
ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಂಸಿಡಿಸಿಸಿ) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಜೂನ್ 15ಕ್ಕೆ ನಿಗದಿಯಾಗಿದೆ. ಮಾಸಾಂತ್ಯಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

j3tvkannada
ಕರಡು ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಒಟ್ಟು 78 ಆಕ್ಷೇಪಣೆಗಳು ಬಂದಿದ್ದವು. ಇದೇ 16ರಂದು ನಡೆದ ಸಭೆಯಲ್ಲಿ ಅವುಗಳನ್ನು ಪರಿಶೀಲಿಸಿ ಸಮಜಾಯಿಷಿ ನೀಡಲಾಗಿದೆ. ಉಳಿದ 32 ಆಕ್ಷೇಪಣೆಗಳನ್ನು ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದ್ದು, ಇದೇ 23ರಂದು ವಿಚಾರಣೆ ನಡೆಯಲಿದೆ. ಸಹಕಾರ ಸಂಘಗಳು ಮತದಾರರನ್ನಾಗಿ ‘ಡೆಲಿಗೇಟ್‘ (ಪ್ರತಿನಿಧಿ) ಎಂದು ಗುರುತಿಸಿವೆಯೋ ಆ ಮಾಹಿತಿ ಸಹಿತ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ.
ಈ ಚುನಾವಣೆಗೆ ‘ಪ್ರತಿನಿಧಿ’ಯಾಗಲು ಸಹಕಾರ ಬ್ಯಾಂಕ್ಗಳ ಮಟ್ಟದಲ್ಲಿ ತೀವ್ರ ಪೈಪೋಟಿ ಕಂಡು ಬಂದಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ನಲ್ಲಿ ಸದಸ್ಯತ್ವ ಪಡೆದುಕೊಳ್ಳಲು ಪ್ರಮುಖರು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ. ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷಗಳ ಮುಖಂಡರು ಸ್ಪರ್ಧೆಗೆ ಒಲವು ತೋರುತ್ತಿದ್ದಾರೆ. ಸಂಘಗಳಿಂದ ‘ಡೆಲಿಗೇಟ್’ ಆದವರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇರುತ್ತದೆ. ಈ ಹಿಂದಿನ ಅಧ್ಯಕ್ಷ ಜಿ.ಡಿ. ಹರೀಶ್ಗೌಡ ಮತ್ತೊಮ್ಮೆ ಸ್ಪರ್ಧಿಸಲು ಬಯಸಿದ್ದಾರೆ. ಜೆ.ಡಿ.ಎಸ್.ನ ಜಿ.ಟಿ. ದೇವೇಗೌಡ ಹಾಗೂ ಜಿ.ಡಿ.ಹರೀಶ್ಗೌಡ ಪ್ರಾಬಲ್ಯ ತಪ್ಪಿಸಲು ಕಾಂಗ್ರೆಸ್ ಕೂಡ ಕಾರ್ಯತಂತ್ರ ರೂಪಿಸುತ್ತಿದೆ. ಹೀಗಾಗಿ, ಚುನಾವಣೆಯಲ್ಲಿ ತೀವ್ರ ಪೈಪೋಟಿ ಕಂಡು ಬರುವ ನಿರೀಕ್ಷೆ ಇದೆ.
ಹಕ್ಕು ಚಲಾಯಿಸಬಹುದು: ಒಟ್ಟು 1,100 ಮಂದಿಗೆ ಮತದಾನದ ಹಕ್ಕು ದೊರೆಯಬಹುದು ಎಂದು ಅಂದಾಜಿಸಲಾಗಿದೆ. ಸಹಕಾರ ಸಂಘಗಳು ತಮ್ಮ ಪ್ರತಿನಿಧಿಯಾಗಿ ಡೆಲಿಗೇಟ್ ಮಾಡುವವರು ನಿರ್ದೇಶಕರು, ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ. ಅವರಿಗೆ ಮತದಾನದ ಹಕ್ಕೂ ಇರುತ್ತದೆ. ನಿರ್ದೇಶಕರ ಚುನಾವಣೆಯಲ್ಲಿ ಅವರು ಹಕ್ಕು ಚಲಾಯಿಸಬಹುದಾಗಿದೆ. ಸಹಕಾರ ಸಂಘಗಳು ‘ಡೆಲಿಗೇಟ್ ಫಾರಂ’ ಸಲ್ಲಿಸಲು ಏ.20 ಕೊನೆಯ ದಿನವಾಗಿದೆ. ಡೆಲಿಗೇಟ್ ಅರ್ಜಿ ನಮೂನೆಗಳನ್ನು ಬ್ಯಾಂಕ್ಗೆ ಸಲ್ಲಿಸಿ ಮಾಹಿತಿ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅಧ್ಯಕ್ಷರ ಚುನಾವಣೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಬ್ಯಾಂಕ್ ಹೈಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದೆ.