
ಬೀದರ್: ಸ್ವಲ್ಪ ವಿದ್ಯಾವಂತರಾದರೆ ಸಾಕು ಈಗಿನ ಕೆಲ ಯುವಕರು ಕೃಷಿ ಕೆಲಸದಿಂದ ದೂರ ಉಳಿಯುತ್ತಾರೆ. ಆಫೀಸ್ಗಳಲ್ಲೇ ಕೆಲಸ ಹುಡುಕುತ್ತಾರೆ. ಆದರೆ, ಇಸ್ಲಾಂಪುರದ ಕೃಷಿಕರಾದ ವೆಂಕಟರೆಡ್ಡಿ ಅವರು ತಮ್ಮ ಹೊಲದಲ್ಲಿ ಪಪ್ಪಾಯಿ ಬೆಳೆದು ಲಾಭ ಗಳಿಸಿ ಬೇರೆ ರೈತರಿಗೆ ಮಾದರಿಯಾಗಿದ್ದಾರೆ. ಚಿಕ್ಕ ಮಗುವಿಗೆ ಹಾಲಿನ ಬದಲಾಗಿ ಚಪಾತಿ ಅಥವಾ ರೊಟ್ಟಿ ಉಣಿಸಿದರೆ ಜೀರ್ಣ ಆಗುತ್ತದೆಯೇ, ಹಾಗೆಯೇ ಯಾವುದೇ ಬೆಳೆ ಸಸಿ ಇದ್ದಾಗ ಅದಕ್ಕೆ ಹೆಚ್ಚಿನ ಪೋಷಕಾಂಶ ನೀಡುವುದು ವ್ಯರ್ಥ ಎಂದು ಇವರು ಹೇಳುತ್ತಾರೆ.

j3tvkannada
ಇವರಿಗೆ 42 ಎಕರೆ ಜಮೀನಿದ್ದು, ಚಿಕ್ಕಂದಿನಿಂದಲೂ ತಂದೆ ವಿಠಲರೆಡ್ಡಿ ಅವರೊಂದಿಗೆ ಕೃಷಿ ಕಾರ್ಯದಲ್ಲಿ ಕೈಜೋಡಿಸುತ್ತ ಬಿ.ಎ ಪದವಿ ಪಡೆದರು. ನಂತರ ಪೂರ್ಣ ಪ್ರಮಾಣದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರು. ಇವರ ವಯಸ್ಸು 36 ವರ್ಷ. ಕೃಷಿಯಲ್ಲಿ ಅನುಭವಿಯಾಗಿದ್ದಾರೆ. ಇವರು ಬರೀ ಎರಡು ಎಕರೆಯಲ್ಲಿ ಬೆಳೆದ ಪಪ್ಪಾಯಿಗೆ ₹16 ಲಕ್ಷ ಲಾಭ ಬಂದಿದೆ. ರಾಸಾಯನಿಕಗಳ ಉಪಯೋಗಕ್ಕಿಂತ ತಿಪ್ಪೆಗೊಬ್ಬರ ಯಥೇಚ್ಛ ಬಳಸಿ, ಕೀಟನಾಶಕವಾಗಿ ಗೋಮೂತ್ರ ಸಿಂಪಡಿಸಿದ್ದಾರೆ.
6 ಅಡಿ ಅಂತರದಲ್ಲಿ ಒಂದರಂತೆ ಎಕರೆಗೆ 900 ಪಪ್ಪಾಯಿ ಗಿಡಗಳನ್ನು ನೆಟ್ಟಿದ್ದಾರೆ. 7 ತಿಂಗಳಲ್ಲಿಯೇ ಹಣ್ಣು ಕಾಣಲಾರಂಭಿಸಿದವು. ಪ್ರತಿ ಗಿಡಕ್ಕೆ 40-70 ಹಣ್ಣು ದೊರೆತಿವೆ. ಪ್ರತಿಯೊಂದು 1.5 ಕೆಜಿಯಿಂದ 4 ಕೆಜಿವರೆಗೆ ತೂಗಿವೆ. ಕೆಜಿಗೆ ₹12 ರಿಂದ ₹27ರವರೆಗೆ ಬೆಲೆ ದೊರೆತಿದೆ. ಇಷ್ಟೊಂದು ಇಳುವರಿ ದೊರೆತ ನಂತರವೂ ಗಿಡಗಳಿಗೆ ಇನ್ನೂ ಹಣ್ಣು ಇವೆ. ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು, ಕೃಷಿಕರು ಮತ್ತು ಹಣ್ಣಿನ ವ್ಯಾಪಾರಿಗಳು ಇವರ ಹೊಲಕ್ಕೆ ಭೇಟಿ ನೀಡಿ ಇವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ಸಸಿಗಳಿದ್ದಾಗ ಅವಕ್ಕೆ ಎಷ್ಟು ಬೇಕೋ ಅಷ್ಟೇ ಪೋಷಕಾಂಶ ನೀಡಿದ್ದೇನೆ. ಅವುಗಳಿಗೆ ರೋಗ ಕಾಡದಂತೆ ಕಾಳಜಿ ವಹಿಸಿದ್ದೇನೆ. ನೆಲದಲ್ಲಿನ ಹಸಿ ಆರದಂತೆ ನೀರು ಬಿಟ್ಟಿದ್ದೇನೆ. ಯಾವುದೇ ಒಂದು ಗಿಡಕ್ಕೆ ಏನೋ ಆಗಿದೆ ಎಂದು ಅನಿಸಿದ ತಕ್ಷಣ ಅಗತ್ಯ ಕ್ರಮ ಕೈಗೊಂಡು ಮತ್ತೊಂದಕ್ಕೆ ರೋಗ ಹರಡುವುದನ್ನು ತಡೆದಿದ್ದೇನೆ’ ಎಂದು ವೆಂಕಟರೆಡ್ಡಿ ಹೇಳುತ್ತಾರೆ.