಿಗಳ ಕಾಲಿಗೆ ಗುಂಡು ಹೊಡೆದು ಎಚ್ಚರಿಕೆ ಸಂದೇಶ ರವಾನಿಸಿದರೂ ಚಾಕು ಇರಿತದ ಪ್ರಕರಣಗಳು ಹೆಚ್ಚುತ್ತಿವೆ. ಮಹಾನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 2024ರಲ್ಲಿ 85 ಚಾಕು ಇರಿತ ಪ್ರಕರಣಗಳು ದಾಖಲಾಗಿದ್ದರೆ, ಪ್ರಸ್ತುತ 2025ರ ಏಪ್ರಿಲ್ 7ರವರೆಗೆ 42 ಪ್ರಕರಣಗಳು ಠಾಣೆಗಳ ಮೆಟ್ಟಿಲೇರಿವೆ. ಒಂದೂವರೆ ವರ್ಷದ ಈ ಅವಧಿಯಲ್ಲಿ ಚಾಕು ಇರಿತದಿಂದ ಹಲ್ಲೆಗೊಳಗಾಗಿ ವಿದ್ಯಾರ್ಥಿ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಸೇರಿ ಒಟ್ಟು ಐದು ಮಂದಿ ಮೃತಪಟ್ಟಿದ್ದಾರೆ. ಕೊಲೆ, ಕೊಲೆಯತ್ನಕ್ಕೆ ಸಂಬಂಧಿಸಿ 406 ಮಂದಿ ವಿರುದ್ಧ, 127 ಪ್ರಕಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ.

j3tvkannada
400ಕ್ಕೂ ಹೆಚ್ಚು ಮಂದಿ 18 ರಿಂದ 60 ವರ್ಷದ ಒಳಗಿನವರೇ ಇರಿತ ಪ್ರಕರಣಗಳ ಆರೋಪಿಗಳು. 18 ವರ್ಷದ ಒಳಗಿನ ಐವರು ಚಾಕು ಹಿಡಿದು ಕೊಲೆ, ಕೊಲೆಯತ್ನಕ್ಕೆ ಯತ್ನಿಸಿದ್ದಾರೆ. ಅವಳಿನಗರದಲ್ಲಿ ಇರಿತದ ಸಂಸ್ಕೃತಿ ಸಾಮಾನ್ಯವಾಗಿದ್ದರಿಂದ, ಅದನ್ನು ನೋಡಿ ಮಕ್ಕಳು ಕಲಿಯುತ್ತಿದ್ದಾರೆ ಎಂದು ಸ್ವತಃ ಪೊಲೀಸರೇ ಹೇಳುತ್ತಾರೆ. ಧಾರವಾಡಕ್ಕಿಂತ ಹುಬ್ಬಳ್ಳಿಯಲ್ಲಿ ಹೆಚ್ಚು ಹಿಂದುಳಿದ ಹಾಗೂ ಕೊಳೆಗೇರಿ ಪ್ರದೇಶಗಳು ಇವೆ. ಅಲ್ಲಿ ವಾಸಿಸುವವರು ಹೆಚ್ಚಾಗಿ ಆಂಧ್ರಪ್ರದೇಶ, ತಮಿಳನಾಡು ಭಾಗದಿಂದ ಉದ್ಯೋಗ ಅರಸಿ ಬಂದ ಬಡವರೇ ಆಗಿದ್ದಾರೆ. ಅವರಲ್ಲಿ ಶಿಕ್ಷಣದ ಹಾಗೂ ಕಾನೂನಿನ ತಿಳಿವಳಿಕೆ ತೀರಾ ಕಡಿಮೆಯಿದ್ದು, ಏನು ಮಾಡಿದರೆ ಏನಾಗುತ್ತದೆ ಎನ್ನುವ ಅರಿವಿಲ್ಲ. ಕೆಲವು ರೌಡಿಗಳು, ಕಿಡಿಗೇಡಿಗಳು ಅವರ ಅಸಹಾಯಕತೆಯನ್ನು ಬಂಡವಾಳವನ್ನಾಗಿ ಮಾಡಿಕೊಂಡು, ಹಣ, ಮದ್ಯದ ಆಮಿಷ ತೋರಿಸಿ ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಾರೆ ಎಂದು ಡಿ.ಸಿ.ಪಿ ಮಹಾನಿಂಗ ನಂದಗಾವಿ ತಿಳಿಸಿದರು.
ರಸ್ತೆಯಲ್ಲಿ ಹೋಗುವಾಗ ದುರುಗುಟ್ಟಿ ನೋಡಿದ್ದಕ್ಕೆ, ಹಣಕಾಸಿನ ವ್ಯವಹಾರಕ್ಕೆ, ಅವಾಚ್ಯವಾಗಿ ನಿಂದಿಸಿದ್ದಕ್ಕೆ, ಪ್ರೀತಿ-ಪ್ರೇಮದ ಕಾರಣಕ್ಕೆ, ಕೌಟುಂಬಿಕ ಕಲಹಕ್ಕೆ, ಜಾತಿ ಕಾರಣಕ್ಕೆ, ಮಾದಕ ಪದಾರ್ಥಗಳ ಸೇವನೆಯ ನಿಶೆಯಿಂದ ಸೇರಿದಂತೆ ಅನೇಕ ಕಾರಣಕ್ಕೆ ನಗರದಲ್ಲಿ ಚಾಕು ಇರಿತವಾಗುತ್ತಿವೆ ಎಂದು ತಿಳಿಸಿದರು. ಇಂದಿನ ಇಂಟರ್ನೆಟ್, ಮೊಬೈಲ್ ಯುಗದಲ್ಲಿ ಕಾನೂನು ಬಾಹಿರ ಕೃತ್ಯಗಳ ವೈಭವೀಕರಣವೇ ಹೆಚ್ಚಾಗುತ್ತಿದೆ. ಟಿವಿ, ಮೊಬೈಲ್ಗಳಲ್ಲಿಯೂ ಅಂಥ ದೃಶ್ಯಾವಳಿಗಳೇ ಕಂಡುಬರುತ್ತವೆ. ಪ್ರತಿಯೊಬ್ಬ ಮಕ್ಕಳ ಕೈಯ್ಯಲ್ಲೂ ಮೊಬೈಲ್ ಇರುವುದರಿಂದ, ಮನೆಯ ಸಂಸ್ಕಾರ, ಸಂಸ್ಕೃತಿಯೆಲ್ಲ ಮಾಯವಾಗಿವೆ. ಪಾಲಕರು ಸಹ ಮಕ್ಕಳು ಗಳಿಸುವ ಅಂಕದ ಮೇಲಷ್ಟೇ ಗಮನ ಹರಿಸುತ್ತಿದ್ದಾರೆ. ಮೊಬೈಲ್ನಲ್ಲಿ ಏನು ನೋಡುತ್ತಿದ್ದಾರೆ, ಸ್ನೇಹಿತರು ಯಾರಾರು, ವರ್ತನೆಗಳು ಹೇಗಿವೆ ಎನ್ನುವ ಸೂಕ್ಷ್ಮ ಅರಿಯುತ್ತಿಲ್ಲ. ಇದರಿಂದ ಸಹಜವಾಗಿ ಮಕ್ಕಳ ಮನಸ್ಸು ಅಪರಾಧ ಕೃತ್ಯದತ್ತ ಆಕರ್ಷಿಸುತ್ತದೆ. ಇದು ಅಪಾಯಕಾರಿ. ಪಾಲಕರು ಮಕ್ಕಳ ಚಲನವಲನ ಗಮನಿಸುತ್ತಿರಬೇಕು. ಸ್ನೇಹಿತರ ಸಹವಾಸದ ಬಗ್ಗೆ ಎಚ್ಚರ ವಹಿಸಬೇಕು ಎಂದು ಮಾನಸಿಕ ಆರೋಗ್ಯ ತಜ್ಞ ಡಾ. ಆನಂದ ಪಾಂಡುರಂಗಿ ಹೇಳುತ್ತಾರೆ.