
ಚಿಂತಾಮಣಿ : ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿಯಲ್ಲಿ ಭಾನುವಾರ ರಾತ್ರಿ ಒಂದೇ ಸಮುದಾಯದ 2 ಗುಂಪುಗಳ ನಡುವೆ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ಕ್ಷುಲ್ಲಕ ಜಗಳ ಇಬ್ಬರ ಕೊಲೆಯಲ್ಲಿಅಂತ್ಯಗೊಂಡಿದೆ. ಗ್ರಾಮದ ಲಿಂಗಮಯ್ಯ (38) ಮತ್ತು ಪ್ರತಾಪ್(24) ಕೊಲೆಗೀಡಾಗಿದ್ದಾರೆ. ಇದೇ ವೇಳೆ ಚಾಕು ಇರಿತದಿಂದ ಸಾಗರ್(22) ಎಂಬಾತ ತೀವ್ರವಾಗಿ ಗಾಯಗೊಂಡಿದ್ದಾರೆ. ಬುಡ್ಗಜಂಗಮ ಸಮುದಾಯದ ಲಿಂಗಮಯ್ಯ ಮತ್ತು ಈಶ್ವರಪ್ಪ ಕುಟುಂಬಗಳ ನಡುವೆ ಹಲವಾರು ವರ್ಷಗಳಿಂದ ಆಗಾಗ ಗಲಾಟೆ, ಜಗಳಗಳು ನಡೆಯುತ್ತಲೇ ಇದ್ದವು.

ಭಾನುವಾರ ರಾತ್ರಿ ಈಶ್ವರಪ್ಪ ಕುಟುಂಬದವರು ಏಕಾಏಕಿ ಲಿಂಗಮಯ್ಯ ಕುಟುಂಬದ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿದ್ದಾರೆ. ಲಿಂಗಮಯ್ಯ ಮತ್ತು ಅವರ ಅಣ್ಣ ಕೃಷ್ಣಪ್ಪನ ಮಗ ಪ್ರತಾಪ್ ಸ್ಥಳದಲ್ಲೇ ಮೃತಪಟ್ಟರೆ, ತೀವ್ರ ಗಾಯಾಳು ಸಾಗರ್(22) ನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿದ್ದಾರೆ.
ಕೊಲೆಯಾಗಿರುವವರು ಮತ್ತು ಗಾಯಾಳು ಒಂದೇ ಕುಟುಂಬದವರಾಗಿದ್ದು, ಮತ್ತೊಂದು ಕುಟುಂಬದ ಈಶ್ವರಪ್ಪ, ಜಾನ್ ಬಾಬು, ಮಹಿಮರಾಜು, ವಂಶಿ, ಮಹೇಶ್, ಬಾಲು, ಶಿವಣ್ಣ, ಮಲ್ಲೇಶ್ ಹಲ್ಲೆಮಾಡಿ, ಕೊಲೆಗೈದಿರುವ ಆರೋಪಿಗಳು. ಸುಮಾರು 40 ವರ್ಷಗಳ ಹಿಂದೆ ಆಂಧ್ರ ಪ್ರದೇಶದಿಂದ ವಲಸೆ ಬಂದು ಬಟ್ಲಹಳ್ಳಿಯಲ್ಲಿ ಬದುಕು ಕಟ್ಟಿಕೊಂಡಿದ್ದರು ಎನ್ನಲಾಗಿದೆ.
ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, 2 ಕುಟುಂಬಗಳ ನಡುವೆ ಸುಮಾರು ವರ್ಷಗಳ ಹಳೆಯ ದ್ವೇಷವಿತ್ತು. 9 ವರ್ಷಗಳ ಹಿಂದೆ ಲಂಗಮಯ್ಯ ಸಹೋದರನನ್ನು ಈಶ್ವರಪ್ಪ ಕುಟುಂಬದವರೇ ತಮಿಳುನಾಡಿನಲ್ಲಿ ಕೊಲೆ ಮಾಡಿದ್ದರು, ಅಂದಿನಿಂದಲೂ ಹಗೆತನವಿತ್ತು. ಎರಡು ಕುಟುಂಬಗಳ ನಡುವೆ ಯಾವುದೇ ಮಾತುಕತೆ, ವ್ಯವಹಾರ ಇರಲಿಲ್ಲ. 4 ವರ್ಷಗಳ ಹಿಂದೆ ಇದೇ ರೀತಿ ದಾಳಿ ನಡೆಸಿದ್ದರು. ನಂತರ ಅವರೇ ನಮ್ಮ ಮೇಲೆ ದೌರ್ಜನ್ಯ ನಡೆಸಿ ದೂರು ನೀಡಿದ್ದರು. ಪೊಲೀಸ್ ಠಾಣೆಯಲ್ಲಿ ರಾಜಿ ಪಂಚಾಯಿತಿ ನಡೆದು ಬಿ ರಿಪೋರ್ಟ್ ಹಾಕಿದ್ದರು ಎಂದು ಮೃತ ಲಿಂಗಮಯ್ಯನ ಸಹೋದರ ತಿಳಿಸಿದ್ದಾರೆ.
ಜಿಲ್ಲಾಎಸ್ಪಿ ಕುಶಾಲ್ ಚೌಕ್ಸೆ, ಬಟ್ಲಹಳ್ಳಿ ಠಾಣೆ ಇನ್ಸ್ಪೆಕ್ಟರ್ ವೆಂಕಟರವಣಪ್ಪ ಸ್ಥಳಕ್ಕೆ ಮತ್ತು ನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಕಳೆದ ತಿಂಗಳು ಸಹ ಒಂದು ಪ್ರಕರಣ ದಾಖಲಾಗಿದೆ. ದೂರು ಸ್ವೀಕರಿಸಿದ್ದೇವೆ. ಶೀಘ್ರವೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಎಸ್ಪಿ ಕುಶಾಲ್ ಚೌಕ್ಸೆ ತಿಳಿಸಿದರು.