
ಮೈಸೂರು: ರಸ್ತೆ ವಿಸ್ತರಣೆ ನೆಪದಲ್ಲಿ 40 ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದ ಬೆನ್ನಲ್ಲೇ ಇದೀಗ ಉತ್ತನಹಳ್ಳಿ ದೇವಸ್ಥಾನ ರಸ್ತೆ ಮಾರ್ಗ ವಿಸ್ತರಣೆಗಾಗಿ 25 ಮರಗಳನ್ನು ಕಡಿಯಲು ಅನುಮತಿ ನೀಡುವಂತೆ ಲೋಕೋಪಯೋಗಿ ಇಲಾಖೆ ಅರಣ್ಯ ಇಲಾಖೆಗೆ ಪತ್ರ ಬರೆದಿದೆ. ಸಿಎಂ ತವರು ವರುಣ ಕ್ಷೇತ್ರಕ್ಕೆ ಸೇರಿದ ಉತ್ತನಹಳ್ಳಿ ಮೈಸೂರಿನ ಪ್ರಮುಖ ಧಾರ್ಮಿಕ ಕ್ಷೇತ್ರ. ನಿತ್ಯ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ರಸ್ತೆಯನ್ನು ವಿಸ್ತರಣೆ ಮಾಡುವ ಕಾಮಗಾರಿಗೆ ಟೆಂಡರ್ ಆಗಿದ್ದು, ಗುತ್ತಿಗೆದಾರ ಕೆಲಸವನ್ನೂ ಶುರು ಮಾಡಿದ್ದಾರೆ. ಸುಮಾರು 5.5 ಮೀಟರ್ ಇರುವ ರಸ್ತೆಯನ್ನು 14.5 ಮೀಟರ್ ಜೋಡಿ ರಸ್ತೆ ಮಾಡಲು ಲೋಕೋಪಯೋಗಿ ಇಲಾಖೆ ಉದ್ದೇಶಿಸಿದೆ. ಇದಕ್ಕಾಗಿ ಕಳೆದ 50 ವರ್ಷಗಳಿಂದ ಸಾರ್ವಜನಿಕರಿಗೆ ನೆರಳು, ಗಾಳಿ ನೀಡಿ, ಪಕ್ಷಿಗಳಿಗೆ ಆಶ್ರಯತಾಣವಾಗಿದ್ದ ಮರಗಳನ್ನು ಕಡಿಯಲು ಇಲಾಖೆ ಮುಂದಾಗಿದೆ.

j3tvkannada
70 ವರ್ಷ ತುಂಬಿರುವ ಅರಳಿ ಮತ್ತು ಆಲದ ಮರಗಳೂ ಇದ್ದು, ಇವುಗಳಿಗೆ ಕೊಡಲಿ ಪೆಟ್ಟು ಬೀಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮರಗಳನ್ನು ಉಳಿಸಿಕೊಂಡೇ ರಸ್ತೆ ವಿಸ್ತರಣೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ, ಎಂದು ಪರಿಸರ ಪ್ರೇಮಿಗಳು ಎಚ್ಚರಿಸಿದ್ದಾರೆ. ಉತ್ತನಹಳ್ಳಿ ದೇವಸ್ಥಾನಕ್ಕೆ ಹೋಗಲು ರಿಂಗ್ ರಸ್ತೆಯ ಸಂಪರ್ಕವಿದೆ. ದಿನದಿಂದ ದಿನಕ್ಕೆ ಉತ್ತನಹಳ್ಳಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ಶಕ್ತಿ ಯೋಜನೆ ಬಂದ ನಂತರವಂತೂ ಭಕ್ತರ ಸಂಖ್ಯೆ ದ್ವಿಗುಣವಾಗಿದೆ. ಈ ಭಾಗದ ಗ್ರಾಮಸ್ಥರು ರಸ್ತೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಕೂಡ ಮಾಡಿಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದ ಸುಮಾರು 3.60 ಕೋಟಿ ರೂ. ವೆಚ್ಚದ ರಸ್ತೆ ವಿಸ್ತರಣೆ ಕಾಮಗಾರಿ ಶುರುವಾಗಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆ 25 ಮರಗಳನ್ನು ಕಡಿಯಲು ಅನುಮತಿ ನೀಡುವಂತೆ ಅರಣ್ಯ ಇಲಾಖೆಗೆ ಪತ್ರ ಬರೆದು ಮನವಿ ಮಾಡಿಕೊಂಡಿದೆ.
ಎರಡು ಇಲಾಖೆಗಳು ಸರ್ವೇ ನಡೆಸಿ ಮರಗಳನ್ನು ಕಡಿಯಲು ಗುರುತು ಮಾಡಿವೆ. ಆದರೆ, ಕಡಿಯಲು ಅರಣ್ಯ ಇಲಾಖೆ ಇನ್ನೂ ಅನುಮತಿ ನೀಡಿಲ್ಲ. ಎಸ್.ಪಿ ಕಚೇರಿ ವೃತ್ತದಲ್ಲಿ 40 ಮರಗಳ ಹನನವಾಗಿ ವಾರವೂ ಕಳೆದಿಲ್ಲ. ಆಗಲೇ ಲೋಕೋಪಯೋಗಿ ಇಲಾಖೆ ಮತ್ತೆ 25 ಮರಗಳನ್ನು ಕಡಿಯಲು ಅರಣ್ಯ ಇಲಾಖೆಗೆ ಅನುಮತಿ ಕೇಳಿರುವುದು ಪರಿಸರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಸರಕಾರಿ ಇಲಾಖೆ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಕಡಿಯುವ ಪ್ರತಿ ಮರಕ್ಕೆ 10 ಸಸಿಗಳನ್ನು ಪರ್ಯಾಯವಾಗಿ ನೆಡಬೇಕು ಎಂದು ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ. ಬೃಹದಾಕಾರದ ಮರಗಳನ್ನು ಮರು ಸೃಷ್ಟಿಸಲು ಸಾಧ್ಯವೇ? ಆ ಮರಗಳನ್ನು ಬಿಟ್ಟು ರಸ್ತೆ ವಿಸ್ತರಣೆ ಮಾಡಬಹುದಲ್ಲವೆ? ಎಂಬುದು ಸಾರ್ವಜನಿಕರ ಪ್ರಶ್ನೆ.