
ಚಿಕ್ಕಮಗಳೂರು : ಮಕ್ಕಳನ್ನು ದತ್ತು ಪಡೆಯಲು ಆಸಕ್ತ ಪೋಷಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಜಿಲ್ಲೆಯಲ್ಲಿ ಕಳೆದ 17 ವರ್ಷಗಳ ಅವಧಿಯಲ್ಲಿ 236 ಅನಾಥ ಮಕ್ಕಳಿಗೆ ಪೋಷಕರು ದೊರಕಿದ್ದಾರೆ. ವಿದೇಶದಿಂದಲೂ ಬೇಡಿಕೆ ಬರುತ್ತಿದ್ದು,18 ಮಕ್ಕಳು ವಿದೇಶಿ ಪೋಷಕರ ಮಡಿಲು ಸೇರಿದ್ದಾರೆ. ಹೆತ್ತ ಮಕ್ಕಳನ್ನು ಬಿಟ್ಟು ಹೋಗುವ ಪೋಷಕರು ಒಂದೆಡೆಯಾದರೆ, ವರ್ಷಗಟ್ಟಲೆ ಕಾದು ದತ್ತು ಪಡೆದುಕೊಳ್ಳುವ ಮಕ್ಕಳಿಲ್ಲದ ಪೋಷಕರು ಮತ್ತೊಂದೆಡೆ ಇದ್ದಾರೆ.
ಎಲ್ಲೋ ಸಿಕ್ಕಿದ ಮಗು ಎಂದು ದತ್ತು ಪಡೆದುಕೊಂಡು ಸಾಕಲು ಕಾನೂನಿನಲ್ಲಿ ಅವಕಾಶ ಇಲ್ಲ. ನರ್ಸಿಂಗ್ ಹೋಂನಲ್ಲಿ ಸಿಕ್ಕಿದ ಮಗು, ರಸ್ತೆಯಲ್ಲಿ ಯಾರೋ ಬಿಟ್ಟು ಹೋದ ಮಗು, ಪಾಲಕರಿಗೆ ಬೇಡವಾದ ಮಗು, ಕಳ್ಳತನ ಮಾಡಿಕೊಂಡು ಬಂದು ಸಾಕುವುದು ಕಾನೂನು ಬಾಹಿರವಾಗಿದೆ.

j3tvkannada
ಹೀಗೆ ಕಾನೂನು ಬಾಹಿರವಾಗಿ ದತ್ತು ಪಡೆದರೆ ಮುಂದೊಂದು ದಿನ ಮಗುವಿಗೆ ನೈಜ ಸ್ಥಿತಿಯ ಅರಿವಾಗಿ ಕಾನೂನಿನ ಮೊರೆ ಹೋಗುವ ಸಾಧ್ಯತೆ ಇರುತ್ತದೆ. ಸೂಕ್ತ ದಾಖಲೆಗಳಿಲ್ಲದಿದ್ದರೆ ಪೋಷಕರು ಮತ್ತು ಮಗು ತೊಂದರೆಗೆ ಸಿಲುಕುವ ಸಾಧ್ಯತೆ ಇರುತ್ತದೆ. ಸ್ವಂತ ಮಗು ಹುಟ್ಟಿದಾಗ ದತ್ತು ಪಡೆದ ಮಗುವನ್ನು ನಿರ್ಲಕ್ಷ್ಯ ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕಾನೂನು ಪ್ರಕಾರವೇ ದತ್ತು ಪಡೆದುಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಅರ್ಜಿ ಸಲ್ಲಿಸಿದ ತಕ್ಷಣ ಮಗು ಸಿಗುವುದಿಲ್ಲ. www.cara.wcd.gov.in ಮೂಲಕ ಅರ್ಜಿ ಸಲ್ಲಿಸಬೇಕು. ಮಗುವಿಗಾಗಿ ಕನಿಷ್ಠ ಎರಡು ವರ್ಷ ಕಾಯಬೇಕಾದ ಸ್ಥಿತಿ ಇದೆ. ಅರ್ಜಿದಾರರ ಜೇಷ್ಠತೆ ಆಧರಿಸಿ, ಅವರ ಆರೋಗ್ಯ, ಅಪರಾಧ ಹಿನ್ನೆಲೆ, ಉದ್ಯೋಗ, ಆದಾಯ, ವಯಸ್ಸು, ಎಲ್ಲವನ್ನೂ ಪರಿಶೀಲಿಸಿ ದತ್ತು ನೀಡಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ ಮಗುವನ್ನು ಪೋಷಕರೊಂದಿಗೆ ಕಳುಹಿಸಿಕೊಡಲಾಗುತ್ತದೆ. ಎರಡು ತಿಂಗಳ ಬಳಿಕ ಮಗು ಹೊಂದಿಕೊಂಡಿದೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಜಿಲ್ಲಾಧಿಕಾರಿ ಆದೇಶ ಹೊರಡಿಸುತ್ತಾರೆ.