
ಕೊಡಗು: ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದ ವೃಷಭಾರೂಢ ಭಗವತಿ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

j3tvkannada
ಒಂದು ವಾರ ನಡೆದ ಉತ್ಸವದ ಅಂಗವಾಗಿ ಶನಿವಾರ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಯಿತು. ಭಕ್ತರು ದೇವಿಗೆ ಹರಕೆ, ಪೂಜೆ ಸಲ್ಲಿಸಿದರು. ಬಳಿಕ ಭಕ್ತರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಉತ್ಸವದ ಅಂಗವಾಗಿ ಆಶ್ಲೇಷ ಬಲಿ, ಕಲಶಾಭಿಷೇಕ, ಮಹಾಪೂಜೆಯ ಬಳಿಕ ಬೇಟೆ ಅಯ್ಯಪ್ಪ ಕೋಲದೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು.
ವಾರ್ಷಿಕ ಉತ್ಸವಕ್ಕೆ ಮುನ್ನ ಗ್ರಾಮಸ್ಥರು ಭಗವತಿ ಸನ್ನಿಧಿಯಿಂದ ಹೊರಟು ಬೊಟ್ಲಪ್ಪ ಸಾನಿಧ್ಯದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಭಕ್ತರ ಸಾಮೂಹಿಕ ಪ್ರಾರ್ಥನೆಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ಧ್ವಜಾರೋಹಣ, ಪರಿವಾರ ದೇವತಾ ಬಲಿ, ವಸಂತಪೂಜೆ, ಏಕಾದಶ ರುದ್ರಪಠಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಊರಿನ ತಕ್ಕ ಮುಖ್ಯಸ್ಥರು, ದೇವಾಲಯದ ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.