
ಉಡುಪಿ: ತಾಲ್ಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯಲು, ಬಟ್ಟೆ ತೊಳೆಯಲು, ಸ್ವಚ್ಛತೆ, ಕೃಷಿ, ಜಾನುವಾರು ಸೇರಿದಂತೆ ಜನರ ನಿತ್ಯ ಅಗತ್ಯಕ್ಕೆ ಬೇಕಾಗುವ ಹನಿ ನೀರಿಗೂ ದುಸ್ತರ ಎನ್ನುವ ಸ್ಥಿತಿ ಎದುರಾಗಿದೆ.

j3tvkannada
ತಾಲ್ಲೂಕಿನ ತ್ರಾಸಿ, ವಂಡ್ರೆ, ಕೊರ್ಗಿ, ಕಟ್ಬೇಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ಕುಡಿಯುವ ನೀರು ವಿತರಿಸಲಾಗುತ್ತಿದೆ. ‘ನಮ್ಮೂರಿಗೂ ಟ್ಯಾಂಕರ್ ನೀರು ಬೇಕು’ ಎನ್ನುವವರ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ.
ಕಳೆದ ಬಾರಿ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಕುಂದಾಪುರ ಸೇರ್ಪಡೆಯಾಗಿರಲಿಲ್ಲ. ಈ ಕಾರಣದಿಂದ ವಿಶೇಷ ಅನುದಾನ ಬಂದಿರಲಿಲ್ಲ. ಕುಂದಾಪುರ ಹಾಗೂ ಬೈಂದೂರಿನ ಶಾಸಕರು ಈ ಕುರಿತು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು, ಪ್ರಯೋಜನವಾಗಿರಲಿಲ್ಲ. ಒಟ್ಟು 756 ಮನೆಗಳ 3,814 ಸದಸ್ಯರಿಗೆ 2,305 ಟ್ರಿಪ್ಗಳಲ್ಲಿ ಟ್ಯಾಂಕರ್ ನೀರು ವಿತರಿಸಲಾಗಿದೆ. ಸದ್ಯ ಕಳೆದ ಬಾರಿಯ ಪಟ್ಟಿಯ ಆಧಾರದಲ್ಲಿಯೇ ಯೋಜನೆಗಳು ಕಾರ್ಯಗತವಾಗುತ್ತಿವೆ. ಈ ಬಾರಿಯೂ ತಾಲ್ಲೂಕಿಗೆ ವಿಶೇಷ ಅನುದಾನ ಬಂದಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ತ್ರಾಸಿ, ನಾಯಕವಾಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವರ್ಷಪೂರ್ತಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೂ, ಪರಿಹಾರಕ್ಕೆ ಯಾವ ಕಾರ್ಯವೂ ನಡೆದಿಲ್ಲ. ತಾಲ್ಲೂಕಿನ ಹಲವೆಡೆ ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗಳು ನಡೆಯುತ್ತಿದ್ದರೂ, ಇದರ ಉಪಯೋಗ ಕ್ಷೇತ್ರದ ಜನರಿಗೆ ಲಭಿಸಿಲ್ಲ. ಕುಂದಾಪುರ ಹಾಗೂ ಬೈಂದೂರು ಕ್ಷೇತ್ರದ ನೀರಿನ ಸಮಸ್ಯೆಗೆ ವರಾಹಿ ಯೋಜನೆ ವರದಾನವಾಗುತ್ತದೆ ಎಂದು ನಂಬಿದ್ದ ಜನರಿಗೆ, ಯೋಜನೆ ಗಗನ ಕುಸುಮವಾಗುತ್ತಿದೆ. ಗ್ರಾಮ ಪಂಚಾಯಿತಿ ಸರಬರಾಜು ಮಾಡುವ ನೀರು, ಬೇಡಿಕೆಗೆ ಅನುಗುಣವಾಗಿ ದೊರಕದೆ ಇದ್ದಾಗ ಸ್ವಂತ ಹಣ ನೀಡಿ ಖಾಸಗಿಯವರಿಂದ ನೀರು ಖರೀದಿ ಮಾಡುವ ಅನಿವಾರ್ಯತೆಗೆ ಜನರು ಒಗ್ಗಿ ಹೋಗಿದ್ದಾರೆ. 1 ಸಾವಿರ ಲೀ.ಗೆ ₹450 ರಂತೆ ಪಾವತಿಸಿ ಟ್ಯಾಂಕರ್ ಮೂಲಕ ನೀರು ತರಿಸುತ್ತಾರೆ.