
ಚಿಕ್ಕಮಗಳೂರು: ಬೆಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಜಯಪುರ ಸಮೀಪದ ಮೂರುಗದ್ದೆ, ಜಲದುರ್ಗ ನಡುವೆ ಚಾಲಕನ ನಿಯಂತ್ರಣ ತಪ್ಪಿ ಪುಟ್ಟಪ್ಪ ಪೂಜಾರಿ ಎಂಬುವವರ ಮನೆಯ ಮೇಲೆ ಬಿದ್ದಿದ್ದು 30 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ.

j3tvkannada
ಬೆಂಗಳೂರು ಡಿಪೊಗೆ ಸೇರಿದ ಬಸ್ನಲ್ಲಿ 45 ಜನ ಪ್ರಯಾಣಿಸುತ್ತಿದ್ದರು. 10 ಜನರನ್ನು ಜಯಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಾಲಕ ವೆಂಕಪ್ಪ ಸೇರಿದಂತೆ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಪಲ್ಟಿಯಾಗಿ ಬಿದ್ದ ಹೊಡೆತಕ್ಕೆ ಮನೆಯ ಒಳಗಿದ್ದ ಶಾಂತ ಎಂಬುವವರಿಗೆ ಗಾಯಗಳಾಗಿವೆ. ಸ್ಥಳೀಯರು ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು. ‘ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಹಳೆಯ ಬಸ್ ಇದಾಗಿದ್ದು, ನಿರ್ವಹಣೆ ಕೊರತೆಯೂ ಇರಬಹುದು’ ಎಂದು ಸ್ಥಳೀಯರು ದೂರಿದ್ದಾರೆ. ಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.