
ಹಾವೇರಿ : ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಪೂರೈಸುವ ಹಾಲಿನ ಪುಡಿಗೂ ಖದೀಮರು ಕನ್ನ ಹಾಕಲಾಗುತ್ತಿದ್ದು, ಈ ವಿಚಾರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಹಾವೇರಿ ಹಾಲು ಒಕ್ಕೂಟದ ಕೆಲ ಅಧಿಕಾರಿಗಳು ನಡೆಸುತ್ತಿರುವ ಕಳ್ಳಾಟ ದಾಖಲೆಗಳ ಸಮೇತ ಪತ್ತೆಯಾಗಿದೆ. ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗಬೇಕಿದ್ದ ಹಾಲಿನ ಪುಡಿ ಪೊಟ್ಟಣಗಳಲ್ಲಿ 7,000-8,000 ಕೆ.ಜಿ.ಯಷ್ಟು ವ್ಯತ್ಯಾಸ ಕಂಡುಬಂದಿತು. ಈ ಬಗ್ಗೆ ಆಂತರಿಕ ತನಿಖೆ ನಡೆಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ, “ಹಾನಗಲ್ ಸಿಡಿಪಿಒ ವ್ಯಾಪ್ತಿಯ 7 ಅಂಗನವಾಡಿಗಳಿಗೆ ಪೂರೈಕೆಯಾಗಿದ್ದ ಹಾಲಿನ ಪುಡಿಯನ್ನು ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಉನ್ನತ ಮಟ್ಟದ ತನಿಖೆ ನಡೆಸಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ’ ಎಂದು ಉಪನಿರ್ದೇಶಕರಿಗೆ ವರದಿ ಸಲ್ಲಿಸಿದ್ದಾರೆ. ಇದೇ ವರದಿ ಆಧರಿಸಿ ಜಿಲ್ಲಾ ಪಂಚಾಯಿತಿ ಸಿ.ಇ.ಒ ನೀಡಿದ್ದ ಶಿಫರಾಸಿನಂತೆ ಹಾನಗಲ್ ಸಿ.ಡಿ.ಪಿ.ಒ ನಂದನ್ ಅವರನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಆದರೆ, ವ್ಯತ್ಯಾಸವಾಗಿರುವ ಹಾಲಿನ ಪುಡಿ ಎಲ್ಲಿಗೆ ಹೋಯಿತು? ಎಂಬ ಮಾಹಿತಿ ಕಲೆ ಹಾಕಿದಾಗ, ಅಧಿಕಾರಿಗಳ ಕಳ್ಳಾಟ ಹೊರಬಿದ್ದಿದೆ.

ಮಕ್ಕಳಲ್ಲಿರುವ ಅಪೌಷ್ಠಿಕತೆಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ, ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ. ಅದರನ್ವಯ ಮಕ್ಕಳಿಗೆ ಕೆನೆಭರಿತ ಹಾಲಿನ ಪುಡಿಯನ್ನು ವಿತರಣೆ ಮಾಡಲಾಗುತ್ತಿದೆ. ಹಾವೇರಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಹಾಲಿನ ಪುಡಿ ಸರಬರಾಜು ಮಾಡುವ ಜವಾಬ್ದಾರಿಯನ್ನು, ಹಾವೇರಿ ಹಾಲು ಒಕ್ಕೂಟಕ್ಕೆ ನೀಡಲಾಗಿದೆ. ಜೊತೆಗೆ, ಒಕ್ಕೂಟದಿಂದ ಬರುವ ಹಾಲಿನ ಪುಡಿಯನ್ನು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ನೀಡಲು ಜವಾಬ್ದಾರಿಯನ್ನು ಆಯಾ ತಾಲ್ಲೂಕಿನ ಸಿಡಿಪಿಒ ಅವರಿಗೆ ವಹಿಸಲಾಗಿದೆ. ಹಾನಗಲ್ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಿದ್ದ 25 ಕೆ.ಜಿ ಸಾಮರ್ಥ್ಯದ ಹಾಲಿನ ಪುಡಿ ಬ್ಯಾಗ್ನಲ್ಲಿದ್ದ ಪೊಟ್ಟಣಗಳಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಈ ಬಗ್ಗೆ ಗೊತ್ತಿದ್ದರೂ ವಿಚಾರಣೆ ನಡೆಸದೇ ಸಿಡಿಪಿಒ ಹಾಗೂ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಕರ್ತವ್ಯ ಲೋಪ ಎಸಗಿದ್ದಾರೆ. ಇವರಿಬ್ಬರ ನಿಷ್ಕಾಳಜಿಯಿಂದ ಹಾಲಿನ ಪುಡಿ ಕಾಳ ಸಂತೆಯಲ್ಲಿ ಮಾರಾಟ ಆಗಿರುವ ಅನುಮಾನ ದಟ್ಟವಾಗಿದೆ.’ಕರ್ತವ್ಯ ಲೋಪ ಎಸಗಿದ್ದಾರೆ‘ ಎನ್ನಲಾದ ಸಿಡಿಪಿಒ ವಿರುದ್ಧ ಮಾತ್ರ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಆದರೆ, ಹಾಲು ಒಕ್ಕೂಟದಿಂದ ಆಗಿರುವ ಪ್ರಮಾದದ ಬಗ್ಗೆ ತನಿಖೆಗೆ ಯಾವುದೇ ಆದೇಶ ಹೊರಡಿಸಿಲ್ಲ. ಒಕ್ಕೂಟದ ವಿರುದ್ಧ ತನಿಖೆ ನಡೆಸಿದರೆ ಮಾತ್ರ ಹಾಲಿನ ಪುಡಿ ಕದ್ದವರು ಯಾರು? ಎಂಬುದು ತಿಳಿಯುವುದಾಗಿ ಪೋಷಕರು ಒತ್ತಾಯಿಸುತ್ತಿದ್ದಾರೆ.

ಹಾಲಿನ ಪುಡಿ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿಬಂದ ಬೆನ್ನಲ್ಲೇ ಹಾನಗಲ್ ತಾಲ್ಲೂಕು ಸಿಡಿಪಿಒ ನಂದನ್, ಪ್ರತಿ ಅಂಗನವಾಡಿಗಳಲ್ಲಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಹಾಲು ಒಕ್ಕೂಟದಿಂದ ಸರಬರಾಜು ಆಗುವ ಪೊಟ್ಟಣಗಳಲ್ಲಿಯೇ ವ್ಯತ್ಯಾಸ ಇರುವುದು ಪತ್ತೆಯಾಗಿದೆ. ವ್ಯತ್ಯಾಸದ ಬಗ್ಗೆ ವಿಡಿಯೊ ಪುರಾವೆ ಸಮೇತ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಿಗೆ ಫೆ. 10ರಂದು ಪತ್ರ ಬರೆದಿದ್ದ ನಂದನ್, ಒಕ್ಕೂಟದಿಂದ ಸರಬರಾಜು ಆಗುತ್ತಿರುವ 25 ಕೆ.ಜಿ. ಹಾಲಿನ ಪುಡಿ ಬ್ಯಾಗ್ನಲ್ಲಿ ಕಡಿಮೆ ಪ್ರಮಾಣದ ಪೊಟ್ಟಣಗಳು ಸರಬರಾಜು ಆಗುತ್ತಿವೆ ಎಂದು ಆರೋಪಿಸಿದ್ದರು.
ಹಾನಗಲ್ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ 2025ರ ಜನವರಿ ತಿಂಗಳಿನಲ್ಲಿ 8283 ಕೆ.ಜಿ. ಹಾಲಿನ ಪುಡಿ ಸರಬರಾಜಾಗಿದೆ. 25 ಕೆ.ಜಿ. ಬ್ಯಾಗ್ನಲ್ಲಿ 24 ಕೆ.ಜಿ ಹಾಗೂ 24.5 ಕೆ.ಜಿ ಮಾತ್ರ ಹಾಲಿನ ಪುಡಿ ಲಭ್ಯವಿದೆ. ಅರ್ಧ ಕೆ.ಜಿ. ಹಾಗೂ 1 ಕೆ.ಜಿ. ಪೊಟ್ಟಣಗಳು ಬ್ಯಾಗ್ನಲ್ಲಿಲ್ಲ. ಈ ವ್ಯತ್ಯಾಸದಿಂದಾಗಿ 165.5 ಕೆ.ಜಿ. ಹಾಲಿನ ಪುಡಿ ಕಡಿಮೆ ಬಂದಿದೆ. ಈ ವ್ಯತ್ಯಾಸದ ಬಗ್ಗೆ ವಿಚಾರಣೆ ನಡೆಸಿ, ಸೂಕ್ತ ಪ್ರಮಾಣದ ಹಾಲಿನ ಪುಡಿ ಪೂರೈಸಬೇಕು ಎಂದು ನಂದನ್ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಪತ್ರಕ್ಕೆ ವ್ಯವಸ್ಥಾಪಕ ನಿರ್ದೇಶಕರು ಇದುವರೆಗೂ ಯಾವುದೇ ಉತ್ತರ ನೀಡಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ವ್ಯವಸ್ಥಾಪಕ ನಿರ್ದೇಶಕರು ಲಭ್ಯರಾಗಲಿಲ್ಲ. ಹಾನಗಲ್ ತಾಲ್ಲೂಕಿನ ಅಂಗನವಾಡಿಗಳು ತನಿಖೆ ನಡೆಸಿದ್ದ ಜಿಲ್ಲಾ ನಿರೂಪಣಾಧಿಕಾರಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮೌನ.