
ಚಾಮರಾಜನಗರ: ಇತ್ತೀಚೆಗೆ ಹಲವಾರು ಕಡೆಗಳಲ್ಲಿ ಸರಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸಲಾಗುತ್ತಿದೆಯಾದರೂ ಕೆಲವು ಕಡೆಗಳಲ್ಲಿ ಶಾಲೆಗಳ ಸ್ಥಿತಿ ಶೋಚನೀಯವಾಗಿರುತ್ತದೆ. ತಾಲ್ಲೂಕಿನ ನಾಗವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶತಮಾನವನ್ನೇ ಪೂರೈಸಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎರಡು ಕಟ್ಟಡಗಳು ದುಸ್ಥಿತಿಯಲ್ಲಿದ್ದು, ಕುಸಿಯುವ ಭೀತಿ ಎದುರಾಗಿದೆ. ಅವಘಡ ಸಂಭವಿಸುವ ಮುನ್ನ ಶಿಥಿಲಗೊಂಡ ಕಟ್ಟಡಗಳನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ನಾಗವಳ್ಳಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೂ ಕಲಿಯಲು ಅವಕಾಶವಿದ್ದು 22 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ.

j3tvkannada
ಕೊಠಡಿಗಳ ಕೊರತೆಯಿಂದಾಗಿ ಇರುವ ಎರಡೇ ಕೊಠಡಿಗಳಲ್ಲಿ ಏಳು ತರಗತಿಗಳ ಮಕ್ಕಳಿಗೆ ಒಟ್ಟಿಗೆ ಪಾಠ ಮಾಡಲಾಗುತ್ತಿದೆ. 1ರಿಂದ 4ನೇ ತರಗತಿವರೆಗಿನ ಮಕ್ಕಳಿಗೆ ಒಂದು ಕೊಠಡಿಯಲ್ಲಿ, 5 ರಿಂದ 7ತರಗತಿವರೆಗಿನ ಮಕ್ಕಳನ್ನು ಮತ್ತೊಂದು ಕೊಠಡಿಯಲ್ಲಿ ಕೂರಿಸಿ ಪಾಠವನ್ನು ಹೇಳಿ ಕೊಡಲಾಗುತ್ತದೆ. ಒಂದೇ ಕೋಣೆಯಲ್ಲಿ ಹಲವು ತರಗತಿಗಳ ಮಕ್ಕಳಿಗೆ ಪಾಠ ಹೇಳಿ ಕೊಡುತ್ತಿರುವುದರಿಂಂದ ಮಕ್ಕಳ ಕಲಿಕೆಗೆ ಹಿನ್ನಡೆಯಾಗುತ್ತಿದೆ ಎಂದು ಆರೋಪಿಸುತ್ತಾರೆ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಹಾಗೂ ನಾಗವಳ್ಳಿ ಗ್ರಾಮ ಪಂಚಾಯಿತಿ ಸದಸ್ಯರೂ ಆಗಿರುವ ನಬೀಖಾನ್.
ಶಾಲೆಯ ಎರಡು ಕಟ್ಟಡಗಳು ಸಂಪೂರ್ಣ ಹಾಳಾಗಿದ್ದು, ಬಳಸಲು ಯೋಗ್ಯವಿಲ್ಲದಂತಾಗಿವೆ. ಹೆಂಚುಗಳು ಒಡೆದಿದ್ದು ಮರದ ಪಟ್ಟಿಗಳು ಗೆದ್ದಲು ಹಿಡಿದಿವೆ. ಕಟ್ಟಡ ಪಾಳುಬಿದ್ದ ಸ್ಥಿತಿ ತಲುಪಿದ್ದು ಮಕ್ಕಳು ಹಾಗೂ ಶಿಕ್ಷಕರು ಪ್ರಾಣ ಭಯದಲ್ಲಿ ಓಡಾಡುವಂತಾಗಿದೆ. ಶಿಥಿಲಗೊಂಡ ಕೊಠಡಿಯ ತಾರಸಿಯಿಂದ ಆಗಾಗ ಮರದ ತುಂಡುಗಳು ಬೀಳುತ್ತವೆ. ಮಳೆಗಾಲದಲ್ಲಿ ಸೋರುತ್ತಿದ್ದು ಒಳಗೆ ಕೂರಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಕ್ಕಳ ಶಾಲಾ ದಾಖಲಾತಿ ವಿವರ, ಪುಸ್ತಕಗಳು, ಕಲಿಕಾ ಪರಿಕರಗಳು, ಪೀಠೋಪಕರಣಗಳನ್ನು ಇರಿಸಲು ಕೊಠಡಿ ಇಲ್ಲ. ಮಳೆಗಾಲದಲ್ಲಿ ದಾಖಲಾತಿಗಳೆಲ್ಲ ಹಾಳಾಗುವ ಭೀತಿ ಎದುರಾಗಿದೆ. ಹಿಂದೆ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಕೊಠಡಿ ದುರಸ್ತಿ ಮಾಡಿಸಲಾಗಿತ್ತು. ಹೊಸದಾಗಿ ಶಾಲಾ ಕಟ್ಟಡ ಮಂಜೂರಾತಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಾಸಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.