
ಮೈಸೂರು:‘ಕೊಲೆಯಾಗಿದ್ದಾರೆ ಎಂದು ಸುದ್ದಿಯಾಗಿದ್ದ ಮಹಿಳೆಯು ಜೀವಂತವಾಗಿ, ಕೊಲೆ ಆರೋಪಿ ನಿರಪರಾಧಿಯಾಗಿ ಹಾಗೂ ಆರೋಪ ಹೊರಿಸಿದ್ದ ಪೊಲೀಸರೇ ಆರೋಪಿಗಳಾಗಿ ತಲೆತಗ್ಗಿಸಿ ಕಟಕಟೆಯ ಮುಂದೆ ನಿಂತು ವಿಚಾರಣೆ ಎದುರಿಸಿದ ಅಪರೂಪದ ಸನ್ನಿವೇಶಕ್ಕೆ ಇಲ್ಲಿನ 5ನೇ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ಸಾಕ್ಷಿಯಾಯಿತು.

j3tvkannada
ಮಹಿಳೆ ಮಲ್ಲಿಗೆ ಪತ್ತೆಯಾದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಧೀಶ ಗುರುರಾಜ್ ಸೋಮಕ್ಕಳವರ್ ಅವರು ಪೊಲೀಸರ ಕರ್ತವ್ಯ ಲೋಪವನ್ನು ಎತ್ತಿಹಿಡಿದು, ಕಟುಮಾತುಗಳಿಂದ ಖಂಡಿಸಿದರು. ಎರಡು ಗಂಟೆಗಳ ಕಾಲ ವಾದ ಆಲಿಸಿ ಏ. 23ಕ್ಕೆ ಆದೇಶ ಕಾಯ್ದಿರಿಸಿ, ವಿಚಾರಣೆ ಮುಂದೂಡಿದರು. ಕೊಲೆ ಆರೋಪಿ ಸುರೇಶ್ ನಿರಪರಾಧಿಯಾಗಿದ್ದು, ಆತನನ್ನು ಗೌರವಯುತವಾಗಿ ಬಿಡುಗಡೆ ಮಾಡಬೇಕು. ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಸೂಕ್ತ ಪರಿಹಾರ ದೊರಕಿಸಬೇಕು ಎಂದು ಸರ್ಕಾರಿ ಅಭಿಯೋಜಕ ಬಿ.ಇ.ಯೋಗೇಶ್ವರ್ ಅವರೇ ಕೋರಿದರು. ತನಿಖಾಧಿಕಾರಿಗೆ ತರಾಟೆ: ಮಹಿಳೆ ಪತ್ತೆಯಾದ ಬಳಿಕ, ಪ್ರಕರಣದ ಬಗ್ಗೆ ವಿವರಣೆ ನೀಡುವಂತೆ ಎಸ್.ಪಿ ಎನ್.ವಿಷ್ಣುವರ್ಧನ್ ಅವರಿಗೆ ನ್ಯಾಯಾಲಯವು ಸೂಚಿಸಿತ್ತು. ಅವರ ಪರವಾಗಿ ಬೈಲಕುಪ್ಪೆ ಸಿ.ಪಿ.ಐ ದೀಪಕ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು.
ವರದಿಯಲ್ಲಿ ತನಿಖಾಧಿಕಾರಿ ತಾವು ಹಿಂದೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ಸಮರ್ಥಿಸಿಕೊಂಡಿದ್ದರು. ಈ ಬಗ್ಗೆ ನ್ಯಾಯಾಧೀಶರು ತನಿಖಾಧಿಕಾರಿಗಳಾದ ಅಂದಿನ ಬೈಲಕುಪ್ಪೆ ಸರ್ಕಲ್ ಇನ್ಸ್ಪೆಕ್ಟರ್ ಬಿ.ಜಿ.ಪ್ರಕಾಶ್, ಬೆಟ್ಟದಪುರ ಪಿ.ಎಸ್.ಐ ಮಹೇಶ್ ಕುಮಾರ್, ಎಸ್.ಐ ಪ್ರಕಾಶ್ ಎತ್ತಿಮನಿ ಅವರನ್ನು ತರಾಟೆಗೆ ತೆಗೆದುಕೊಂಡರು ಎಂದು ಆರೋಪಿ ಪರ ವಕೀಲ ಪಾಂಡು ಪೂಜಾರಿ ತಿಳಿಸಿದರು.
ನೀವು ಸಲ್ಲಿಸಿರುವ ದೋಷಾರೋಪ ಪಟ್ಟಿ ಸುಳ್ಳೆಂದು ಸಾಬೀತಾಗಿದೆ. ಮಲ್ಲಿಗೆ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಾದ 25 ದಿನಗಳಲ್ಲಿ ಕೊಳೆತ ಮೃತದೇಹ ಪತ್ತೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದೀರಿ. ಅಷ್ಟು ಬೇಗ ದೇಹ ಕೊಳೆತು ಹೋಗಲು ಹೇಗೆ ಸಾಧ್ಯ? ಸ್ಥಳಕ್ಕೆ ತೆರಳಿ ತನಿಖೆ ನಡೆಸಿದವರು ಯಾರು? ದೋಷಾರೋಪ ಪಟ್ಟಿಯು ಕೆಳ ಹಂತದ ಸಿಬ್ಬಂದಿ ತನಿಖೆ ನಡೆಸಿ ಬರೆದಂತಿದೆ. ಅಷ್ಟೊಂದು ಶೀಘ್ರವಾಗಿ ತನಿಖೆ ಮುಗಿಸುವ ಒತ್ತಡ ಏನಿತ್ತು ಎಂದು ನ್ಯಾಯಾಧೀಶರು ಅಸಹನೆ ವ್ಯಕ್ತಪಡಿಸಿದರು. ಮೃತದೇಹವನ್ನು ಕಾಡು ಪ್ರಾಣಿಗಳು ತಿಂದಿದ್ದವೆಂದು ವರದಿಯಲ್ಲಿದೆ. ಆದರೆ ಅಲ್ಲಿ ವಶಕ್ಕೆ ಪಡೆದಿರುವ ಬಟ್ಟೆಗಳಲ್ಲಿ ಅಂಥ ಕುರುಹಿಲ್ಲ. ದೋಷಾರೋಪ ಪಟ್ಟಿಯಲ್ಲಿರುವ ಘಟನೆಗಳಿಗೆ ಮತ್ತು ಸಾಕ್ಷಿಗಳಿಗೆ ಏನು ಆಧಾರ ಎಂದು ಪ್ರಶ್ನಿಸಿದರು. ಈ ವೇಳೆ ಪೊಲೀಸ್ ಅಧಿಕಾರಿಗಳು ಮೌನವಾಗಿದ್ದರು. ಮಲ್ಲಿಗೆಯ ತಾಯಿ ಗೌರಿ ನೀಡಿದ ದೂರು ಆಧರಿಸಿ ತನಿಖೆ ಮುಂದುವರಿಸಿದ್ದೇವೆ ಎಂದಷ್ಟೇ ಹೇಳಿದರು ಎಂದು ಮಾಹಿತಿ ನೀಡಿದರು.
ಯಾವುದೋ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ಹಾಡಿ ಜನರನ್ನು ಗುರಿ ಮಾಡಿದ್ದಾರೆ. ಅಧಿಕಾರಿಗಳ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಬೇಕು. ನನ್ನ ಕಕ್ಷಿದಾರರು ತಮಗಾದ ಅವಮಾನದಿಂದ ಊರಿನವರಿಗೆ ಮುಖ ತೋರಿಸಲಾಗದೆ ಬೆಳಿಗ್ಗೆ ಮನೆ ಬಿಟ್ಟು ರಾತ್ರಿ ಮನೆ ಸೇರುತ್ತಿದ್ದರು. ಅವರ ಮಕ್ಕಳಿಗೂ ತೊಂದರೆಯಾಗಿದೆ. ನ್ಯಾಯಾಲಯವು ಇದನ್ನು ಪರಿಗಣಿಸಬೇಕು ಎಂದು ವಿನಂತಿಸಿದ್ದೇನೆ ಎಂದು ತಿಳಿಸಿದರು. ನಾಲ್ಕು ವರ್ಷದ ಹಿಂದೆ, ಮಲ್ಲಿಗೆಯನ್ನು ಆಕೆಯ ಗಂಡ ಸುರೇಶ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಬೆಟ್ಟದಪುರ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು ಆರೋಪಿಗೆ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಜಾಮೀನಿನ ಮೂಲಕ ಬಿಡುಗಡೆಗೊಂಡಿದ್ದರು. ಏ.1ರಂದು ಮಲ್ಲಿಗೆಯು ತನ್ನ ಪ್ರಿಯತಮ ಗಣೇಶ್ನೊಂದಿಗೆ ಪತ್ತೆಯಾದ ಬಳಿಕ ಪ್ರಕರಣಕ್ಕೆ ಅನಿರೀಕ್ಷಿತ ತಿರುವು ಸಿಕ್ಕಿತ್ತು.