
ಬಾಗಲಕೋಟೆ: ರಾಜ್ಯದ ಪ್ರಬಲ ಪಂಚಮಶಾಲಿ ಲಿಂಗಾಯತ ಸಮಾಜದ ಕೂಡಲ ಸಂಗಮ ಪೀಠ ಗೊಂದಲದ ಗೂಡಾಗಿದ್ದು, ನಾಲ್ಕನೇ ಪೀಠ ಸ್ಥಾಪನೆಯಾಗಬಹುದು ಎಂಬ ಆತಂಕ ಸಮಾಜದಲ್ಲಿ ಶುರುವಾಗಿದೆ. ಕೂಡಲಸಂಗಮ ಪಂಚಮಶಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಅಖಿಲ ಭಾರತ ಲಿಂಗಾಯಿತ ಪಂಚಮಶಾಲಿ ಟ್ರಸ್ಟ್ ಮಧ್ಯೆ ಭಿನ್ನಮತ ಮೂಡಿದ್ದು, ಎರಡೂ ಕಡೆಯಿಂದ ಪ್ರತ್ಯೇಕ ಸಭೆ ಕರೆದಿರುವುದು ಕುತೂಹಲ ಮೂಡಿಸಿದೆ.

j3tvkannada
ಟ್ರಸ್ಟ್ ಏಪ್ರಿಲ್ 19 ರಂದು ಕೂಡಲಸಂಗಮದಲ್ಲಿ ಸಭೆ ಕರೆದರೆ, ಸ್ವಾಮೀಜಿ 20 ರಂದು ಭಕ್ತರ ಸಭೆ ಕರೆದಿದ್ದಾರೆ. ವಿಜಯಪುರ ಶಾಸಕ, ಬಿಜೆಪಿಯಿಂದ ಉಚ್ಚಾಟಿತ ಬಸನಗೌಡ ಪಾಟೀಲ ಯತ್ನಾಳರನ್ನು ಸ್ವಾಮೀಜಿ ಬೆಂಬಲಿಸುತ್ತಿರುವುದು ಟ್ರಸ್ಟ್ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ಏಪ್ರಿಲ್ 19 ರಂದು ಟ್ರಸ್ಟ್ನ 40 ಸದಸ್ಯರು ಸಭೆ ನಡೆಸಲಿದ್ದು, ಸ್ವಾಮೀಜಿ ಅವರನ್ನು ಪೀಠದಿಂದ ಕೆಳಗಿಳಿಸಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಲಿಂಗಾಯತ ಪಂಚಮಶಾಲಿ ಪೀಠದ ವಿಷಯಗಳ ಚರ್ಚೆಗಾಗಿ ಏಪ್ರಿಲ್ 19ರಂದು ಕೂಡಲಸಂಗಮದಲ್ಲಿಅಖಿಲ ಭಾರತ ಲಿಂಗಾಯತ ಪಂಚಮಶಾಲಿ ಟ್ರಸ್ಟ್ ಸಭೆ ನಡೆಯಲಿದೆ, ಎಂದು ಮುಖಂಡ ಅಮರೇಶ ನಾಗೂರ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘‘ಅಂದು ಬೆಳಗ್ಗೆ 11 ಕ್ಕೆ ನಡೆಯಲಿರುವ ಸಭೆಯಲ್ಲಿ ಟ್ರಸ್ಟ್ ಸದಸ್ಯರು, ಸಚಿವರು, ಶಾಸಕರು, ಮಾಜಿ ಶಾಸಕರು, ರೈತ ಘಟಕದ ಸದಸ್ಯರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಸಮಾಜದ ಮೀಸಲಾತಿ ಹೋರಾಟ, ಮಠದ ಅಭಿವೃದ್ಧಿ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದ್ದು, ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಶಾಸಕ ಯತ್ನಾಳ್ ಅವರ ಉಚ್ಛಾಟನೆ ವಿಚಾರವನ್ನು ಸಮಾಜಕ್ಕೆ ತಳಕು ಹಾಕುತ್ತಿದ್ದಾರೆ. ಅವರ ಉಚ್ಛಾಟನೆ ಖಂಡಿಸಲಿ, ಆದರೆ ಏಜೆಂಟರಂತೆ ವರ್ತಿಸುವುದು ಸರಿಯಲ್ಲ. 2ಎ ಮೀಸಲಾತಿ ವಿಷಯದಲ್ಲಿಅವರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡರು. ಪೀಠವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ’’ ಎಂದು ಹೇಳಿದರು.
ಇತ್ತೀಚಿನ ಬೆಳವಣಿಗೆಯಲ್ಲಿ ದಾವಣಗೆರೆಯ ಅಶೋಕ ಗೋಪನಾಳ ಎಂಬುವವರು ಶಾಸಕ ವಿಜಯಾನಂದ ಕಾಶಪ್ಪನವರ ಅವರ ವಿರುದ್ಧ ಇಲ್ಲ ಸಲ್ಲದ ಟೀಕೆ ಮಾಡಿದ್ದಾರೆ. ಇಂತಹ ಹೇಳಿಕೆಗಳನ್ನು ನಾವು ಸಹಿಸುವುದಿಲ್ಲ. ಮಾಜಿ ಸಚಿವ ಸಿ.ಸಿ.ಪಾಟೀಲರು ಪರ್ಯಾಯ ಮಠ ಸ್ಥಾಪಿಸುತ್ತೇವೆ ಎಂದು ಹೇಳಿಕೆ ನೀಡಿದ್ದು ಸರಿಯಲ್ಲ. ಟ್ರಸ್ಟ್ ಅಧಿಕೃತವಾಗಿಯೇ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಬಾಗಲಕೋಟೆಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಾಂತರಾಜ್ ವರದಿ ಸೂಕ್ತ ದತ್ತಾಂಶಗಳಿಂದ ಕೂಡಿಲ್ಲ. ಸಂವಿಧಾನಕ್ಕೆ ವಿರುದ್ಧವಾಗಿದ್ದು, ವರದಿ ತಿರಸ್ಕರಿಸಿ ಮತ್ತೊಮ್ಮೆ ಜಾತಿ ಗಣತಿ ಮಾಡಲಿ ಎಂಬುದು ಹಲವು ಮಠಾಧೀಶರ ಆಗ್ರಹವಿತ್ತು. ಜಾತಿ ಗಣತಿಗಾಗಿ ತಮ್ಮ ಮಠಕ್ಕೆ ಬಂದು ಸಮೀಕ್ಷೆ ಮಾಡಿಲ್ಲಎಂದು ಸಿದ್ದಗಂಗಾ ಸ್ವಾಮೀಜಿಗಳೇ ಹೇಳಿದ್ದಾರೆ. ಏ.17 ರಂದು ಸಂಪುಟ ಸಭೆಯಲ್ಲಿ ವರದಿ ಚರ್ಚಿತಗೊಳ್ಳಲಿದ್ದು, ಜನರ ನಂಬಿಕೆಗಳ ವಿರುದ್ಧವಾಗಿ ಸರಕಾರ ತೀರ್ಮಾನ ತೆಗೆದುಕೊಳ್ಳಬಾರದು,’’ ಎಂದರು.
ರಾಜ್ಯದಲ್ಲಿ ಪಂಚಮಶಾಲಿ ಜನಸಂಖ್ಯೆ ಒಂದು ಕೋಟಿ 30 ಲಕ್ಷವಿದೆ. ವರದಿ ಸೋರಿಕೆ ಆಗಿದ್ದರಲ್ಲಿ ಕೇವಲ 16 ಲಕ್ಷ ಎಂದಿದೆ. ಸಮುದಾಯಕ್ಕೆ ಅನ್ಯಾಯವಾಗಿದ್ದು ಈ ಅನ್ಯಾಯ ಸರಿಪಡಿಸುವ ಹಿನ್ನೆಲೆಯಲ್ಲಿ ಚರ್ಚೆ ನಡೆಯಲಿ. ಅವೈಜ್ಞಾನಿಕ ವರದಿ ಸ್ವೀಕರಿಸುವುದು ಬೇಡ, ಎಂದು ಆಗ್ರಹಿಸಿದರು.
ಸ್ವಾತಂತ್ರ್ಯ ಬಂದಾಗಿನಿಂದಲೂ ಲಿಂಗಾಯತರ ಮೇಲೆ ಸರಕಾರಗಳು ಒಂದೊಂದು ರೀತಿಯಲ್ಲಿಅನ್ಯಾಯ ಮಾಡುತ್ತಿವೆ. ಇದು ಹೀಗೆ ಮುಂದುವರಿಯಬಾರದು. ಎಲ್ಲ ಸಮಾಜವನ್ನು ಪ್ರೀತಿಯಿಂದ ಕಾಣುವ ಕೆಲಸವಾಗಬೇಕು. ರಾಜಕೀಯ ಲಾಭಕ್ಕಾಗಿ ಒಂದು ಸಮಾಜವನ್ನು ಕೆಳಗಿಳಿಸುವ ಪ್ರಯತ್ನ ಮಾಡಬಾರದು. ಈ ನಿಟ್ಟಿನಲ್ಲಿ ಈ ಸಮಾಜದ ಶಾಸಕರು ಒಟ್ಟಾಗಿ ಮರು ಪರಿಶೀಲನೆ ಮಾಡಲು ಸಿ.ಎಂ.ಗೆ ಒತ್ತಾಯಿಸಬೇಕು, ಎಂದರು.