
ಧಾರವಾಡ : ತಾಲ್ಲೂಕಿನ ಬರದ್ವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡ್ಲಿವಾಡ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಜಲ ಮೂಲಗಳಾದ ಕೆರೆ, ಬಾವಿ, ಕೊಳವೆ ಬಾವಿಗಳು ಬರಿದಾಗಿದ್ದು, ಗ್ರಾಮಸ್ಥರು ಒಂದು ತಿಂಗಳಿಂದ ಪಕ್ಕದ ಗ್ರಾಮಗಳು ಹಾಗೂ ಹೊಲ ಗದ್ದೆಗಳಲ್ಲಿರುವ ಕೆರೆ-ಬಾವಿಗಳಿಂದ ನೀರು ತಂದು ದಾಹ ನೀಗಿಸಿಕೊಳ್ಳುತ್ತಿದ್ದಾರೆ. ಕೊಡ್ಲಿವಾಡ ಗ್ರಾಮದಲ್ಲಿ ಅಂದಾಜು 15 ಸಾವಿರ ಜನಸಂಖ್ಯೆ ಇದೆ. ಗ್ರಾಮದ 6 ಎಕರೆ ವಿಸ್ತೀರ್ಣದ ದೊಡ್ಡ ಕೆರೆಯು ಜನರ ಜೀವನಾಡಿಯಾಗಿತ್ತು. ಆದರೆ ಈ ಕೆರೆಯೂ ಒಣಗಿದೆ. ಗ್ರಾಮದಲ್ಲಿ 50 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಇದ್ದೂ ಇಲ್ಲದಂತಾಗಿದೆ. ಶುದ್ಧ ನೀರಿನ ಘಟಕವೂ ಕೆಟ್ಟು ನಿಂತಿದೆ. ಜಲಜೀವನ್ ಮಿಷನ್ ಕಾಮಗಾರಿಯೂ ಅಪೂರ್ಣವಾಗಿದೆ.

ಈ ಬಾರಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಮೂರು-ನಾಲ್ಕು ದಿನಗಳಿಗೊಮ್ಮೆ ಒಂದೇ ನಳದ ಮೂಲಕ ನೀರು ಪೂರೈಸಲಾಗುತ್ತಿದ್ದು, ಊರಿನ ಜನರೆಲ್ಲ ಸಾಲಿನಲ್ಲಿ ನಿಂತು ನೀರು ತುಂಬಿಸಿಕೊಳ್ಳುವ ಅನಿವಾರ್ಯ ಎದುರಾಗಿದೆ. ಒಂದು ಕುಟುಂಬಕ್ಕೆ 8-10 ಕೊಡ ನೀರು ಮಾತ್ರ ಸಿಗುತ್ತಿದೆ. ಈ ನೀರು ಎರಡು ದಿನಕ್ಕೆ ಕುಡಿಯಲು ಮಾತ್ರ ಸಾಲುತ್ತದೆ. ಉಳಿದಂತೆ ದೈನಂದಿನ ಬಳಕೆಗೆ ಪರದಾಡುವಂತಾಗಿದೆ. ಜನರು ದಿನ ನಿತ್ಯ ಬಳಕೆಗೆ ಹಾಗೂ ಜಾನುವಾರುಗಳಿಗೆ ಹೊಲಗಳಲ್ಲಿನ ಕೆರೆಗಳತ್ತ ಹೋಗಿ, ಚಾಕಲಬ್ಬಿ ಗ್ರಾಮದ ರಸ್ತೆಯಲ್ಲಿರುವ ಸುಮಾರು 2 ಕಿ.ಮೀ. ದೂರದ ಬಾವಿಗಳಿಂದ ನೀರು ತಂದು ದಿನ ದೂಡುತ್ತಿದ್ದಾರೆ. ಗ್ರಾಮದಲ್ಲಿ ಎದುರಾಗಿರುವ ನೀರಿನ ಸಮಸ್ಯೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಿ ಪರಿಹರಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ. ನಮಗೆ ನೀರಿನ ತೊಂದರೆ ತೀವ್ರವಾಗಿದೆ. ದಿನವೂ ನೀರು ತರುವುದೇ ದೊಡ್ಡ ಕೆಲಸವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕೂತಿದ್ದಾರೆ. ಕೂಡಲೆ ಜಿಲ್ಲಾಡಳಿತ ಗಮನ ಹರಿಸಲಿ ಎಂದು ಗ್ರಾಮದ ಈರಣ್ಣ ಗೌಡನಾಯ್ಕರ ಒತ್ತಾಯಿಸಿದ್ದಾರೆ.