
ರಾಮನಗರ: ಇ.ಡಿ, ಸಿ.ಬಿ.ಐ, ಸೇರಿದಂತೆ ಮತ್ತಿತರ ತನಿಖಾ ಸಂಸ್ಥೆಗಳ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಕೇಂದ್ರ ಬಿ.ಜೆ.ಪಿ ಮುಖಂಡರನ್ನು ಸಂಪರ್ಕಿಸಿದ್ದೇನೆ ಎಂದು ಆರೋಪಿಸಿರುವ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ 100 ಕೋಟಿ ರೂ. ಮಾನಹಾನಿ ಪ್ರಕರಣ ದಾಖಲಿಸಲಾಗಿದೆ, ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.

j3tvkannada
ಕನಕಪುರ ಸಿವಿಲ್ ನ್ಯಾಯಾಧೀಶರ ಎದುರು ವಿಚಾರಣೆಗೆ ಹಾಜರಾಗಿ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು. ಯತ್ನಾಳ್ ಸುಳ್ಳು ಆರೋಪದ ಮೂಲಕ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿ ನನ್ನ ಮಾನಹಾನಿ ಮಾಡಿದ್ದಾರೆ, ಎಂದು ಹೇಳಿದರು. 100 ಕೋಟಿ ರೂ. ಮಾನಹಾನಿ ಪ್ರಕರಣದಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಹಣವನ್ನು ನ್ಯಾಯಾಲಯದಲ್ಲಿ ಡೆಪಾಸಿಟ್ ಮಾಡಿ ಪ್ರಕರಣದ ವಿಚಾರಣೆ ನಿಗದಿಯಾಗಿತ್ತು. ಈ ಹಿಂದೆ ಯತ್ನಾಳ್ ಇಲ್ಲಿನ ಪ್ರಕರಣವನ್ನು ಬೆಂಗಳೂರಿಗೆ ವರ್ಗಾವಣೆ ಕೋರಿದ್ದರು. ಅದಕ್ಕೆ ನ್ಯಾಯಾಲಯ ಒಪ್ಪದ ಕಾರಣ ಇಲ್ಲೇ ವಿಚಾರಣೆ ನಡೆಯಲಿದೆ ಎಂದರು.
ಈ ಹಿಂದೆ ಯತ್ನಾಳ್ ಅವರು ಮಾಡಿದ್ದ ಆರೋಪದ ವರದಿ ಪ್ರಕಟವಾಗಿತ್ತು. ಆ ವರದಿಯನ್ನು ವಿಚಾರಣೆ ಹಂತದಲ್ಲಿ ಪರಿಗಣನೆಗೆ ತೆಗೆದುಕೊಂಡ ನ್ಯಾಯಾಧೀಶರು ಉಳಿದ ಪತ್ರಿಕೆಗಳ ಪರಿಶೀಲನೆಯನ್ನೂ ನಡೆಸಿದರು. ಈ ಹಿಂದೆ ಖಾಸಗಿ ಸುದ್ದಿ ಸಂಸ್ಥೆ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದೆ, ಆ ಸಂಸ್ಥೆ ನಮ್ಮ ಬಳಿ ಕೆಲ ಒಪ್ಪಂದ ಮಾಡಿಕೊಂಡ ನಂತರ ಅದನ್ನು ಹಿಂತೆಗೆಯಲಾಯಿತು. ನಂತರ ಯತ್ನಾಳ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲಾಗಿದೆ. ಕನಕಪುರದ ಜನರದ್ದು ಯಾವುದೇ ರಾಜಿಗೆ ಒಪ್ಪುವ ರಕ್ತ ಅಲ್ಲ. ಅದನ್ನು ನಾನು ಈಗಾಗಲೇ ಅನುಭವಿಸಿ ಆಗಿದೆ. ನೀವು ನನಗೆ ಮತ ಹಾಕಿದ್ದೀರಿ. ನಾನು ಕನಕಪುರ ಜನರ ಭಾವನೆಗೆ ಧಕ್ಕೆ ಮಾಡುವುದಿಲ್ಲ, ಎಂದು ಹೇಳಿದರು.