
ಕೊಡಗು: ಸೋಮವಾರಪೇಟೆ ತಾಲ್ಲೂಕಿನ ಮನೆಹಳ್ಳಿಯ ಶ್ರೀ ತಪೋಕ್ಷೇತ್ರದಲ್ಲಿ ಏ.12ರಿಂದ ಅದ್ದೂರಿ ಜಾತ್ರೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. 24 ವರ್ಷಗಳ ಇತಿಹಾಸವಿರುವ ತಾಲ್ಲೂಕಿನ ಮನೆಹಳ್ಳಿ ಶ್ರೀ ತಪೋಕ್ಷೇತ್ರ ಅತಿ ಕಡಿಮೆ ಅವದಿಯಲ್ಲಿ ಜನಮನ್ನಣೆ ಗಳಿಸಿ, ಹಲವು ಜನಪರ ಕಾರ್ಯ, ಸಮಾಜಮುಖಿ ಕೆಲಸಗಳಿಂದ ಭಕ್ತರ ಪ್ರೀತಿಗೆ ಪಾತ್ರವಾಗಿದೆ.

ಕೊಡ್ಲಿಪೇಟೆ ಹೋಬಳಿಯಲ್ಲಿನ ಸುಂದರ ಪ್ರಕೃತಿಯ ಮಧ್ಯೆ ಪ್ರಶಾಂತ ವಾತಾವರಣದಲ್ಲಿ ರಾರಾಜಿಸುತ್ತಿರುವ ಶ್ರೀ ಕ್ಷೇತ್ರ ತಪೋವನ ಮನೆಹಳ್ಳಿ ಮಠ, ಶ್ರೀ ಮಹಂತ ಸ್ವಾಮೀಜಿಯವರ ನೇತೃತ್ವದಲ್ಲಿ ವೀರಶೈವ ಪರಂಪರೆಯ ಶಕ್ತಿಯಾಗಿ, ಸಂಸ್ಕಾರ, ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿ ಭಕ್ತರಿಗೆ ದಾರಿ ದೀಪವಾಗುವುದರೊಂದಿಗೆ ಪುಣ್ಯಕ್ಷೇತ್ರವಾಗಿದೆ. ಶ್ರೀ ಕ್ಷೇತ್ರ ಯತಿಗಳ ತಪೋನುಷ್ಠಾನಕ್ಕೆ ಅವಕಾಶ ಕಲ್ಪಿಸಿಕೊಟ್ಟ ಪುಣ್ಯ ಭೂಮಿಯಾಗಿತ್ತು. ಶ್ರೀ ಗುರುಸಿದ್ದ ವೀರೇಶ ಯತಿಗಳ ತಪಶಕ್ತಿಯ ಫಲವಾಗಿ ಮನೆಹಳ್ಳಿಯ ಈ ಕ್ಷೇತ್ರಕ್ಕೆ ‘ತಪೋವನ’ ಎಂಬ ಹೆಸರು ಬಂದಿತು. ಹಿಂದೆ ಶ್ರೀ ವೀರೇಶ ಎಂಬ ಯತಿಗಳು ತಮ್ಮ ಸಂಚಾರದ ಅವಧಿಯಲ್ಲಿ ಕೇರಳ ಸಂಚಾರದ ನಂತರ ಕರ್ನಾಟಕದ ಸುಂದರ ಜಿಲ್ಲೆ ಪ್ರಕೃತಿಯ ರಮಣೀಯ ಸ್ಥಳವಾದ ಕೊಡಗಿಗೆ ಭೇಟಿ ಕೊಡುತ್ತಾರೆ. ಇಲ್ಲಿಯ ಜೀವನದಿ ಕಾವೇರಿ ಉಗಮ ಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಂದ ಸೋಮವಾರಪೇಟೆ ಸಮೀಪ ಇರುವ ಪುಷ್ಪಗಿರಿ ತಪ್ಪಲಿನಲ್ಲಿ ಧ್ಯಾನಸ್ಥರಾಗಿರುವಾಗ ಶ್ರೀ ವೀರಭದ್ರರ ಪ್ರೇರಣೆಯಾಗುತ್ತದೆ.