
ದಾವಣಗೆರೆ: ಪ್ರಮುಖ ಧಾರ್ಮಿಕ ಕೇಂದ್ರವಾದ ಉಕ್ಕಡಗಾತ್ರಿ ಗ್ರಾಮಕ್ಕೆ ಹಳೆಪಾಳ್ಯ ಗ್ರಾಮದಿಂದ ನೇರ ಸಂಪರ್ಕ ಕಲ್ಪಿಸಲು ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವಂತೆ ಸ್ಥಳೀಯರು ಮತ್ತು ಭಕ್ತರಿಂದ ಕೂಗು ಕೇಳಿ ಬಂದಿದೆ. ಹರಿಹರದಿಂದ ಮಲೇಬೆನ್ನೂರು ಮಾರ್ಗದಲ್ಲಿ ಬಲಬದಿಯ ಎಕ್ಕೆಗೊಂದಿ ಮಾರ್ಗವಾಗಿ ಸಾಗಿದರೆ ಭಾನುವಳ್ಳಿ, ಕಡರನಾಯ್ಕನ ಹಳ್ಳಿ ಗ್ರಾಮಗಳು ಸಿಗುತ್ತದೆ.ಅಲ್ಲಿಂದ ಬಲಕ್ಕೆ ತಿರುಗಿದರೆ ತುಂಗಭದ್ರಾ ನದಿ ದಂಡೆಯೊಲ್ಲಿ ಹಳೆಪಾಳ್ಯ ಗ್ರಾಮ ಇದೆ.ಗ್ರಾಮಕ್ಕೆ ನೇರವಾಗಿ ನದಿಯ ಇನ್ನೊಂದು ದಡದಲ್ಲಿ ಉಕ್ಕಡಗಾತ್ರಿ ಇದೆ. ಗ್ರಾಮಗಳ ನಡುವೆ ನೇರ ಸಂಪರ್ಕಕ್ಕೆ ಸೇತುವೆ ನಿರ್ಮಿಸಿದರೆ ಉಕ್ಕಡಗಾತ್ರಿಯಿಂದ ನೇರವಾಗಿ ಹರಿಹರ ತಾಲ್ಲೂಕಿಗೆ ಸಂಪರ್ಕ ಒದಗಿಸಿದಂತಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.ಪ್ರಸ್ತುತ ನಂದಿಗುಡಿ ಸೇತುವೆ ದಾಟಿದ ತಕ್ಷಣ ಕೂಸಗಟ್ಟಿ ಗ್ರಾಮದಿಂದ ಬಲಕ್ಕೆ ವಾಹನಗಳು ಪತ್ತೇಪುರ ಮಾರ್ಗವಾಗಿ ಸಾಗಿ ಉಕ್ಕಡಗಾತ್ರಿಗೆ ತಲುಪುತ್ತಿವೆ.ಈ ರಸ್ತೆ ಕಿರಿದಾಗಿರುವುದರಿಂದ ಸಂಚಾರ ದಟ್ಟಣೆ ಸಾಮಾನ್ಯವಾಗಿದೆ.ಮಳೆಗಾಲದಲ್ಲಿ ನದಿ ಸಂಪೂರ್ಣ ಭರ್ತಿಯಾದಾಗ ಅದರ ಹಿನ್ನೀರಿನಿಂದ ಸೇತುವೆ ಆವೃತವಾಗಿ ಮಾರ್ಗ ಸ್ಥಗಿತವಾಗುತ್ತದೆ.ಇದರಿಂದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು, ಅನಾರೋಗ್ಯ ಪೀಡಿತರು ಆಸ್ಪತ್ರೆಗೆ ತೆರಳಲು ಅಸಾಧ್ಯವಾಗುತ್ತದೆ.ಈ ರಸ್ತೆಯೂ ಸೇರಿದಂತೆ ಉಕ್ಕಡಗಾತ್ರಿ ಸುತ್ತಮುತ್ತಲಿನ ಗ್ರಾಮಗಳು ಹಾವೇರಿ ಜಿಲ್ಲಾ ವ್ಯಾಪ್ತಿಯಲ್ಲಿದ್ದು,ಅಭಿವೃದ್ಧಿ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂಬ ಆರೋಪಗಳಿವೆ.

j3tvkannada

ತುಂಗಭದ್ರಾ ನದಿಯ ಈಚೆ ಇರುವ ನಂದಿಗುಡಿ, ಗೋವಿನಹಾಳು ಗ್ರಾಮಗಳು ಉಕ್ಕಡಗಾತ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿವೆ. ಗ್ರಾಮಗಳ ಜನರು ಗ್ರಾಮ ಪಂಚಾಯಿತಿಗೆ ಕೆಲಸಕ್ಕೆ ತೆರಳಲು ಪತ್ತೆಪುರ ಮಾರ್ಗವಾಗಿ ಉಕ್ಕಡಗಾತ್ರಿ ತಲುಪಬೇಕಿದೆ. ಇದರಿಂದ ಸಮಯ, ಹಣ ವ್ಯರ್ಥವಾಗುತ್ತಿದೆ ಎನ್ನುತ್ತಾರೆ ಉಕ್ಕಡಗಾತ್ರಿ ಗ್ರಾಮದ ವಕೀಲ ಮಂಜುನಾಥ ದೊಡ್ಕನಿ. ಹಳೆಪಾಳ್ಯದಲ್ಲಿನ ಕೆಲ ನಿವಾಸಿಗಳಿಗೆ ವಸತಿ ಯೋಜನೆ ಕಲ್ಪಿಸಿ ಹೊಸಪಾಳ್ಯಕ್ಕೆ ಸ್ಥಳಾಂತರ ಮಾಡಲಾಗಿದ್ದು,ಕೆಲವು ಮನೆಗಳನ್ನು ಹೊರತುಪಡಿಸಿ ಅಲ್ಲಿ ಸಾಕಷ್ಟು ಸ್ಥಳಾವಕಾಶ ಇರುವುದರಿಂದ ಸೇತುವೆ ನಿರ್ಮಾಣಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ. ಇದರಿಂದ ಹಣ ಹಾಗೂ ಸಮಯದ ಉಳಿತಾಯವಾಗುತ್ತದೆ.ಜೊತೆಗೆ ತಾಲ್ಲೂಕು ಆಡಳಿತದಿಂದಲೇ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎನ್ನುತ್ತಾರೆ ವಾಸನ ಗ್ರಾಮದ ಗದಿಗೆಪ್ಪ ಗಂಟೇರ ನಂದಿಗುಡಿ ಬಳಿ ಸೇತುವೆ ನಿರ್ಮಾಣ ಆಗುವುದಕ್ಕೂ ಮೊದಲು ಭಕ್ತರು ಹಳೆಪಾಳ್ಯದ ದಡದಿಂದ ದೋಣಿ, ತೆಪ್ಪದ ಮುಖಾಂತರ ನದಿ ದಾಟಿ ಉಕ್ಕಡಗಾತ್ರಿ ತಲುಪುತ್ತಿದ್ದರು.

ಸೇತುವೆ ನಿರ್ಮಾಣದ ಬಳಿಕ ದೋಣಿ ಮತ್ತು ತೆಪ್ಪಗಳು ಮೂಲೆ ಗುಂಪಾದವು.ದೊಡ್ಡ ಸೇತುವೆ ಅಲ್ಲದಿದ್ದರು ಕಾಲ್ನಡಿಗೆ ಮೂಲಕ ಸಾಗಲು ಅವಕಾಶವಾಗುವ ಸೇತುವೆಯನ್ನಾದರೂ ನಿರ್ಮಿಸಿದರೆ ಭಕ್ತರು ವಾಹನಗಳನ್ನು ಹಳೆಪಾಳ್ಯದಲ್ಲಿಯೇ ನಿಲ್ಲಿಸಿ ಹೋಗಿಬರುಬಹುದು.ಆಗ ಉಕ್ಕಡಗಾತ್ರಿಯಲ್ಲೂ ವಾಹನಗಳ ದಟ್ಟಣೆಯ ಕಿರಿ ಕಿರಿ ತಪ್ಪುತ್ತದೆ ಎನ್ನುತ್ತಾರೆ ಅವರು. ಉಕ್ಕಡಗಾತ್ರಿ ಗ್ರಾಮ ದಾಟಿದ ತಕ್ಷಣ ಬರುವ ಹಾವೇರಿ ಜಿಲ್ಲಾ ವ್ಯಾಪ್ತಿಯಲ್ಲಿ ರಸ್ತೆ ಅಪಘಾತ ಇನ್ನಿತರ ಸಮಸ್ಯೆ ಉಂಟಾದಲ್ಲಿ ರಾಣೇಬೆನ್ನೂರು ವ್ಯಾಪ್ತಿಯ ಪೋಲಿಸರೇ ಬರಬೇಕಿದೆ. ಸಂಪರ್ಕ ಸೇತುವೆ ನಿರ್ಮಾಣವಾದರೆ ಅಲ್ಲಿನ ಪೊಲೀಸರು ಬರುವುದನ್ನು ಕಾಯುವ ಅವಶ್ಯಕತೆ ಬೀಳುವುದಿಲ್ಲ.ವಿವಿಧ ಇಲಾಖೆಗಳಲ್ಲಿ ಕೆಲಸಗಳ ನಿಮಿತ್ತ ತಾಲ್ಲೂಕು ಕೇಂದ್ರಕ್ಕೂ ನೇರವಾಗಿ ಬರಲು ಅನುಕೂಲವಾಗುತ್ತದೆ. ಈ ವಿಚಾರವನ್ನು ಶಾಸಕರು, ಸಚಿವರು ಹಾಗೂ ಸಂಸದರ ಗಮನಕ್ಕೂ ತರುತ್ತೇವೆ’ ಎಂದು ಉಕ್ಕಡಗಾತ್ರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರಗೌಡ ಜಿಗಳೇರ ತಿಳಿಸಿದರು.