
ರಾಮನಗರ : ಬೆಂಗಳೂರು-ಮೈಸೂರು ರಸ್ತೆಯ ಪಿ.ಇ.ಎಸ್ ಕಾಲೇಜು ಬಳಿ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಬೈಕ್ನಲ್ಲಿದ್ದ ಶಿಕ್ಷಣ ಇಲಾಖೆಯ ಮಹಿಳಾ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

j3tvkannada
ಮಾಗಡಿ ಕ್ಷೇತ್ರ ಶಿಕ್ಷಣ ಅಧಿಕಾರಿ (ಬಿಇಒ) ಕಚೇರಿ ದ್ವಿತೀಯ ದರ್ಜೆ ಸಹಾಯಕಿ ರಕ್ಷಿತ (26) ಮೃತ ಯುವತಿಯಾಗಿದ್ದಾರೆ. ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ರಕ್ಷಿತ ಬೆಂಗಳೂರಿನಲ್ಲಿ ನೆಲೆಸಿದ್ದರು. ಬೆಂಗಳೂರಿನ ಬಸವನಗುಡಿ ವಿದ್ಯಾಪೀಠದ ಬಳಿ ಸಹೋದರನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅವರು, ಪ್ರತಿದಿನ ಬೆಂಗಳೂರಿನಿಂದ ಮಾಗಡಿಗೆ ಬಂದು ಹೋಗುತ್ತಿದ್ದರು.
ಮಾಗಡಿ ರಂಗನಾಥ ಜಾತ್ರೆ ಅಂಗವಾಗಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ನಡೆದ ಚಿತ್ರಮಂಟಪ ಉತ್ಸವದಲ್ಲಿ ಭಾಗವಹಿಸಿ ದೇವಾಲಯದ ಮುಂಭಾಗ ಶಿಕ್ಷಕಿಯರೊಂದಿಗೆ ನರ್ತಿಸಿ ಎಲ್ಲರ ಗಮನ ಸೆಳೆದಿದ್ದರು. ಮಾಗಡಿಯಿಂದ ಬೆಂಗಳೂರಿಗೆ ಬಸ್ನಲ್ಲಿ ಹೋದ ಅವರು ಗೊಲ್ಲರಹಟ್ಟಿ ಸ್ಟಾಪ್ನಲ್ಲಿ ಇಳಿದು, ಅಲ್ಲಿ ನಿಲ್ಲಿಸಿದ್ದ ತಮ್ಮ ದ್ವಿಚಕ್ರ ವಾಹನದಲ್ಲಿ ವಿದ್ಯಾಪೀಠದ ಮನೆಯತ್ತ ತೆರಳುವಾಗ ಕಾರು ಡಿಕ್ಕಿ ಹೊಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಸೇರಿದಂತೆ ತಾಲ್ಲೂಕು ಶಿಕ್ಷಣ ಇಲಾಖೆ ಮೃತರಿಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.