
ಮಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ಆಶಯದ ಪ್ರಮುಖ ಅಂಶ ಜಾತಿ ಗಣತಿ. ಇದು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ ಅವರ ಬಯಕೆಯೂ ಆಗಿತ್ತು. ಆದ್ದರಿಂದ ಪಕ್ಷದೊಳಗೆ ಇದರ ವಿರುದ್ದ ಧ್ವನಿ ಏಳಬಾರದು ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಎಲ್ಲಾ ಯೋಜನೆಗಳನ್ನು ಕಾಂಗ್ರೆಸ್ ಯಶಸ್ವಿಯಾಗಿ ಜಾರಿಗೊಳಿಸಿದೆ.
ಆದ್ದರಿಂದ ಜಾತಿಗಣತಿಗೆ ಸಂಬಂಧಿಸಿದ ವರದಿ ಕೂಡ ಜಾರಿಯಾಗಲಿದೆ ಎಂದರು. ಸಮಾಜದಲ್ಲಿ ಅಸಮಾನತೆ ದೂರ ಮಾಡಲು, ಜಾತಿ ತಾರತಮ್ಯ ಹೋಗಲಾಡಿಸಲು ಮತ್ತು ದುರ್ಬಲ ವರ್ಗದವರ ಏಳಿಗೆಗಾಗಿ ಜಾತಿ ಗಣತಿಯ ವರದಿ ಜಾರಿಯಾಗಬೇಕು. ಆದ್ದರಿಂದ ದುರ್ಬಲ ವರ್ಗದವರು ಕೂಡ ವರದಿಯ ಬಗ್ಗೆ ಅಪಸ್ವರ ಎತ್ತಬಾರದು. ಜಾತಿ ಗಣತಿ ವರದಿ ಜಾರಿಯಾಗುವುದರಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ರಮಾನಾಥ ರೈ ಹೇಳಿದರು.

j3tvkannada
ಜಾತಿ ಗಣತಿ ವರದಿ ಜಾರಿಗೊಳಿಸುವ ಮೂಲಕ ಕರ್ನಾಟಕವನ್ನು ಪಾಕಿಸ್ತಾನವನ್ನಾಗಿ ಮಾಡಲು ಸರ್ಕಾರ ಹೊರಟಿದೆ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಇಂಥ ಹೇಳಿಕೆ ನೀಡುವ ಮೂಲಕ ಅಪ್ರಬುದ್ಧತೆಯನ್ನು ತೋರಿದ್ದಾರೆ. ಅವರಿಗೆ ಮಿದುಳು ತಲೆಯಲ್ಲಿ ಇರುವುದಾ ಅಥವಾ ಬೇರೆಲ್ಲಾದರರೂ ಇರುವುದಾ? ಎಂದು ರಮಾನಾಥ ರೈ ಪ್ರಶ್ನಿಸಿದರು. ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳ ಅವಧಿ ಮುಗಿದ ಒಂದು ದಿನವೂ ತಡ ಮಾಡದೆ ಚುನಾವಣೆ ನಡೆಸಬೇಕು ಎಂದು ಪಂಚಾಯತ್ ರಾಜ್ ಕಾಯ್ದೆಯಲ್ಲಿದೆ.
ಆದರೆ ಹಿಂದಿನ ಬಿಜೆಪಿ ಸರ್ಕಾರ ಚುನಾವಣೆಯನ್ನು ಮೂರು ವರ್ಷ ಮುಂದೆ ಹಾಕಿತ್ತು. ಆದ್ದರಿಂದ ಈಗಲೂ ಚುನಾವಣೆ ತಡವಾಗಿದೆ. ಹೀಗಾಗಿ ಈಗ ಚುನಾವಣೆ ನಡೆಸುವಂತೆ ಒತ್ತಾಯಿಸುವ ನೈತಿಕತೆ ಆ ಪಕ್ಷಕ್ಕೆ ಇಲ್ಲ ಎಂದು ಅವರು ಹೇಳಿದರು. ಶಶಿಧರ ಹೆಗ್ಡೆ, ಪ್ರಕಾಶ್ ಸಾಲ್ಯಾನ್, ಇಬ್ರಾಹಿಂ, ಸುಕುಂದರ್ ಸಿಂಗ್ ಸಭೆಯಲ್ಲಿ ಪಾಲ್ಗೊಂಡಿದ್ದರು.