
ಹಾಸನ : ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯುವಂತೆ ಸೂಚಿಸಿದ ಅಧಿಕಾರಿಗಳ ವರ್ತನೆ ಖಂಡಿಸಿದ ಬ್ರಾಹ್ಮಣ ಸಂಘದ ಸದಸ್ಯರು ಶನಿವಾರ ತಹಶೀಲ್ದಾರ್ ವಿ.ಎಸ್.ನವೀನ್ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

j3tvkannada
ಕೋಟೆ ಪ್ರದೇಶದಿಂದ ಮೆರವಣೆಗೆ ನಡೆಸಿದ ಸಂಘದ ಸದಸ್ಯರು ತಾಲ್ಲೂಕು ಕಚೇರಿ ಬಳಿ ಆಗಮಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕು ಬ್ರಾಹ್ಮಣ ಸಂಘದ ಕಾರ್ಯದರ್ಶಿ ವೆಂಕಟೇಶ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಯನ್ನು, ಅಧಿಕಾರಿಗಳು ಪರಿಶೀಲಿಸಿ ಜನಿವಾರ ತೆಗೆಯುವಂತೆ ಸೂಚಿಸಿದ್ದಾರೆ. ವಿದ್ಯಾರ್ಥಿ ನಿರಾಕರಿಸಿದಾಗ, ಉದ್ಧಟತನದಿಂದ ವರ್ತಿಸಿರುವ ಅಧಿಕಾರಿಗಳು ಒತ್ತಾಯವಾಗಿ ಜನಿವಾರ ತೆಗೆಸಿದ್ದಾರೆ. ಇದೇ ರೀತಿ ಬೀದರ್ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ ಘಟನೆ ನಡೆದಿದ್ದು, ಜನಿವಾರ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಿಸಲಾಗಿದೆ. ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತನಾಗಿದ್ದಾನೆ ಎಂದು ದೂರಿದರು.
ಜನಿವಾರ ಧಾರ್ಮಿಕ ಸಂಕೇತವಾಗಿದ್ದು. ಅದನ್ನು ಯಾವುದೇ ಕಾರಣಕ್ಕೂ ತೆಗೆಯುವಂತ್ತಿಲ್ಲ. ಅಧಿಕಾರಿಗಳ ನಡೆ ವಿದ್ಯಾರ್ಥಿ ಮತ್ತು ಪೋಷಕರಿಗೆ ಆತಂಕ ಉಂಟು ಮಾಡಿದೆ. ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕು. ಜನಾಂಗಕ್ಕೆ ಅನ್ಯಾಯ ಮಾಡುವ ಪ್ರವೃತ್ತಿ ಮುಂದುವರೆದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಕಾಂತರಾಜು ಆಯೋಗ ಮಾಡಿರುವ ಸಾಮಾಜಿಕ, ಶೈಕ್ಷಣಿಕ ವರದಿ ಕ್ರಮಬದ್ಧವಾಗಿಲ್ಲ. ಇದರಲ್ಲಿ ಸಾಕಷ್ಟು ಲೋಪದೋಷಗಳಿರುವುದರಿಂದ ವೈಜ್ಞಾನಿಕವಾಗಿ ಜಾತಿ ಗಣತಿ ಮಾಡಬೇಕಿದೆ ಎಂದು ಆಗ್ರಹಿಸಿದರು. ಸಮಾಜದ ಮುಖಂಡರಾದ ಶ್ರೀನಿವಾಸ್, ಸುಬ್ರಹ್ಮಣ್ಯ. ಕೆ.ಎನ್.ಬನಶಂಕರಿ, ಜಿ.ಆರ್.ಮೋಹನ್, ಸಿ.ಟಿ.ಕುಮಾರಸ್ವಾಮಿ ಭಾಗವಹಿಸಿದ್ದರು.