
ಉಡುಪಿ : ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಟಪಾಡಿ ಗ್ರಾಮ ಪಂಚಾಯಿತಿ, ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಮಳೆ ಬಂದರೆ ಮಾತ್ರ ನೀರಿನ ಸಮಸ್ಯೆಗೆ ಪರಿಹಾರ. ಕೋಟೆ ಗ್ರಾಮದಲ್ಲಿ ಉಪ್ಪು ನೀರಿನ ಪ್ರದೇಶ ಹೆಚ್ಚಿದ್ದು, ಮಟ್ಟು ಗ್ರಾಮದ ಜನರು ಪಂಚಾಯಿತಿ ನೀರನ್ನೇ ಆಶ್ರಯಿಸುವಂತಾಗಿದೆ.

j3tvkannada
ಕಟಪಾಡಿಯಲ್ಲಿ ಸಾಕಷ್ಟು ನೀರಿನ ಸಂಪನ್ಮೂಲಗಳಿದ್ದರೂ ಈ ಭಾಗದ ಜನರ ನೀರೀಕ್ಷೆಯಂತೆ ನೀರಿನ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ. ಎರಡೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಕೊಡುವ ನಿಟ್ಟಿನಲ್ಲಿ ಪೈಪ್ಲೈನ್ ಅಳವಡಿಸಲಾಗಿದೆ. ವರ್ಷಗಳೇ ಕಳೆದರೂ ಯೋಜನೆಯ ಅನುಷ್ಠಾನ ಸಮರ್ಪಕವಾಗಿಲ್ಲ ಎಂಬುದು ಸಾರ್ವಜನಿಕರ ದೂರು. ಕಟಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಣಗುಡ್ಡೆ ಮತ್ತು ಮೂಡಬೆಟ್ಟು ಗ್ರಾಮದಲ್ಲಿ ಒಟ್ಟು 16 ಸಾವಿರ ಜನಸಂಖ್ಯೆಯಿದೆ. ಕೋಟೆ ಮಟ್ಟು ಗ್ರಾಮದಲ್ಲಿ 5914 ಜನಸಂಖ್ಯೆಯಿದೆ. ಆದರೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಲಭಿಸಿಲ್ಲ. ಮಳೆ ಬಂದರೆ ಮಾತ್ರ ತಾತ್ಕಾಲಿಕ ಪರಿಹಾರ ಸಾಧ್ಯ.
ಏಣಗುಡ್ಡೆ ಗ್ರಾಮದ ಜೆ.ಎನ್. ನಗರ ಕಾಲನಿ ನಿವಾಸಿಗಳು ಬೇಸಿಗೆಯಲ್ಲಿ ನೀರಿಗಾಗಿ ಬವಣೆ ಪಡುತ್ತಾರೆ. 125 ಮನೆಗಳಿಗೆ ಒಂದು ನೀರಿನ ಟ್ಯಾಂಕ್ ಮೂಲಕ ಪೈಪ್ಲೈನ್ ವ್ಯವಸ್ಥೆ ಹಿಂದಿನಿಂದಲೂ ಇದೆ. ಹೊಸತಾಗಿ ಜಲಜೀವನ ಮಿಷನ್ ಯೋಜನೆಯಡಿ ಕೂಡ ಪೈಪ್ಲೈನ್ ಅಳವಡಿಸಲಾಗಿದೆ. ಇಲ್ಲಿ 4 ಸರ್ಕಾರಿ ಬಾವಿಗಳು, 6 ಬೋರ್ವೆಲ್ಗಳಿದ್ದರೂ ನೀರಿನ ಸಂಪನ್ಮೂಲದ ಕೊರತೆ ಆಗಾಗ ಎದುರಾಗುತ್ತಿದೆ. ಮೂಡಬೆಟ್ಟು ಗ್ರಾಮದ ಸರ್ಕಾರಿಗುಡ್ಡೆ ಕಾಲನಿಯಲ್ಲಿ ಕೂಡ ಒಂದು ಬಾವಿ, ಬೋರ್ವೆಲ್ ಅಳವಡಿಸಲಾಗಿದ್ದು, ಅಷ್ಟೊಂದು ನೀರಿನ ಸಮಸ್ಯೆ ಇಲ್ಲ. ಶಂಕರಪುರ ಶಿವಾನಂದ ನಗರದಲ್ಲಿ ಸ್ವಜಲಧಾರ ಯೋಜನೆಯ ನಳ್ಳಿ ನೀರು ಸಹಿತ ಬೋರ್ವೆಲ್ ಅಳವಡಿಸಲಾಗಿದೆ.
ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಕಾಲದಲ್ಲಿ ಮಳೆ ಬಾರದಿದ್ದರೆ ಟ್ಯಾಂಕರ್ ನೀರೇ ಗತಿ. ಮಟ್ಟು ಕಡಲತೀರ ಮತ್ತು ನದಿ ತೀರವಾಸಿಗಳು ಸರ್ವ ಋತುವಿನಲ್ಲಿ ಪಂಚಾಯಿತಿ ನಳ್ಳಿ ನೀರನ್ನೇ ಆಶ್ರಯಿಸಿಕೊಂಡಿದ್ದಾರೆ. ಈ ಭಾಗದಲ್ಲಿ ಉಪ್ಪು ನೀರಿನ ಸಮಸ್ಯೆ ಇರುವುದರಿಂದ ಗ್ರಾಮಸ್ಥರು ವೈಯಕ್ತಿಕವಾಗಿ ಮನೆ ಬಳಕೆಗೆ ಬಾವಿ ಅಥವಾ ಬೋರ್ವೆಲ್ ನಿರ್ಮಿಸುವಂತಿಲ್ಲ. ಕೋಟೆ ಗ್ರಾಮದ ವಿನೋಭ ನಗರದಲ್ಲಿ ಕಟಪಾಡಿ ರೋಟರಿಯಿಂದ ಬಾವಿ ಮತ್ತು ಟ್ಯಾಂಕ್ ನಿರ್ಮಿಸಲಾಗಿದೆ. ಸಾರ್ವಜನಿಕ ಬಾವಿ ಕೂಡ ಇದೆ. ಇಂದಿರಾನಗರದಲ್ಲಿ ಸಾರ್ವಜನಿಕ ಬಾವಿ ಮತ್ತು ಬೋರ್ವೆಲ್ ಇದೆ. ಸಮಾಜ ಮಂದಿರ ಕಾಲನಿ ನಿವಾಸಿಗಳಿಗೆ ನಳ್ಳಿ ನೀರೇ ಗತಿ. ಅಂಬಾಡಿ ಭಾಗದಲ್ಲಿ ಅಷ್ಟೊಂದು ನೀರಿನ ಸಮಸ್ಯೆಯಿಲ್ಲ.
ಜಲ ಜೀವನ್ ಮಿಷನ್ ಯೋಜನೆ : 2024 ರ ವೇಳೆಗೆ ಗ್ರಾಮೀಣ ಭಾರತದ ಎಲ್ಲಾ ಮನೆಗಳಿಗೆ ನಳ್ಳಿ ಸಂಪರ್ಕಗಳ ಮೂಲಕ ಸುರಕ್ಷಿತ ಮತ್ತು ಸಾಕಷ್ಟು ಕುಡಿಯುವ ನೀರನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮವು ನೀರಿನ ನಿರ್ವಹಣೆ, ನೀರಿನ ಸಂರಕ್ಷಣೆ, ಮಳೆ ನೀರು ಸಂಗ್ರಹಣೆ ಮೂಲಕ ಮರು ಪೂರಣ ಮತ್ತು ಮರು ಬಳಕೆಯಂತಹ ಕಡ್ಡಾಯ ಅಂಶಗಳಾಗಿ ಮೂಲ ಸುಸ್ಥಿರತೆಯ ಕ್ರಮಗಳನ್ನು ಸಹ ಕಾರ್ಯಗತಗೊಳಿಸುತ್ತದೆ.
ಈ ಯೋಜನೆಯಡಿ ಕಟಪಾಡಿ ಮತ್ತು ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆಯೇ ಪೈಪ್ಲೈನ್ ಅಳವಡಿಕೆ ಆರಂಭಗೊಂಡು ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಈ ಪ್ರದೇಶದಲ್ಲಿನ ನೀರಿನ ಸಂಪನ್ಮೂಲಗಳನ್ನು ಬಳಸಿಕೊಂಡು ನೀರು ಪೂರೈಕೆ ಸಮರ್ಪಕವಾಗಿ ಮಾಡಿದಲ್ಲಿ ಈ ಭಾಗದಲ್ಲಿ ಜಲ ಜೀವನ್ ಮಿಷನ್ ಯೋಜನೆ ಯಶಸ್ವಿಯಾಗಲಿದೆ ಎಂಬುದು ಗ್ರಾಮಸ್ಥರ ನಿರೀಕ್ಷೆಯಾಗಿದೆ.