
ಮಂಡ್ಯ: ಬತ್ತಿ ಹೋಗಿದ್ದ ತಾಲ್ಲೂಕಿನ ಟಿ.ಎಂ. ಹೊಸೂರು ಗ್ರಾಮದ ದೇವರ ಕೊಳವನ್ನು ನರೇಗಾ ಯೋಜನೆಯಡಿ ಪುನರ್ ನಿರ್ಮಾಣ ಮಾಡಿದ್ದು, ಹಲವು ದಶಕಗಳ ಬಳಿಕ ಈ ಕೊಳದಲ್ಲಿ ಜೀವಜಲ ತುಂಬಿದೆ.

j3tvkannada
ಗ್ರಾಮಕ್ಕೆ ಹೊಂದಿಕೊಂಡಿರುವ ಶತಮಾನದಷ್ಟು ಹಳೆಯದಾದ ದೇವರ ಕೊಳ ಶೇ 90 ಭಾಗ ಮುಚ್ಚಿ ಹೋಗಿತ್ತು. ಕೊಳದ ಸುತ್ತ ಹಾಗೂ ಒಳ ಭಾಗದಲ್ಲಿ ಮುಳ್ಳು ಕಂಟಿಗಳು ಬೆಳೆದಿದ್ದವು. ಕಾಡು ಕಲ್ಲಿನ ಗೋಡೆಗಳು ಕುಸಿದುಬಿದ್ದಿದ್ದವು. ಹಾವು, ಹಲ್ಲಿಗಳು ಹರಿದಾಡುತ್ತಿದ್ದವು. ಎದೆ ಎತ್ತರ ಕೆಸರು ತುಂಬಿಕೊಂಡಿತ್ತು.
ಇಲ್ಲಿ ಕೊಳ ಇತ್ತು ಎಂದು ಹೇಳಲಾಗದಷ್ಟು ದುಸ್ಥಿತಿ ತಲುಪಿದ್ದ ಕೊಳಕ್ಕೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯಡಿ ಸ್ಥಳೀಯ ಗ್ರಾಮ ಪಂಚಾಯಿತಿ ಕಾಲಕಲ್ಪ ನೀಡಿದೆ. ಇದರ ಪರಿಣಾಮವಾಗಿ ಟಿ.ಎಂ. ಹೊಸೂರು ದೇವರ ಕೊಳದಲ್ಲಿ ಮತ್ತೆ ಜೀವ ಜಲ ತುಂಬಿದೆ.ಟಿ.ಎಂ. ಹೊಸೂರು ಗ್ರಾಮದ ದೇವರ ಕೊಳವನ್ನು ನರೇಗಾ ಯೋಜನೆಯಡಿ, ₹ 9.50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕೊಳದ ಒಳಗೆ ತುಂಬಿದ ಕೆಸರನ್ನು ಖಾಲಿ ಮಾಡಿ ಗಿಡಗಂಟಿಗಳನ್ನು ಕಿತ್ತು ಹಸನು ಮಾಡಲಾಗಿದೆ. ಕುಸಿದಿದ್ದ ಕಾಡು ಕಲ್ಲಿನ ಗೋಡೆಗೆ ಪರ್ಯಾಯವಾಗಿ ಚಪ್ಪಡಿ, ಸೈಜುಗಲ್ಲು ಮತ್ತು ಸಿಮೆಂಟ್ನಿಂದ ಚೌಕಾಕಾರದ ನಿರ್ಮಾಣ ಮಾಡಲಾಗಿದೆ.ಕೊಳದ ನಾಲ್ಕೂ ಕಡೆಗಳಿಂದ ಸಲೀಸಾಗಿ ಹತ್ತಿ ಇಳಿಯುವ ವ್ಯವಸ್ಥೆ ಮಾಡಲಾಗಿದೆ. ನೀರು ಕಲುಷಿತವಾಗುವುದನ್ನು ತಡೆಯಲು ಕೊಳದ ಸುತ್ತಲೂ ತಂತಿ ಬೇಲಿಯನ್ನೂ ನಿರ್ಮಿಸಲಾಗಿದೆ. ಪುಟ್ಟ ಕೊಳವೀಗ ಆಕರ್ಷಕ ಕಲ್ಯಾಣಿಯ ರೂಪ ಪಡೆದಿದ್ದು ನೋಡುಗರ ಗಮನ ಸೆಳೆಯುತ್ತಿದೆ. ಮುಖ್ಯವಾಗಿ ಈ ಕೊಳದಲ್ಲಿ ಹತ್ತಾರು ಅಡಿಗಳಷ್ಟು ನೀರು ತುಂಬಿ ನಳನಳಿಸುತ್ತಿದೆ.