
ಶಿವಮೊಗ್ಗ: ‘ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಆರೋಪ ಪಟ್ಟಿಯಲ್ಲಿ ಎಐಸಿಸಿ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಹೆಸರು ಸೇರಿಸುವುದರ ವಿರುದ್ಧ ಕಾಂಗ್ರೆಸ್ ಕಾನೂನು ಹೋರಾಟ ಮಾಡಲಿ. ಅದನ್ನು ಬಿಟ್ಟು ಕೇಂದ್ರ ಸರ್ಕಾರದ ವಿರುದ್ಧ ಗೂಬೆ ಕೂರಿಸುವುದು ಸರಿಯಲ್ಲ’ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

j3tvkannada
ಇ.ಡಿ ಎಫ್ಐಆರ್ ದಾಖಲಿಸಿದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸಂಸದ ಬಿ.ವೈ.ರಾಘವೇಂದ್ರ ಮನೆಗೆ ಮತ್ತು ಅಂಚೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿರುವುದನ್ನು ವಿರೋಧಿಸಿ ಶುಕ್ರವಾರ ಇಲ್ಲಿನ ಶಿವಪ್ಪ ನಾಯಕ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಸೋನಿಯಾ ಗಾಂಧಿ ಮತ್ತು ರಾಹುಲ್ಗಾಂಧಿ ಅವರ ಪ್ರತಿಕೃತಿ ದಹಿಸಲಾಯಿತು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಹಗರಣ, ಕಾಂಗ್ರೆಸ್ ದೇಶಕ್ಕೆ ಮಾಡಿದ ದ್ರೋಹ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶದ ಜನತೆ ಕಾಂಗ್ರೆಸ್ ಪಕ್ಷವನ್ನು ನಂಬಿ ಮತ್ತು ಪತ್ರಿಕಾ ಸ್ವಾತಂತ್ರ್ಯದ ಬಗೆಯ ವಿಶ್ವಾಸದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಹೂಡಿಕೆ ಮಾಡಿದರು. ಆದರೆ ಆ ಹಣವನ್ನು ಕಾಂಗ್ರೆಸ್ ಪಕ್ಷ ತನ್ನದೇ ಕುಟುಂಬದ ಚಾರಿಟೆಬಲ್ ಟ್ರಸ್ಟ್ಗೆ ವರ್ಗಾಯಿಸಿ ದೇಶಕ್ಕೆ ವಿಶ್ವಾಸದ್ರೋಹ ಮಾಡಿದೆ. ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಾರದು ಎಂಬುದು ಸಂವಿಧಾನ ವಿರೋಧಿ ಧೋರಣೆ’ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರಶಾಂತ್ ಕುಕ್ಕೆ ಹೇಳಿದರು. ‘ಕಾಂಗ್ರೆಸ್ನವರು ಒಂದು ವರ್ಗದ ಓಲೈಕೆಗಾಗಿ ದೇಶವನ್ನೇ ಭ್ರಷ್ಟಚಾರದ ಕೂಪವಾಗಿಸಿದರು. ಈಗ ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ದೇಶದ ಜನತೆ ನೀಡಿದ ಹಣವನ್ನು ಭ್ರಷ್ಟಾಚಾರದಿಂದ ನುಂಗಿದ್ದಾರೆ. ಮೊದಲು ಅವರು ಜನತೆಯ ಕ್ಷಮೆ ಕೇಳಬೇಕು’ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು. ‘ಕರ್ನಾಟಕದ ಕಾಂಗ್ರೆಸ್ಸಿಗರು ಪಕ್ಷದ ಕೇಂದ್ರೀಯ ನಾಯಕರ ಗುಲಾಮರಾಗಿದ್ದಾರೆ. ಒಂದು ಕುಟುಂಬದ ಚಾಕರಿಗೆ ನಿಂತಿದ್ದಾರೆ. ಸತ್ಯವನ್ನು ತಿಳಿಯುವ ಗೋಜಿಗೂ ಕಾಂಗ್ರೆಸ್ ಕಾರ್ಯಕರ್ತರು ಹೋಗುವುದಿಲ್ಲ. ಪೋಟೋ ಹಿಡಿದು ಹೋರಾಟ ಮಾಡಿದ ತಕ್ಷಣ ಬಿಜೆಪಿ ಕಾರ್ಯಕರ್ತರು ಬೆದರುವುದಿಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಬಿ.ಹರಿಕೃಷ್ಣ ತಿಳಿಸಿದರು.