

j3tvkannada
ಧಾರವಾಡ : ನಗರದ ಹಲವೆಡೆ ರಸ್ತೆ ಬದಿ ಹಾಗೂ ನಿವೇಶನಗಳಲ್ಲಿ ಕಸವನ್ನು ಎಸೆಯಲಾಗಿದೆ. ಕೆಲವೆಡೆ ತ್ಯಾಜ್ಯ ರಾಶಿ ಬಿದ್ದಿದ್ದು ದುರ್ನಾತ ಬೀರುತ್ತಿದೆ, ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಇದೆ. ಕೊಳೆತ ತರಿಕಾರಿ, ಹಣ್ಣುಗಳು, ಉಂಡು ಮಿಕ್ಕುಳಿದ ಆಹಾರ ಪದಾರ್ಥಗಳು, ಬಾಟಲಿಗಳು ಮೊದಲಾದವನ್ನು ರಸ್ತೆ ಬದಿಗಳಲ್ಲಿ ಮತ್ತು ನಿವೇಶನಗಳಲ್ಲಿ ಎಸೆಯಲಾಗಿದೆ.
ಪಾಲಿಕೆಯವರು ಕಸದ ಗಾಡಿಗಳಲ್ಲಿ ನಿಯಮಿತವಾಗಿ ಮನೆಗಳ ಕಸ ಸಂಗ್ರಹಿಸುತ್ತಾರೆ. ಈ ರಸ್ತೆ ಬದಿ, ಕೆರೆ ದಂಡೆ ಮೊದಲಾದ ಕಡೆಗಳಲ್ಲಿನ ಕಸ ವಿಲೇವಾರಿ ನಿಯಮಿತವಾಗಿ ನಡೆಯುತ್ತಿಲ್ಲ. ಆಲೂರು ವೆಂಕಟರಾವ್ ಮಾರ್ಗ, ಹಳಿಯಾಳ ನಾಕಾದ ಕುರುಪಾಲಿಸ್ ಕಾಂಪೌಂಡ್, ಮಾಳಮಡ್ಡಿ, ರೈಲು ನಿಲ್ದಾಣದ ಕಡೆಗಿನ ರಸ್ತೆ, ಮದಿಹಾಳ, ರಾಮನಗರ, ಸರಸ್ವತಪುರ, ಬಸವ ನಗರ, ಮಾಳಾಪುರದ ಎತ್ತಿನಗುಡ್ಡ ರಸ್ತೆ, ಹೆಬ್ಬಳ್ಳಿ ಅಗಸಿ, ಪೊಲೀಸ್ ಹೆಡ್ ಕ್ವಾಟ್ರಸ್ ರಸ್ತೆ, ಕೆಲಗೇರಿ ರಸ್ತೆ ಸಹಿತ ವಿವಿಧೆಡೆಗಳಲ್ಲಿ ಕಸ ಬಿದ್ದಿದೆ. ಕೆಲವೆಡೆ ಚರಂಡಿಗಳಿಗೆ ಕಸ, ತ್ಯಾಜ್ಯ ಸುರಿಯಲಾಗಿದೆ. ಇಂಥ ಜಾಗಗಳು ಸೊಳ್ಳೆ, ಕ್ರಿಮಿ ಕೀಟಗಳ ಆಶ್ರಯ ತಾಣಗಳಾಗಿವೆ.