
ಚಿತ್ರದುರ್ಗ: ಒಳಮೀಸಲಾತಿ ಜಾರಿ ವಿಷಯದಲ್ಲಿ ದಿಟ್ಟ ಕ್ರಮಕೈಗೊಂಡಿರುವ ಮುಖ್ಯಮಂತ್ರಿಗಳಾದ ರೇವಂತ್ ರೆಡ್ಡಿ, ಸಿದ್ದರಾಮಯ್ಯ ಅವರನ್ನು ರಾಯಚೂರಿನಲ್ಲಿ ಶೀಘ್ರದಲೆ ಬೃಹತ್ ಕಾರ್ಯಕ್ರಮ ಆಯೋಜಿಸಿ ಅಭಿನಂದಿಸಲಾಗುವುದು ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ. ತೆಲಂಗಾಣದಲ್ಲಿ ಏ.14 ಅಂಬೇಡ್ಕರ್ ಜಯಂತಿ ದಿನದಂದು ಒಳಮೀಸಲಾತಿ ಅನುಷ್ಠಾನಗೊಳಿಸಲಾಗಿದೆ. ಅದೇ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಖರ ದತ್ತಾಂಶ ಸಂಗ್ರಹಕ್ಕಾಗಿ ಸರ್ವೇ ಮೂಲಕ ಅವರವರ ಸಂಖ್ಯೆಗೆ ಅನುಗುಣವಾಗಿ ಮೀಸಲು ಸೌಲಭ್ಯ ಹಂಚಿಕೆ ಮಾಡಲು ದಿಟ್ಟ ಕ್ರಮಕೈಗೊಂಡಿದ್ದಾರೆ. ಜೂನ್ನಲ್ಲಿ ಒಳಮೀಸಲಾತಿ ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಆದ್ದರಿಂದ ನೊಂದ, ಸೌಲಭ್ಯ ವಂಚಿತ, ಅಸ್ಪೃಶ್ಯ ಸಮಾಜಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಲು ಅಧಿಕಾರ ಬಳಸಿದ ಇಬ್ಬರು ಮುಖ್ಯಮಂತ್ರಿಯನ್ನು ಗೌರವಿಸಿ, ಕೃತಜ್ಞತೆ ಸಲ್ಲಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

j3tvkannada
ಲಕ್ಷಾಂತರ ಸಂಖ್ಯೆಯಲ್ಲಿ ಮಾದಿಗ ಸಮುದಾಯ ಒಂದೆಡೆ ಸೇರಿ ಸಂಭ್ರಮಿಸಬೇಕಾಗಿದೆ. ಮುಖ್ಯವಾಗಿ ಒಗ್ಗಟ್ಟು ಪ್ರದರ್ಶನದ ಮೂಲಕ ಭವಿಷ್ಯದಲ್ಲಿ ಇನ್ನಷ್ಟು ನ್ಯಾಯಯುತ ಹಕ್ಕುಗಳನ್ನು ಪಡೆಯಲು ಮುಂದಾಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಯಚೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ. ಪರಿಶಿಷ್ಟ ಸಮುದಾಯದಲ್ಲಿ ಯಾವ ಜಾತಿ ಜನರಿಗೂ ಸಣ್ಣ ಅನ್ಯಾಯ ಆಗದ ರೀತಿ ಕ್ರಮಕೈಗೊಳ್ಳಲು ದಿಟ್ಟ ನಡೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗೊಂಡಿದ್ದಾರೆ. ಅದರ ಕಾರ್ಯವೇ ದತ್ತಾಂಶ ಸಂಗ್ರಹಕ್ಕಾಗಿ ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಗಣತಿ ಕಾರ್ಯ ಕೈಗೊಂಡಿರುವುದು. ಈಗಾಗಲೇ ಸರ್ವೇ ಕಾರ್ಯಕ್ಕೆ ಎಲ್ಲ ಸಿದ್ದತೆಗಳು ಭರದಿಂದ ಸಾಗುತ್ತಿದ್ದು, ಸಮುದಾಯದವರು ಸರ್ವೇ ಸಂದರ್ಭ ಮೂಲ ಜಾತಿ ಮಾದಿಗ ಎಂದು ದಾಖಲಿಸುವ ಮೂಲಕ ಒಳಮೀಸಲಾತಿಯಲ್ಲಿ ನಮ್ಮ ಪಾಲನ್ನು ಪಡೆಯಲು ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಹಟ್ಟಿ, ಕಾಲೋನಿ, ಬಡಾವಣೆಗಳಲ್ಲಿ ಜಾಗೃತಿ ಮೂಡಿಸು ಕಾರ್ಯಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.