
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತ ಪೊಲೀಸರ ತಂಡ ದಿಢೀರ್ ಭೇಟಿ ನೀಡಿ ಹಲವು ದಾಖಲೆಗಳನ್ನು ಪರಿಶೀಲಿಸಿತು.

j3tvkannada
ಚಿತ್ರದುರ್ಗ:ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರವು ಅಂದಾಜು 48 ಹಳ್ಳಿಗಳಿಗೆ ಆರೋಗ್ಯ ಸೇವೆ ನೀಡುತ್ತದೆ. ಅನಾರೋಗ್ಯ, ಅಪಘಾತ, ತುರ್ತು ವೈದ್ಯಕೀಯ ವ್ಯವಸ್ಥೆಗಾಗಿ ನಿತ್ಯ ಹಲವರು ಇದೇ ಆಸ್ಪತ್ರೆಗೆ ಬರುತ್ತಾರೆ. ಆದರೆ, ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ವೈದ್ಯಕೀಯ ಸೌಲಭ್ಯಗಳು, ಶುಚಿತ್ವದ ಕೊರತೆ ಸೇರಿ ಹಲವು ಸಮಸ್ಯೆಗಳು ರೋಗಿಗಳ ಅನುಭವಕ್ಕೆ ಬಂದಿವೆ.
ಆಸ್ಪತ್ರೆಯಲ್ಲಿ ಖಾಯಂ ಆಡಳಿತಾಧಿಕಾರಿ ಇಲ್ಲ. ಹಲವು ತಿಂಗಳಿಂದ ತಾಲ್ಲೂಕು ವೈದ್ಯಾಧಿಕಾರಿಯೇ ಇಲ್ಲಿನ ಆಸ್ಪತ್ರೆಗೂ ಹೆಚ್ಚುವರಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ವಾರಕ್ಕೊಮ್ಮೆಯೂ ಆಸ್ಪತ್ರೆಗೆ ಬರುತ್ತಿಲ್ಲ. ಪಾಳಿಪದ್ಧತಿಯಲ್ಲಿ ಕರ್ತವ್ಯ ನಿರ್ವಹಿಸಬೇಕಿರುವ ವೈದ್ಯರು 24 ಗಂಟೆಗಳವರೆಗೂ ನಿರಂತರವಾಗಿ ಕರ್ತವ್ಯ ನಿರ್ವಹಿಸಿ ನಂತರ ಮೂರು ದಿನಗಳ ಕಾಲ ಆಸ್ಪತ್ರೆ ಕಡೆಗೆ ತಿರುಗಿ ನೋಡುವುದಿಲ್ಲ. ಆಯುಷ್ ವೈದ್ಯರೊಬ್ಬರೇ ನಿತ್ಯ ಆಸ್ಪತ್ರೆಯಲ್ಲಿ ಖಾಯಂ ವೈದ್ಯರಾಗಿದ್ದಾರೆ. ಹಾಗಾಗಿ ಯಾವ ವೈದ್ಯರು ಯಾವ ದಿನ ಬರುತ್ತಾರೆ ಎಂಬುದು ಯಾವ ರೋಗಿಗೂ ತಿಳಿಯುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು. ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ ಅವರ ನೇತೃತ್ವದ ಅಧಿಕಾರಿಗಳ ತಂಡ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಹಲವು ದಾಖಲೆಗಳನ್ನು ಪರಿಶೀಲಿಸಿತು. ನಂತರ ಆಸ್ಪತ್ರೆಯಲ್ಲಿದ್ದ ರೋಗಿಗಳಿಂದ ಮಾಹಿತಿ ಪಡೆದರು.