
ರಾಮನಗರ: ನಗರದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ತಾಲ್ಲೂಕಿನ ಹರಿಸಂದ್ರದಲ್ಲಿ ಗುರುತಿಸಿರುವ ಜಾಗದಲ್ಲಿ ರಾಮನಗರ ನಗರಸಭೆ ಮತ್ತು ಬಿಡದಿ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಗೆ ನಗರಸಭೆ ಮತ್ತು ಪುರಸಭೆ ಅಧಿಕಾರಿಗಳು, ಪೊಲೀಸ್ ಬಂದೋಬಸ್ತ್ನೊಂದಿಗೆ ಚಾಲನೆ ನೀಡಿದರು.

j3tvkannada
ಯಾವುದೇ ಮುನ್ಸೂಚನೆ ಇಲ್ಲದೆ ಬೆಳಿಗ್ಗೆ ಅಧಿಕಾರಿಗಳು 100ಕ್ಕೂ ಹೆಚ್ಚು ಪೊಲೀಸರು ಹಾಗೂ 5 ಜೆ.ಸಿ.ಬಿ.ಗಳೊಂದಿಗೆ ಘಟಕದ ಸ್ಥಳಕ್ಕೆ ಬಂದರು. ಸ್ಥಳೀಯರು ಕಾಮಗಾರಿಗೆ ಅಡ್ಡಿಪಡಿಸದಂತೆ ಪೊಲೀಸರು ಅಲ್ಲಲ್ಲಿ ನಾಕಾಬಂದಿ ಹಾಕಿ ಕಾವಲು ನಿಂತರು. ಜೆ.ಸಿ.ಬಿ ಮೂಲಕ ಸ್ಥಳವನ್ನು ಸಮತಟ್ಟುಗೊಳಿಸುವ ಕೆಲಸ ಶುರುವಾಯಿತು. ಪೊಲೀಸ್ ಭದ್ರತೆಯಲ್ಲಿ ಘಟಕದ ಕಾಮಗಾರಿ ನಡೆಯುತ್ತಿರುವ ವಿಷಯ ತಿಳಿಯುತ್ತಿದ್ದಂತೆ, ಮಹಿಳೆಯರು ಸೇರಿದಂತೆ ಸ್ಥಳೀಯರು ಸ್ಥಳಕ್ಕೆ ಬಂದು ಕಾಮಗಾರಿಗೆ ಅಡ್ಡಿಪಡಿಸಲು ಯತ್ನಿಸಿದರು. ಆಗ ಪೊಲೀಸರು ಅವರನ್ನು ತಡೆದರು. ಸ್ಥಳದಲ್ಲೇ ಪ್ರತಿಭಟನೆ ಆರಂಭಿಸಿದ ಸ್ಥಳೀಯರು ಮನವೊಲಿಕೆಗೆ ಬಗ್ಗದಿದ್ದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದು, ನಂತರ ಬಿಟ್ಟು ಕಳಿಸಿದರು.
ಗ್ರಾಮದಲ್ಲಿ ತಲಾ 9 ಎಕರೆ ಜಾಗದಲ್ಲಿ ನಗರಸಭೆ ಮತ್ತು ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸ್ಥಳ ನಿಗದಿಪಡಿಸಲಾಗಿದೆ. ಕಳೆದ ಮಾರ್ಚ್ 5ರಂದು ಸ್ಥಳದಲ್ಲಿ ಶಾಸಕ ಎಚ್.ಎ. ಇಕ್ಸಾಲ್ ಹುಸೇನ್ ನೇತೃತ್ವದಲ್ಲಿ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮ ನಿಗದಿಯಾಗಿತ್ತು. ವಿಷಯ ತಿಳಿದ ಸ್ಥಳೀಯರು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಘಟಕ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಶಾಸಕರನ್ನು ಮುತ್ತಿಕೊಂಡು ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿ, ಭೂಮಿ ಪೂಜೆಗೆ ಅಡ್ಡಿಪಡಿಸಿದ್ದರು. ಪ್ರತಿಭಟನಾಕಾರರು ಮನವೊಲಿಕೆಗೆ ಬಗ್ಗಿದ್ದರಿಂದ ಶಾಸಕರು ಕಾರ್ಯಕ್ರಮ ರದ್ದುಪಡಿಸಿ ಹಿಂದಿರುಗಿದ್ದರು. ಹಿಂದಿನ ಕಹಿ ಘಟನೆಯಿಂದಾಗಿ ಈ ಸಲ ಕಾಮಗಾರಿಗೆ ಚಾಲನೆ ನೀಡುವ ವಿಷಯವನ್ನು ಬಹಿರಂಗಪಡಿಸದೆ ಅಧಿಕಾರಿಗಳ ತಂಡವೇ, ಪೊಲೀಸ್ ಬಂದೋಬಸ್ತ್ನಲ್ಲಿ ಜೆ ಸಿ ಬಿ ಸೇರಿದಂತೆ ಇತರ ವಾಹನಗಳನ್ನು ಕರೆಯಿಸಿ ಜಾಗವನ್ನು ಸಮತಟ್ಟುಗೊಳಿಸಿದರು.