
ಮಂಗಳೂರು: ಇತ್ತೀಚೆಗೆ ಅಡಿಕೆ ಬೆಳೆಗಾರರು ದರ ಕುಸಿತದಿಂದ ಕಂಗಾಲಾಗಿದ್ದರು. ಆದರೆ ಇದೀಗ ಅಡಿಕೆ ದರ ಏರಿಕೆ ಕಂಡಿದೆ. ಪ್ರಸ್ತುತ ಬಿಳಿ ಚಾಲಿ ಅಡಕೆ ದರ ಏರುಗತಿಯಲ್ಲಿ ಮುಂದುವರಿಯುತ್ತಿದ್ದರೆ, ರಬ್ಬರ್ ದರ ಇಳಿಕೆಯತ್ತ ಮುಖ ಮಾಡಿದೆ. ಕಳೆದ ತಿಂಗಳ ಮಧ್ಯಭಾಗದವರೆಗೂ ಕೆಜಿಗೆ 350 ರೂ. ಆಸುಪಾಸಿನಲ್ಲಿ ಕುಂಟುತ್ತಿದ್ದ ಅಡಕೆ ದರ ಈಗ 450 ರೂ. ದಾಟಿದ್ದು ಒಂದೇ ಒಂದು ತಿಂಗಳಲ್ಲಿ ಸುಮಾರು 100 ರೂ.ಗಿಂತ ಅಧಿಕ ಏರಿಕೆ ಕಂಡಿದೆ. ನವೆಂಬರ್ ತಿಂಗಳಿಂದ ಮಾರ್ಚ್ ವರೆಗೂ 300- 350ರೂ.ಗಳಲ್ಲಿ ಕುಂಟುತ್ತಿದ್ದ ಅಡಕೆ ದರ ಕೃಷಿಕರನ್ನು ಹತಾಶೆಗೆ ತಳ್ಳಿತ್ತು.

ಕಳೆದ ವರ್ಷದ ಬಿರು ಬೇಸಿಗೆ, ಬಳಿಕ ವಿಪರೀತ ಮಳೆ ಮೊದಲಾದ ಹವಾಮಾನ ವೈಪರೀತ್ಯಗಳಿಂದ ಅಡಕೆ ಫಸಲು ಅರ್ಧಕ್ಕಿಂತಲೂ ಕಡಿಮೆ ಇದ್ದು, ಆರಂಭದಿಂದಲೇ ಉತ್ತಮ ದರದ ನಿರೀಕ್ಷೆಯಲ್ಲಿದ್ದ ಕೃಷಿಕರು ಇದೀಗ ಸ್ವಲ್ಪ ಚೇತರಿಸಿಕೊಂಡಿದ್ದಾರೆ ಎನ್ನಬಹುದು. ಈಗಿನ ದರ ಇದೇ ರೀತಿ ಮುಂದುವರಿದರೆ ಹೊಸ ಅಡಕೆಗೆ ಕೆಜಿ ಒಂದಕ್ಕೆ 500 ರೂ. ತಲುಪುವ ಸಾಧ್ಯತೆ ಇದೆ. ಈಗಾಗಲೇ ಸಿಂಗಲ್ ಚೋಲ್ ಅಡಕೆ 500 ರೂ. ತಲುಪಿದೆ. ಕೃಷಿ ತೋಟಗಳ ನಿರ್ವಹಣೆಯ ವೆಚ್ಚ ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿದ್ದು, ಕೆಜಿ ಒಂದಕ್ಕೆ 500 ರೂ. ದರ ಸಿಕ್ಕಿದರೆ ಮಾತ್ರ ಅಡಕೆಯು ಹೆಚ್ಚಿನ ಲಾಭದಾಯಕ ಕೃಷಿಯಾಗಿ ಮುಂದುವರಿಯಲಿದೆ.
ಈಗಾಗಲೇ ಹೆಚ್ಚಿನ ಅಡಕೆಯನ್ನು ಮಾರಾಟ ಮಾಡಿರುವ ಸಣ್ಣ ರೈತರಿಗೆ ಈಗ ಅಡಕೆ ದರ ಏರುತ್ತಿರುವುದು ನಿರಾಸೆ ಉಂಟು ಮಾಡಿದೆ. ಆದರೆ ಅಡಕೆ ದಾಸ್ತಾನು ಇಟ್ಟಿರುವ ರೈತರಿಗೆ ಪ್ರಯೋಜನ ಸಿಗುತ್ತಿದೆ. ಪ್ರಸ್ತುತ ಹೆಚ್ಚಿನ ಭಾಗಗಳಲ್ಲಿ ಕೊಯ್ಲಿನ ಅಡಕೆ ಮಾರುಕಟ್ಟೆಗೆ ಬರುತ್ತಿದ್ದು, ಗುಣಮಟ್ಟ ಸಾಮಾನ್ಯಕ್ಕಿಂತ ಹೆಚ್ಚಿದೆ. ಬೇಗನೆ ಬಿದ್ದ ಬೇಸಿಗೆ ಮಳೆಯು ಅಡಕೆ ತೋಟಗಳ ನೀರಾವರಿ ವ್ಯವಸ್ಥೆಗೆ ಪೂರಕವಾಗಿದೆ. ಮಂಗಳೂರಿನಲ್ಲಿ ಬಿಳಿ ಚಾಲಿ ಅಡಕೆ ದರ ಏರಿಕೆಯಾಗುತ್ತಿದ್ದು, ರಬ್ಬರ್ ದರ ಕುಸಿತ ರೈತರನ್ನು ಚಿಂತೆಗೀಡು ಮಾಡಿದೆ. ಅಡಕೆ ದರ 450 ರೂ. ದಾಟಿದ್ದು, ರಬ್ಬರ್ ಬೆಲೆ 193 ರೂ.ಗೆ ಇಳಿದಿದೆ. ಹವಾಮಾನ ವೈಪರೀತ್ಯದಿಂದ ರಬ್ಬರ್ ಇಳುವರಿ ಕುಂಠಿತಗೊಂಡಿದ್ದು, ದರವೂ ಇಳಿಕೆಯಾಗಿರುವುದು ಬೆಳೆಗಾರರಿಗೆ ಬರೆ ಹಾಕಿದೆ. ಆದರೆ ಅಡಕೆ ದರ ಏರಿಕೆಯಾಗುತ್ತಿರುವುದು ಬೆಳೆಗಾರರನ್ನು ಸಂತಸಕ್ಕೆ ತಳ್ಳಿದೆ.
ಆಗಾಗ ಸುರಿಯುತ್ತಿರುವ ಬೇಸಿಗೆ ಮಳೆ, ಚಳಿ ಇಲ್ಲದ ಚಳಿಗಾಲ, ವಿಪರೀತ ಸೆಕೆ, ಬಿಸಿಲು ವಾತಾವರಣ ಇತ್ಯಾದಿ ಕಾರಣಗಳಿಂದ ರಬ್ಬರ್ ಇಳುವರಿಯು ಕುಂಠಿತಗೊಂಡಿದೆ. ಕಳೆದ 10 ವರ್ಷಗಳಿಂದ ಹೊಸ ರಬ್ಬರ್ ತೋಟಗಳನ್ನು ನಿರ್ಮಿಸಲು ಕೃಷಿಕರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ತೋಟಗಳ ಸಂಖ್ಯೆಯೂ ಕಡಿಮೆಯಾಗಿದೆ. ಹೆಚ್ಚಿನ ತೋಟಗಳನ್ನು ಕೃಷಿಕರು ಲೀಸ್ಗೆ ನೀಡಿದ್ದು, ಲೀಸ್ಗೆ ಪಡೆದವರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಕೆಲವು ಕಡೆಗಳಲ್ಲಿ ರಬ್ಬರ್ ಮರಗಳನ್ನು ಕಡಿದು ಇತರ ಬೆಳೆಗಳನ್ನು ಬೆಳೆಯುವತ್ತ ರೈತರು ಆಸಕ್ತರಾಗಿದ್ದಾರೆ.