
ಚಿತ್ರದುರ್ಗ: ಇಂದಿಗೂ ಕಂದಾಯ ಇಲಾಖೆ ದಾಖಲೆಗಳಲ್ಲಿ ‘ಗಂಜಿಗಟ್ಟೆ’ ಎಂದೇ ದಾಖಲಾಗಿರುವ ತಾಲೂಕಿನ ಗಾಂಧಿನಗರ ಗ್ರಾಮದ ಜನರು ಶಿವರಾತ್ರಿ ಹಬ್ಬದಿಂದಲೂ ನೀರಿಗಾಗಿ ಪರದಾಡುತ್ತಿದ್ದಾರೆ. ಅಂದಾಜು 200 ಮನೆಗಳನ್ನು ಹೊಂದಿರುವ ಗಂಜಿಗಟ್ಟೆ ಗ್ರಾಮದ ಜನಸಂಖ್ಯೆ 1,000ದಷ್ಟಿದೆ. ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಗೆಂದು 8ರಿಂದ 10 ಕೊಳವೆಬಾವಿ ಕೊರೆಯಿಸಿದ್ದು, ಪ್ರಸ್ತುತ 7 ಕೊಳವೆಬಾವಿಗಳಲ್ಲಿ ಮಾತ್ರ ಸ್ವಲ್ಪ ಹೊತ್ತು ನೀರು ಬರುತ್ತದೆ. 50,000 ಲೀಟರ್ ಸಂಗ್ರಹ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ತುಂಬುವುದೇ ಅಪರೂಪ ಎಂಬಂತಾಗಿದೆ. ಊರಿನ ಎರಡು ಭಾಗದಲ್ಲಿರುವ ಮನೆಗಳಿಗೆ ದಿನ ಬಿಟ್ಟು ದಿನ ನೀರು ಬಿಡಲಾಗುತ್ತದೆ. ಗ್ರಾಮ ಪಂಚಾಯಿತಿಯಿಂದ ಬಿಡುವ ನೀರು ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ’ ಎಂದು ಗ್ರಾಮಸ್ಥರು ಹೇಳುತ್ತಾರೆ.

j3tvkannada
ಶುದ್ಧ ಕುಡಿಯುವ ನೀರು ಪೂರೈಕೆಗೆಂದು ಸ್ಥಾಪಿಸಿದ್ದ ಘಟಕ ಕೆಟ್ಟು ಹೋಗಿ ಗ್ರಾಮಸ್ಥರು ಬಟ್ಟೆ ಒಣಗಿಸುವ ತಾಣವನ್ನಾಗಿ ಮಾಡಿಕೊಂಡಿದ್ದರ ಬಗ್ಗೆ ವರ್ಷದ ಹಿಂದೆ ವರದಿ ಮಾಡಿತ್ತು. ನಂತರ ಎಚ್ಚೆತ್ತ ತಾಲೂಕು ಆಡಳಿತ ಹೊಸ ಘಟಕ ಸ್ಥಾಪನೆ ಮಾಡಿದ್ದು, ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇದರಿಂದಾಗಿ ಗ್ರಾಮದ ಜನ ಗ್ರಾಮ ಪಂಚಾಯಿತಿ ಮುಖ್ಯ ಕೇಂದ್ರವಾಗಿರುವ ಗೌಡನಹಳ್ಳಿಗೆ ಕ್ಯಾನ್ಗಳೊಂದಿಗೆ ನೀರು ತರಲು ಹೋಗುತ್ತಿದ್ದರು. ಅಲ್ಲಿನವರು ತಮಗೆ ನೀರಿನ ಕೊರತೆಯಾಗುತ್ತದೆ ಎಂದು ವಿರೋಧ ವ್ಯಕ್ತಪಡಿಸಿದ್ದರಿಂದ ಬೈಕ್, ಆಟೊಗಳು ಇರುವವರು ಸೋಮೇರಹಳ್ಳಿ, ಹುಲುಗಲಕುಂಟೆ ಗ್ರಾಮಗಳಿಂದ ಕುಡಿಯುವ ನೀರು ತರುತ್ತಿದ್ದಾರೆ. ವಾಹನ ಸೌಲಭ್ಯ ಇಲ್ಲದವರು ನಿತ್ಯ ಊರಿಗೆ ಬರುವ ಖಾಸಗಿ ಟ್ಯಾಂಕರ್ನವರಿಗೆ ಪ್ರತಿ ಕ್ಯಾನ್ಗೆ ₹20 ಕೊಟ್ಟು ಕುಡಿಯುವ ನೀರು ಖರೀದಿಸುತ್ತಿದ್ದಾರೆ. ಹೆಚ್ಚು ಜನರಿರುವ ಮನೆಗಳಿಗೆ ನಿತ್ಯ 2ರಿಂದ 3 ಕ್ಯಾನ್ ನೀರು ಬೇಕಾಗುತ್ತದೆ. ಪ್ರತಿ ತಿಂಗಳು ₹ 1,500ರಿಂದ ₹ 2,000 ಕುಡಿಯುವ ನೀರಿಗೆ ಕೊಡಬೇಕಿದೆ’ ಎನ್ನುತ್ತಾರೆ ಗ್ರಾಮದ ಮುಖಂಡ ರಾಜಪ್ಪ.
ಹಿರಿಯೂರು ನಗರದ ಲಕ್ಕವ್ವನಹಳ್ಳಿ ರಸ್ತೆಯಲ್ಲಿರುವ ಜಲ ಶುದ್ದೀಕರಣ ಘಟಕದಿಂದ ನಿತ್ಯ ಮೂರ್ನಾಲ್ಕು ಟ್ಯಾಂಕರ್ ನೀರು ತರುತ್ತಿದ್ದೇವೆ. ನೀರು ಪಡೆಯುವ ಎಲ್ಲರೂ ಹಣ ಹಾಕುತ್ತೇವೆ. ಗ್ರಾಮದಲ್ಲಿ ಕೂಲಿಯನ್ನೇ ನಂಬಿ ಬದುಕುವವರು ಹೆಚ್ಚಿದ್ದಾರೆ. ಕೆಲವೊಮ್ಮೆ ಕೂಲಿಗೆ ಹೋಗುವುದನ್ನು ಬಿಟ್ಟು ನೀರಿಗಾಗಿ ಕಾಯಬೇಕು. ನೀರಿಗೂ ದುಡ್ಡು ಕೊಡಬೇಕು. ಜನರಿಗೆ ಕುಡಿಯುವ ನೀರು ಕೊಡಬೇಕಾದ್ದು ಸರ್ಕಾರದ ಜವಾಬ್ದಾರಿ ಎಂಬುದನ್ನು ತಾಲ್ಲೂಕು ಆಡಳಿತ ಮರೆತಂತಿದೆ.
ಸಚಿವರ ಗಮನಕ್ಕೆ ತಂದರೆ ನೀರಿನ ವ್ಯವಸ್ಥೆ ಮಾಡಿಸುತ್ತೇನೆ, ನೀವು ಹೋಗಿ ಎಂದು ಅಧಿಕಾರಿಗಳು ಸಾಗ ಹಾಕುತ್ತಾರೆ. ಗ್ರಾಮ ಪಂಚಾಯಿತಿಯವರನ್ನು ಕೇಳಿದರೆ ಹಣವಿಲ್ಲ ಎನ್ನುತ್ತಾರೆ. ನಮ್ಮ ಗೋಳು ಕೇಳುವವರು ಯಾರು ಎಂದು ಅವರು ಪ್ರಶ್ನಿಸುತ್ತಾರೆ. ಮೂರು ದಿನಗಳ ಹಿಂದೆ ಬಿರುಗಾಳಿ, ಮಳೆಗೆ ಗ್ರಾಮದಲ್ಲಿನ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದರಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಮಂಗಳವಾರ ಅದನ್ನು ಸರಿಪಡಿಸಿದ್ದೇವೆ. ನಾಲ್ಕು ಕೊಳವೆಬಾವಿಗಳಲ್ಲಿ ಬರುತ್ತಿರುವ ನೀರನ್ನು ಓವರ್ ಹೆಡ್ ಟ್ಯಾಂಕ್ಗೆ ತುಂಬಿಸಿ ನೀರನ್ನು ಬಿಡುತ್ತಿದ್ದೇವೆ. ತೀರಾ ತೊಂದರೆಯಾದರೆ ತಾಲ್ಲೂಕು ಆಡಳಿತದ ಗಮನಕ್ಕೆ ತಂದು ಟ್ಯಾಂಕರ್ ಮೂಲಕ ನೀರು ಕೊಡುತ್ತೇವೆ ಎನ್ನುತ್ತಾರೆ ಗೌಡನಹಳ್ಳಿ ಪಿ.ಡಿ.ಒ ಬಾಲಸುಬ್ರಮಣ್ಯ.