
ವಿಜಯಪುರ: ಯತ್ನಾಳ ನಡೆಯಿಂದ ಬೇಸತ್ತ ಬಿಜೆಪಿಯು ಯತ್ನಾಳ್ರನ್ನು ಪಕ್ಷದಿಂದ ಕಿತ್ತೊಗೆದಿತ್ತು. ಇದೀಗ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿನಿಧಿಸುತ್ತಿರುವ ವಿಜಯಪುರ ನಗರ ಕ್ಷೇತ್ರದಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ ಏ.17ರಂದು ನಡೆಯುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗೆ ಬಿಜೆಪಿ ರಾಜ್ಯ ನಾಯಕರಿಗೆ ಸ್ವಾಗತ ಕೋರುವ ಬ್ಯಾನರ್, ಕಟೌಟ್ಗಳನ್ನು ಸ್ಥಳೀಯ ಮುಖಂಡರು ಅಳವಡಿಸಿದ್ದಾರೆ.

j3tvkannada
ಪಕ್ಷದ ಚಟುವಟಿಕೆಗಳಿಂದ ಬಹುತೇಕ ದೂರವಾಗಿದ್ದ ಹಳೆಯ ಮುಖಂಡರು, ಕಾರ್ಯಕರ್ತರು ಯತ್ನಾಳ ಉಚ್ಚಾಟನೆ ಬಳಿಕ ಸಕ್ರಿಯವಾಗಿದ್ದಾರೆ. ಇದು ಕಾಂಗ್ರೆಸ್ ವಿರುದ್ಧ ಜನಾಕ್ರೋಶವೋ? ಯತ್ನಾಳ ವಿರುದ್ಧ ವಿಜಯೇಂದ್ರೋತ್ಸವವೋ? ಎಂಬಂತೆ ಭಾಸವಾಗುತ್ತಿದೆ. ಜಿಲ್ಲೆಯ ಮೂಲೆ, ಮೂಲೆಯಿಂದ ಜನರನ್ನು ಕರೆ ತಂದು ಯತ್ನಾಳ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.
ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಹಿಂದೆಂದೂ ಕಾಣದ ಉತ್ಸಾಹ ಮನೆ ಮಾಡಿದೆ. ಈ ಕ್ಷೇತ್ರದಲ್ಲಿ ನೆಪ ಮಾತ್ರಕ್ಕೆ ರಾಜ್ಯ ಸರ್ಕಾರದ ವಿರುದ್ಧ ರ್ಯಾಲಿ ಇದೆ ಯಾದರೂ ಆಂತರ್ಯದಲ್ಲಿ ಶಾಸಕ ಯತ್ನಾಳರ ವಿರುದ್ಧ ಶಕ್ತಿ ಪ್ರದರ್ಶನವಾಗಿ ಮಾರ್ಪಟ್ಟಿದೆ. ಯತ್ನಾಳ ಇಲ್ಲವಾದರೂ ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿಗೆ ಶಕ್ತಿ ಇದೆ ಎಂಬುದನ್ನು ರಾಜ್ಯ, ರಾಷ್ಟ್ರ ನಾಯಕರಿಗೆ ಸಾಬೀತು ಪಡಿಸಲು ಈ ರ್ಯಾಲಿಯನ್ನು ವೇದಿಕೆಯಾಗಿ ಬಳಸಿಕೊಳ್ಳಲು ತಯಾರಿ ನಡೆಸಿದ್ದಾರೆ ಎನ್ನಬಹುದು.
ಜನಾಕ್ರೋಶ ರ್ಯಾಲಿಯಲ್ಲಿ ಜಿಲ್ಲೆಯ ಮೂಲೆ, ಮೂಲೆಯಿಂದ 10 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯ ಘಟಕದ ಚುಕ್ಕಾಣಿ ಹಿಡಿದಲ್ಲಿಂದ ಇದುವರೆಗೂ ವಿಜಯಪುರ ನಗರಕ್ಕೆ ಪಕ್ಷದ ಯಾವುದೇ ಸಭೆ, ಸಮಾರಂಭ, ಸಂಘಟನಾ ಕಾರ್ಯಕ್ರಮಕ್ಕೆ ಒಮ್ಮೆಯೂ ಆಗಮಿಸದ ಬಿ.ವೈ. ವಿಜಯೇಂದ್ರ ಅವರು ಇದೀಗ ಯತ್ನಾಳ ಕ್ಷೇತ್ರಕ್ಕೆ ಬರುತ್ತಿರುವುದು ಸಂಚಲನವನ್ನೇ ಸೃಷ್ಠಿಸಿದೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ನಿರಂತರ ಆರೋಪ, ಬೈಗುಳದಿಂದ ತೀವ್ರ ಮುಜುಗರ ಅನುಭವಿಸಿ, ವಿಜಯಪುರದತ್ತ ಮುಖ ಮಾಡಲು ಹಿಂದೇಟು ಹಾಕಿದ್ದ ಬಿ.ವೈ.ವಿಜಯೇಂದ್ರ ಅವರಿಗೆ ಯತ್ನಾಳ ಕ್ಷೇತ್ರದಲ್ಲೇ ಅಭೂತಪೂರ್ವ ಸ್ವಾಗತ ಕೋರಲು ಸಜ್ಜಾಗಿದ್ದೇವೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.