
ಬೆಳಗಾವಿ: ಜ. 14ರಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಂಕ್ರಾಂತಿ ಹಬ್ಬಕ್ಕಾಗಿ ಬೆಳಗಾವಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಬಳಿ ಅಪಘಾತವಾಗಿತ್ತು. ಅಪಘಾತದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆನ್ನು ಮೂಳೆ ಮುರಿತವಾಗಿ ಅವರು ಕೆಲವು ತಿಂಗಳುಗಳ ಕಾಲ ವಿಶ್ರಾಂತಿ ಪಡೆದಿದ್ದರು. ಅಪಘಾತವಾಗುತ್ತಲೇ ಕ್ಯಾಂಟರ್ ಚಾಲಕ ಕ್ಯಾಂಟರ್ ಸಮೇತ ಪರಾರಿಯಾಗಿದ್ದ. ಹಾಗಾಗಿ, ಕಿತ್ತೂರಿನ ಪೊಲೀಸ್ ಠಾಣೆಯಲ್ಲಿ ಹಿಟ್ ಆ್ಯಂಡ್ ರನ್ ಕೇಸ್ ದಾಖಲಾಗಿತ್ತು.

j3tvkannada
ಸಚಿವೆ ಹೆಬ್ಬಾಳ್ಕರ್ ಅವರ ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕ್ಯಾಂಟರ್ ಚಾಲಕನನ್ನು ಇದೀಗ ಬಂಧಿಸಲಾಗಿದೆ. ಮಧುಕರ ಕೊಂಡಿರಾಮ ಸೋಮವಂಶ (65) ಬಂಧಿತ ಆರೋಪಿಯಾಗಿದ್ದಾನೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಾಲೂಕಿನ ತಕ್ರಾರವಾಡಿ ಗ್ರಾಮದ ನಿವಾಸಿ ಎಂದು ಹೇಳಲಾಗಿದೆ.
ಸಚಿವರ ಕಾರಿಗೆ ಕ್ಯಾಂಟರ್ ಡಿಕ್ಕಿಯಾದಾಗ ಕ್ಯಾಂಟರಿನ ನೀಲಿ ಬಣ್ಣ ಕಾರಿಗೆ ಅಂಟಿಕೊಂಡಿತ್ತು. ಸಿಕ್ಕ ಸಾಕ್ಷಿಗಳನ್ನು ಪೊಲೀಸರು ಎಫ್ಎಸ್ ಎಲ್ ಗೆ ರವಾನಿಸಿದ್ದರು. ಆನಂತರ ಸ್ಥಳದಲ್ಲಿದ್ದ ಎಲ್ಲಾ ಸಾಕ್ಷಿಗಳನ್ನು ಪಡೆದುಕೊಂಡು ಆತನಿಗಾಗಿ ಹುಡುಕಾಟ ನಡೆಸಿದ್ದರು. ಇತ್ತೀಚೆಗೆ ಆತನ ವಾಸಸ್ಥಳದ ಬಗ್ಗೆ ನಿಖರವಾಗಿ ಮಾಹಿತಿ ಕಲೆ ಹಾಕಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಹೋದರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೋಳಿ ಮತ್ತು ಅವರ ಅಂಗರಕ್ಷಕರಾದ ಈರಪ್ಪ ಕಲ್ಲಪ್ಪ ಹುಣಶೀಕಟ್ಟಿ ಅವರು ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಇವರ ಕಾರು ಕಿತ್ತೂರನ್ನು ದಾಟಿ ಅಂಬಡಗಟ್ಟಿ ಹದ್ದಿ ಬಳಿಯ ಅಂಬಡಗಟ್ಟಿ ಕ್ರಾಸ್ ಹತ್ತಿರ ಧಾರವಾಡ-ಬೆಳಗಾವಿ ಎನ್ಎಚ್-48 ರಸ್ತೆಯ ಮೇಲೆ ಸಾಗುತ್ತಿದ್ದಾಗ, ಇವರ ಕಾರಿಗಿಂತ ಮುಂದೆ ಸಾಗುತ್ತಿದ್ದ ಕ್ಯಾಂಟರ್ ಚಾಲಕನು ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಎಡಕ್ಕೆ ತನ್ನ ವಾಹನವನ್ನು ತಿರುಗಿಸಿದ್ದ.
ಹಠಾತ್ತಾಗಿ ಕ್ಯಾಂಟರ್ ತಿರುಗಿಸಿದ್ದನ್ನು ನೋಡಿದ ಹೆಬ್ಬಾಳ್ಕರ್ ಅವರ ಕಾರು ಚಾಲಕ, ತನ್ನ ಕಾರನ್ನು ಎಡಗಡೆಗೆ ತೆಗೆದುಕೊಂಡರು. ಆದರೂ, ಆ ಕ್ಯಾಂಟರ್ ಚಾಲಕ ಮತ್ತೆ ತನ್ನ ಕ್ಯಾಂಟರನ್ನು ಅಡ್ಡಾದಿಡ್ಡಿಯಾಗಿ ಓಡಿಸಿ ಸಚಿವರ ಕಾರಿನ ಬಲಗಡೆ ಬದಿಗೆ ಡಿಕ್ಕಿ ಹೊಡೆದಿದ್ದ. ಆಗ ಕಾರು ನಿಯಂತ್ರಣ ತಪ್ಪಿ ಹೈವೇ ಪಕ್ಕದ ಸರ್ವಿಸ್ ರಸ್ತೆ ಕಡೆಗೆ ಇಳಿದು ಸರ್ವೀಸ್ ರಸ್ತೆ ಪಕ್ಕದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದಿತ್ತು. ಒಳಗಡೆ ಇದ್ದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದವು. ಅಪಘಾತದ ನಂತರ, ಟ್ರಕ್ ಚಾಲಕ ತನ್ನ ಟ್ರಕ್ನ್ನು ನಿಲ್ಲಿಸದೇ ಪರಾರಿಯಾಗಿದ್ದ.