
ಶಿವಮೊಗ್ಗ: ಅರಣ್ಯ ಪ್ರದೇಶದಲ್ಲಿನ ಸರ್ಕಾರಿ ಶಾಲೆಗಳಿಗೆ ಆಟದ ಮೈದಾನ ಸೇರಿ ಅಗತ್ಯವಿರುವ ಜಾಗವನ್ನು ಮಂಜೂರು ಮಾಡುವಂತೆ ಅರಣ್ಯ ಇಲಾಖೆಗೆ ಶಿಕ್ಷಣ ಇಲಾಖೆ ನೀಡಿದ್ದ ಸಾಕಷ್ಟು ಅರ್ಜಿಗಳಿಗೆ ಹಲವು ವರ್ಷ ತುಂಬಿದರೂ ಮಂಜೂರಾತಿ ಭಾಗ್ಯ ದೊರತಿಲ್ಲ. ಇದರಿಂದ ಶಾಲೆಗಳ ಅಭಿವೃದ್ಧಿಗೆ ತೊಡಕಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

j3tvkannada
ತಾಲೂಕಿನ ಅನೇಕ ಸರ್ಕಾರಿ ಶಾಲೆಗಳು ದಶಕಗಳಿಂದ ಅರಣ್ಯ ಭೂಮಿಯಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಶಾಲೆಗಳ ಅಭಿವೃದ್ಧಿ, ಶಾಲಾ ಆಟದ ಮೈದಾನ ಅಭಿವೃದ್ಧಿ, ರಂಗಮಂದಿರ ನಿರ್ಮಾಣ ವಿಚಾರದಲ್ಲಿ ಶಾಲೆಗಳು ಸ್ಥಳಾವಕಾಶ ಸಮಸ್ಯೆ ಎದುರಿಸುತ್ತಿವೆ. ಅರಣ್ಯ ಇಲಾಖೆಗೆ ಜಾಗ ಮಂಜೂರು ಮಾಡುವಂತೆ ಶಾಲಾ ಶಿಕ್ಷಣ ಮತ್ತು ಸುಕ್ಷರತಾ ಇಲಾಖೆಯಿಂದ ಅರ್ಜಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ.
ತಾಲೂಕಿನಲ್ಲಿ ಒಟ್ಟು 323 ಸರ್ಕಾರಿ ಶಾಲೆಗಳಿದ್ದು, 178 ಕಿರಿಯ ಪ್ರಾಥಮಿಕ, 127 ಹಿರಿಯ ಪ್ರಾಥಮಿಕ ಹಾಗೂ 18 ಪ್ರೌಢಶಾಲೆಗಳಿವೆ. ಈ ಪೈಕಿ ಕಿರಿಯ, ಹಿರಿಯ ಹಾಗೂ ಪ್ರೌಢ ಸೇರಿದಂತೆ 47 ಶಾಲೆಗಳು ಅರಣ್ಯ ಭೂಮಿಯಲ್ಲಿವೆ. ಅರಣ್ಯ ಭೂಮಿಯಲ್ಲಿರುವ ಶಾಲೆಗಳ ಸಮಗ್ರ ಪಟ್ಟಿ ಸಿದ್ದಪಡಿಸಿ, ಅವುಗಳಿರುವ ಸರ್ವೆ ನಂಬರ್, ಮಂಜೂರು ಮಾಡಬೇಕಾದ ಜಾಗದ ವಿಸ್ತೀರ್ಣ ಎಲ್ಲವನ್ನೂ ಒಳಗೊಂಡ ಮಾಹಿತಿಯನ್ನು ಅರಣ್ಯ ಇಲಾಖೆಗೆ ಸಲ್ಲಿಸಲಾಗಿದೆ. ಆದರೆ ಯಾವ ಶಾಲೆಗೂ ಜಾಗದ ಮಂಜೂರಾತಿ ನೀಡಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.
ಕೆಲವು ಶಾಲೆಯ ಸುತ್ತಮುತ್ತ ಮರಗಳಿವೆ. ಅವುಗಳನ್ನು ಕತ್ತರಿಸಿ ವಿದ್ಯಾರ್ಥಿಗಳಿಗೆ ಆಟದ ಮೈದಾನ ನಿರ್ಮಾಣ ಮಾಡುವ ಉದ್ದೇಶ ಸಮಿತಿಯದಾಗಿತ್ತು. ಆದರೆ ಅರಣ್ಯಕ್ಕೆ ಸೇರಿದ ಜಾಗ ಎಂಬ ಒಂದೇ ಕಾರಣಕ್ಕೆ ಅನುಮತಿ ಸಿಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಕ್ರೀಡಾ, ಸಾಂಸ್ಕೃತಿಕ ಪ್ರಗತಿಗೆ ತೊಡಕಾಗುತ್ತಿದೆ ಎಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಾಲತೇಶಯ್ಯ ತಿಳಿಸಿದರು. ಶಾಲೆಗಳಿಗೆ ಜಾಗ ಮಂಜೂರು ಮಾಡುವಂತೆ ಶಿಕ್ಷಣ ಇಲಾಖೆಯಿಂದ ಅರ್ಜಿ ನೀಡಲಾಗಿದೆ. ಅರಣ್ಯ ಇಲಾಖೆಗೆ ಒಳಪಡುವ ಜಾಗವನ್ನು ಮಂಜೂರು ಮಾಡಲು ಕೇಂದ್ರ ಸರ್ಕಾರದ ಸೂಚನೆ ಅಗತ್ಯ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.