
ಬಾಗಲಕೋಟೆ: ಮಕ್ಕಳ ಮಾನಸಿಕ ಸದೃಡತೆಯಲ್ಲಿ ಕ್ರೀಡೆಗಳು ಅತೀ ಮುಖ್ಯ ಪಾತ್ರ ವಹಿಸುತ್ತವೆ. ಅಂತೆಯೇ ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿಯ ಶಾಲಾ ಆವರಣದಲ್ಲಿ ಮುಂಜಾನೆ ಆರೂವರೆ ಗಂಟೆಗೆ ಐವತ್ತಕ್ಕೂ ಹೆಚ್ಚು ಮಲ್ಲಕಂಬ ಕ್ರೀಡಾಪಟುಗಳ ಕಲರವವಿತ್ತು . ಅವರೆಲ್ಲ ಯೋಗದೊಂದಿಗೆ ಅಭ್ಯಾಸವನ್ನು ಆರಂಭಿಸಿದರು. ಏಳು ವರ್ಷದಿಂದ ಹಿಡಿದು ಹದಿನಾಲ್ಕು ವರ್ಷದವರೆಗಿನ ವಿದ್ಯಾರ್ಥಿಗಳು ಸರಸರನೇ ಮಲ್ಲಕಂಬದ ತುದಿ ಏರಿದರೆ, ಇನ್ನೊಂದೆಡೆ ವಿದ್ಯಾರ್ಥಿನಿಯರು ಹಗ್ಗ ಹಿಡಿದು ಇಪ್ಪತ್ತು ಅಡಿಯಷ್ಟು ಎತ್ತರವನ್ನು ಕಣ್ಣುಮುಚ್ಚಿ ಕಣ್ಣು ಬಿಡುವುದರೊಳಗೆ ಏರಿ ವಿವಿಧ ಆಸನಗಳನ್ನು ತೋರಿಸಿದರು. ಉಸಿರು ಬಿಗಿ ಹಿಡಿದು ಕುಳಿತ ಪೋಷಕರು ತಮ್ಮ ಮಕ್ಕಳ ಸಾಹಸವನ್ನು ನೋಡುತ್ತಿದ್ದರು. ಮಕ್ಕಳು ಸಾಹಸ ಪ್ರದರ್ಶಿಸುವ ವೇಳೆ ರಕ್ಷಣೆಗೆಂದು ಕೆಳಗಡೆ ಬೆಡ್ಗಳನ್ನು ಹಾಕಲಾಗಿತ್ತು. ಆದರೂ, ಮಕ್ಕಳು ಆಯತಪ್ಪಿ ಬಿದ್ದು ಬಿಟ್ಟಾರು ಎನ್ನುವ ಉದ್ವೇಗದಲ್ಲಿ ಕಣ್ಣು ಕೀಲಿಸದೇ ಅವರನ್ನೇ ನೋಡುತ್ತಿದ್ದರು. ಅಲ್ಲಿ ಮಕ್ಕಳು ಪ್ರದರ್ಶಿಸಿದ ವಿವಿಧ ಭಂಗಿಯ ಸಾಹಸ ಮೈನವಿರೇಳಿಸುವಂತಿತ್ತು.

j3tvkannada
ಇಂಥಹ ಕ್ರೀಡೆಗೆ ಸೇರಿಕೊಳ್ಳಲು ಮಕ್ಕಳು ಹಾಗೂ ಸೇರಿಸಲು ಪೋಷಕರು ಹಿಂಜರಿಯುತ್ತಾರೆ. ಆದರೆ, ತುಳಸಿಗೇರಿಯಲ್ಲಿ ಮನೆಗೊಬ್ಬರು ಮಲ್ಲಕಂಬ ಕ್ರೀಡಾಪಟು ಸಿಗುತ್ತಾರೆ. ಗಂಡು, ಹೆಣ್ಣು ಎಂಬ ಭೇದಭಾವ ಇಲ್ಲ. ಕುಸ್ತಿ, ಕಬಡ್ಡಿ, ಸೈಕ್ಲಿಂಗ್ಗೆ ಮಕ್ಕಳನ್ನು ಕಳುಹಿಸುತ್ತಿದ್ದ ಪೋಷಕರು ಈಗ ಮಲ್ಲಕಂಬಕ್ಕೂ ಕಳುಹಿಸುತ್ತಾರೆ.
ಯೋಗಾಸನಗಳನ್ನು ನೆಲದ ಮೇಲೆ ಮಾಡುವುದೇ ಕಷ್ಟ. ಆದರೆ ಇಲ್ಲಿ ಮಕ್ಕಳು ಮಲ್ಲಕಂಬ ಹಾಗೂ ಹಗ್ಗದ ಮೇಲೆ ಪದ್ಮಾಸನ, ಸಂಖ್ಯಾಸನ, ನಟರಾಜಾಸನ, ಪರ್ವತಾಸನ ಸೇರಿದಂತೆ ಹಲವು ಆಸನಗಳನ್ನು ಪ್ರದರ್ಶಿಸುತ್ತಾರೆ. ಒಂದಾದ ಮೇಲೊಂದರಂತೆ ಆಸನಗಳನ್ನು ಪ್ರದರ್ಶಿಸುತ್ತಲೇ ಇರುತ್ತಾರೆ. ಒಂದೇ ಹಗ್ಗದಲ್ಲಿ ನಾಲ್ಕಾರು ಮಕ್ಕಳು ಒಂದೊಂದು ಆಸನ ಮಾಡಿ ಬೆರಗುಗೊಳಿಸುತ್ತಾರೆ.
ಹಾವೇರಿ ಜಿಲ್ಲೆಯ ಲಕ್ಷ್ಮೀಶ್ವರದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಮಲ್ಲಕಂಬ ಸಂಸ್ಥೆ ನಡೆಸುತ್ತಿರುವ ಸಿ.ಪಿ.ಇಡಿ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಚನ್ನಪ್ಪ ಚನ್ನಾಳ, 2003ರಲ್ಲಿ ತುಳಸಿಗೇರಿಯ ಸರ್ಕಾರಿ ಪ್ರೌಢಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ನೇಮಕಗೊಂಡರು. 2004 ರಿಂದ ಇಲ್ಲಿ ಆರಂಭವಾದ ಮಲ್ಲಕಂಬದ ಕ್ರೀಡೆಯ ಸಾಧನೆ ರಾಷ್ಟ್ರದಾದ್ಯಂತ ಹರಡಿಕೊಂಡಿದೆ. ಮಲ್ಲಕಂಬಕ್ಕೆ ವಿಶೇಷ ದೈಹಿಕ ಸಿದ್ಧತೆ ಹೊಂದಿರಬೇಕಾದ ಅವಶ್ಯಕತೆಯಿಲ್ಲ. ಆದರೆ ಮಾನಸಿಕ ದೃಢತೆ ಹೊಂದಿರಬೇಕು. ಏಕೆಂದರೆ ಮಲ್ಲಕಂಬದಲ್ಲಿ ಹತ್ತುವ ಇಳಿಯುವ ಕಸರತ್ತು, ಹಿಂದೆ ಮುಂದೆ ಬಾಗುವುದು ಸೇರಿದಂತೆ ವಿವಿಧ ಭಂಗಿಗಳಿವೆ.

j3tvkannada
ಪ್ರತೀ ವರ್ಷ ಪ್ರಾಥಮಿಕ, ಪ್ರೌಢಶಾಲೆಯ ಮೂವತ್ತರಿಂದ ನಲವತ್ತು ವಿದ್ಯಾರ್ಥಿಗಳು ಮಲ್ಲಕಂಬದ ಕಸರತ್ತಿಗೆ ಮುಂದಾಗುತ್ತಾರೆ. ಶಾಲಾ ಮೈದಾನದಲ್ಲಿ ಮೂರು ಮಲ್ಲಕಂಬಗಳನ್ನು ಸ್ಥಾಪಿಸಲಾಗಿದೆ. ಗ್ರಾಮದಲ್ಲಿ ಐದು ನೂರಕ್ಕೂ ಹೆಚ್ಚು ಮಲ್ಲಕಂಬದ ಕ್ರೀಡಾಪಟುಗಳಿದ್ದಾರೆ. ಗ್ರಾಮದ ಮಕ್ಕಳ ಉಸಿರಿನೊಳಗೆ ಮಲ್ಲಕಂಬ ಸೇರಿಕೊಂಡಿದೆ. ಗ್ರಾಮದ ಹೆಸರನ್ನು ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೆಳಗಿದ್ದಾರೆ. ಮಾರುತಿ ಬಾರಕೇರ ರಾಷ್ಟ್ರ ಮಟ್ಟದಲ್ಲಿ ಆರು ಬಾರಿ ಸ್ಥಾನಗಳಿಸಿದ್ದಾರೆ. ಸುರೇಶ ಲಾಯಣ್ಣವರ, ವಿಜಯ ಶಿರಬೂರ, ಲಕ್ಷ್ಮಣ ಸೊನ್ನದ, ಮಂಜುನಾಥ ಲಾಯಣ್ಣವರ, ಭೀಮಣ್ಣ ಹಡಪದ ಸೇರಿದಂತೆ ಎಪ್ಪತ್ತಕ್ಕೂ ಹೆಚ್ಚು ಕ್ರೀಡಾಪಟುಗಳು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

j3tvkannada
ರಾಜ್ಯಮಟ್ಟದಲ್ಲಿ ಸಮರ್ಥ ಹಡಪದ, ಕಾರ್ತಿಕ ವಾಲೀಕಾರ, ಅನುಪಮಾ ಕೆರಕಲಮಟ್ಟಿ, ರೂಪಾ ಶಿರಬೂರ, ಭರತ ಹಡಪದ, ದೀಪಾ ಶಿರಬೂರ, ಹನಮವ್ವ ಲಾಯಣ್ಣವರ ಸೇರಿದಂತೆ ಹಲವರು ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಇಲ್ಲಿ ಮಲ್ಲಕಂಬ ಕಲಿತ ಹಲವರು ರಾಜ್ಯದ ವಿವಿಧೆಡೆ ಮಲ್ಲಕಂಬ ತರಬೇತುದಾರರಾಗಿದ್ದಾರೆ. ಸಿರಿಗೆರೆ ಮಠ, ಸುತ್ತೂರು ಮಠ, ಕಲಾದಗಿ ಸೇರಿದಂತೆ ಹಲವು ಕಡೆಗಳಲ್ಲಿ ಮಲ್ಲಕಂಬ ತರಬೇತಿ ನೀಡುತ್ತಿದ್ದಾರೆ. ಶಿಕ್ಷಕ ಚನ್ನಾಳ ಅವರು, ತುಳಸಿಗೇರಿಗೆ ತಂದಿದ್ದ ಮಲ್ಲಕಂಬ ಈಗ ಆಲದ ಮರದಂತೆ ವಿಸ್ತಾರವಾಗಿ ಹರಡಿಕೊಂಡಿದೆ. ಅವರ ಮಾರ್ಗದರ್ಶನದಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಉದ್ಯೋಗ ಕಂಡುಕೊಂಡಿದ್ದಾರೆ.
ಮೊದಲು ಮಲ್ಲಕಂಬ ಶಾಲಾ ಕ್ರೀಡಾಕೂಟದಲ್ಲಿ ಸೇರ್ಪಡೆಯಾಗಿರಲಿಲ್ಲ. ಈಗ ಇದನ್ನು ಸೇರಿಸಲಾಗಿದೆ. ಆದ್ದರಿಂದ ರಾಷ್ಟ್ರ ಮಟ್ಟದಲ್ಲಿ ಗೆಲ್ಲುವವರಿಗೆ ಹಲವಾರು ಸೌಲಭ್ಯಗಳು ದೊರೆಯಲಿವೆ. ರಾಷ್ಟ್ರೀಯ ಕ್ರೀಡೆಗಳಲ್ಲಿ ಪ್ರದರ್ಶನಗೊಂಡ ಕ್ರೀಡೆಯಾಗಿದ್ದ ಮಲ್ಲಕಂಬ ಈಗ ಪದಕ ಕ್ರೀಡೆಯಾಗಿದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ತಿಳಿಸಿದೆ.
ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸಿದ್ದಾರೆ. ಅವರಲ್ಲಿ ಕೆಲವರು ರೈಲ್ವೆ ಸೇರಿದಂತೆ ವಿವಿಧೆಡೆ ಕ್ರೀಡಾ ಕೋಟಾದಲ್ಲಿ ಕೆಲಸವನ್ನೂ ಗಿಟ್ಟಿಸಿಕೊಂಡಿದ್ದಾರೆ. ಶಾಲಾ ಕ್ರೀಡಾಕೂಟದಲ್ಲಿ ಇಲ್ಲದ ಕಾರಣ ಮಲ್ಲಕಂಬ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳು ಸಿಗುತ್ತಿರಲಿಲ್ಲ. ಹಾಗಾಗಿ, ಕೆಲವರ ಮನೆಯಲ್ಲಿ ಬೈಯುತ್ತಿದ್ದರು. ಆದರೂ, ವಿದ್ಯಾರ್ಥಿಗಳ ಉತ್ಸಾಹ ಕುಂದಿರಲಿಲ್ಲ. ಎರಡು ದಶಕಗಳಿಂದ ಅಭ್ಯಾಸ ಮಾಡಿಕೊಂಡೇ ಬಂದಿದ್ದಾರೆ. ಈಗ ಶಾಲಾ ಕ್ರೀಡಾಕೂಟದಲ್ಲಿ ಸೇರಿಸಿವುದರಿಂದ ಉದ್ಯೋಗವಕಾಶದ ಬಾಗಿಲು ತೆರೆಯಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿದ್ಯಾರ್ಥಿಗಳು ಅಭ್ಯಾಸಕ್ಕೆ ಸೇರಿದರೆ ಅಚ್ಚರಿಯಿಲ್ಲ. ಬದ್ಧತೆ, ವೃತ್ತಿ ಬಗೆಗೆ ಅಪಾರ ಪ್ರೀತಿ ಮತ್ತು ಗೌರವ ಹೊಂದಿರುವ ದೈಹಿಕ ಶಿಕ್ಷಣ ಶಿಕ್ಷಕ ಮನಸ್ಸು ಮಾಡಿದರೆ ಇಂಥ ಅದ್ಭುತಗಳು ಸಾಧ್ಯವಾಗುತ್ತವೆ ಎನ್ನುವುದಕ್ಕೆ ತುಳಸಿಗೇರಿ ಮಕ್ಕಳ ಸಾಧನೆಯೇ ಸಾಕ್ಷಿಯಾಗಿದೆ.

j3tvkannada
ರಾಜ್ಯದಲ್ಲಿ ಎಲ್ಲಿಯೇ ಹೋಗಿ ತುಳಸಿಗೇರಿ ಶಾಲೆ ಹೆಸರು ಹೇಳುತ್ತಿದ್ದಂತೆಯೇ ‘ಮಲ್ಲಕಂಬ’ ಹೆಸರಿನಲ್ಲಿಯೇ ಗುರುತಿಸುತ್ತಾರೆ. ರಾಜ್ಯ, ರಾಷ್ಟ್ರದ ಯಾವುದೇ ಮೂಲೆಯಲ್ಲಿ ಮಲ್ಲಕಂಬ ಕ್ರೀಡಾಕೂಟ ನಡೆಯಲಿ, ಅಲ್ಲಿ ತುಳಸಿಗೇರಿ ಶಾಲೆಯ ಮಕ್ಕಳು ಇರುತ್ತಾರೆ. ಪದಕದೊಂದಿಗೇ ಮರಳುತ್ತಾರೆ. ಐದು ಬಾರಿ ರಾಷ್ಟ್ರೀಯ ಮಟ್ಟದಲ್ಲಿ, ಖೇಲೋ ಇಂಡಿಯಾದಲ್ಲಿ ಆಡಿದ್ದೇನೆ. ಏಳು ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದೇನೆ. ಮಲ್ಲಕಂಬದಿಂದಾಗಿ ಊರವರು, ಸುತ್ತಲಿನ ಹಳ್ಳಿಯವರು ಗುರುತಿಸುತ್ತಾರೆ. ಆಗ ಹೆಮ್ಮೆ ಅನಿಸುತ್ತದೆ. ಈಗ ಶಾಲಾ ಕ್ರೀಡಾಕೂಟದಲ್ಲಿ ಸೇರ್ಪಡೆ ಮಾಡಿರುವುದರಿಂದ ಉದ್ಯೋಗಕ್ಕೂ ಅನುಕೂಲವಾಗಲಿದೆ’ ಎಂದು ಕ್ರೀಡಾಪಟು ಇಂದಿರಾ ಎಸ್. ಅನುಭವ ಹಂಚಿಕೊಂಡರು.