
ಗದಗ : ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಸಾಮಿಲ್ಗಳು ನಿಯಮ ಬಾಹಿರವಾಗಿ ವ್ಯಾಪಾರ ಮಾಡುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸರ್ಕಾರ ಕಾಡು ಬೆಳೆಸಿ ನಾಡು ಉಳಿಸಿ ಎಂಬ ಹತ್ತಾರು ಸಂದೇಶಗಳನ್ನು ಸಾರುವ ಜಾಹೀರಾತುಗಳನ್ನು ನೀಡುತ್ತದೆ. ಮರಗಳನ್ನು ಬೆಳೆಸಲು ಸಾಕಷ್ಟು ಯೋಜನೆಗಳನ್ನು ರೂಪಿಸುತ್ತದೆ. ಅರಣ್ಯ ರಕ್ಷಣೆ, ಗಿಡಗಳ ಪೋಷಣೆಗೆ ಪ್ರತ್ಯೇಕ ಇಲಾಖೆಗಳನ್ನೇ ಮಾಡಿದೆ. ಸಸಿ ನೆಡಲು ಮತ್ತು ಅವುಗಳನ್ನು ಪೋಷಿಸಲು ಸರ್ಕಾರ ಸಾಕಷ್ಟು ಅನುದಾನ ಕೂಡ ಬಿಡುಗಡೆ ಮಾಡುತ್ತದೆ. ಆದರೆ, ಇಲ್ಲಿ ಹಾಡುಹಗಲೇ ದಂಧೆಕೋರರು ತಮಗೆ ಇಷ್ಟ ಬಂದ ಬೃಹತ್ ಮರಗಳನ್ನು ಕಡಿದು ಬೇಕಾಬಿಟ್ಟಿಯಾಗಿ ಸಾಗಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಒಂದು ಸಾಮಿಲ್ ತೆರೆಯಬೇಕಾದರೆ ಸ್ಥಳೀಯ ಪಂಚಾಯಿತಿ ಎನ್ಒಸಿ ನೀಡಬೇಕು. ಈ ಎನ್ಒಸಿ ಆಧಾರದ ಮೇಲೆ ಅದನ್ನು ಪರಿಶೀಲಿಸಿ ಇಂಧನ ಇಲಾಖೆ(ಹೆಸ್ಕಾಂ) ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಸಾಮಿಲ್ಗಳಲ್ಲಿರುವ ಕಟ್ಟಿಗೆಯ ಮೇಲಿನ ತೊಗಟೆಯನ್ನು ತೆಗೆಯುವ (ಸಾಪ್) ಯಂತ್ರದ ಅಳವಡಿಕೆಗೆ ಗುಡಿ ಕೈಗಾರಿಕೆ ಇಲಾಖೆಯಿಂದ ಪರವಾನಗಿ ಪಡೆಯಬೇಕು. ಕಟ್ಟಿಗೆ ತುಂಡು ಮಾಡುವ ಯಂತ್ರಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು. ಹೀಗೆ ಪ್ರತ್ಯೇಕ ಇಲಾಖೆಯಿಂದ ಪಡೆದ ಪರವಾನಗಿಯನ್ನು ಪ್ರತಿ ವರ್ಷ ನವೀಕರಣಗೊಳಿಸಬೇಕು.

ಅಲ್ಲದೇ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಪಂಚಾಯಿತಿಯ ಆರೋಗ್ಯ ನಿರೀಕ್ಷಕರು ಈ ಕುರಿತು ವರದಿ ನೀಡಬೇಕು. ಸಾಮಿಲ್ಗಳು ಕೈಗಾರಿಕೆ ಇಲಾಖೆ ಅಡಿಯಲ್ಲಿ ಬರುವುದರಿಂದ, ಇಲಾಖೆ ನಿಗದಿಪಡಿಸಿದ ಕೈಗಾರಿಕಾ ಪ್ರದೇಶದಲ್ಲಿ ಸಾಮಿಲ್ಗಳನ್ನು ನಡೆಸಬೇಕು. ಈ ಹಿಂದೆ ಇಲ್ಲಿನ ಕಟ್ಟಿಗೆ ಅಡ್ಡೆಗಳಿಗೆ ಸ್ಥಳೀಯ ಪಟ್ಟಣ ಪಂಚಾಯಿತಿಯೇ ಎನ್ಒಸಿ ನೀಡಿದೆ ಎಂದು ಹೇಳಲಾಗುತ್ತದೆ. ಆದರೆ ಕೈಗಾರಿಕೆ ಇಲಾಖೆ ನೀಡಬೇಕಿದ್ದ ಎನ್ಸಿಯನ್ನು ಪಟ್ಟಣ ಪಂಚಾಯತಿ ಹೇಗೆ ನೀಡಿತು? ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
1993ರಲ್ಲಿಯೇ ಶಿರಹಟ್ಟಿ ಪಟ್ಟಣ ಪಂಚಾಯಿತಿಯ ಪರವಾನಗಿ ಪಡೆದು ಕಟ್ಟಿಗೆ ಅಡ್ಡೆಗಳು ಆರಂಭವಾಗಿವೆ. ಆ ಸಂದರ್ಭದಲ್ಲಿ ಜನವಸತಿ ಪ್ರದೇಶಗಳಿಂದ ದೂರವಿದ್ದ ಕಟ್ಟಿಗೆ ಅಡ್ಡಗಳು ಇದೀಗ ಪಟ್ಟಣದ ಹೃದಯ ಭಾಗದಲ್ಲಿವೆ. ಆದರೆ, ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಜನವಸತಿ ಪ್ರದೇಶಗಳ ಮಧ್ಯದಲ್ಲಿದ್ದ ಕಟ್ಟಿಗೆ ಅಡ್ಡೆಗಳಿಗೆ ಪೂರಕವಾಗಿಯೇ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ಅಧಿಕಾರಿಗಳು ಚಕಾರ ಎತ್ತದಿರಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸಾಮಿಲ್ಗಳ ಮಾಲೀಕರ ಮಧ್ಯೆ ವ್ಯವಹಾರ ಏನಾದರೂ ನಡೆದಿದೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ಒಟ್ಟು 16 ಸಾಮಿಲ್ಗಳು ಪರವಾನಗಿ ಪಡೆದಿದ್ದು, ಅದರಲ್ಲಿ 5 ನವೀಕರಣವಾಗಬೇಕು. ಒಂದು ಸಾಮಿಲ್ಗೆ ಅವಕಶವಾಗುವ ಹಾಗೂ ಜಾವಕವಾಗುವ ಕಟ್ಟಿಗೆ ಲೋಡ್ ಅಥವಾ ಮರದ ದಿಣ್ಣೆಗಳ ಸಂಪೂರ್ಣ ಮಾಹಿತಿಯನ್ನು ಪ್ರತಿದಿನ ಫಾರಂ ನಂ.43, 44ರಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಬಯಲುಸೀಮೆ ವ್ಯಾಪ್ತಿಯಲ್ಲಿರುವುದರಿಂದ ಇಲ್ಲಿನ ರೈತರು ಶ್ರೀಗಂಧ ಹಾಗೂ ಸಾಗವಾನಿ ಮರ ಕಟಾವು ಮಾಡಲು ಕಡ್ಡಾಯ ಪರವಾನಗಿ ಪಡೆಯಬೇಕು. ಇದನ್ನು ಹೊರತುಪಡಿಸಿ ಕಡಿದ ಬೇರೆ ಬೇರೆ ಮರಗಳ ದಿಣ್ಣೆಗಳನ್ನು ಸಾಗಿಸಲು ಕಡ್ಡಾಯವಾಗಿ ಅರಣ್ಯ ಇಲಾಖೆಯ ಪರವಾನಗಿ ತೆಗೆದುಕೊಳ್ಳಬೇಕು. ಸಾಮಿಲ್ಗಳನ್ನು ನಡೆಸಲು ಹಲವಾರು ನಿಯಮಗಳಿದ್ದರೂ ಪರಿಗಣಿಸದೇ ಕಟ್ಟಿಗೆ ದಂಧೆ ನಡೆಸುತ್ತಿದ್ದಾರೆ. ಪರವಾನಗಿ ನವೀಕರಣಗೊಳಿಸದೇ, ಕಡಿದ ಮರಗಳ ತುಂಡುಗಳನ್ನು ಸಾಗಿಸಲು ಅರಣ್ಯ ಇಲಾಖೆಯಿಂದ ಯಾವುದೇ ಪರವಾನಗಿ ತೆಗೆದುಕೊಳ್ಳುತ್ತಿಲ್ಲ. ಅಲ್ಲದೇ ಫಾರ್ಂ ನಂ.43, 44ರಲ್ಲಿ ಬೆರಳೆಣಿಕೆಯ ಲೋಡ್ಗಳನ್ನು ತೋರಿಸುತ್ತಿದ್ದು, ಸಾಕಷ್ಟು ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವುದರ ಜೊತೆಗೆ ನಿಸರ್ಗಕ್ಕೂ ಹಾನಿಯಾಗುತ್ತಿದೆ ಎಂಬುದು ಪರಿಸರವಾದಿಗಳಲ್ಲಿ ಆತಂಕ ಮೂಡಿಸಿದೆ.

ನಿಯಮಬಾಹಿರ ಸಾಮಿಲ್ಗಳ ವ್ಯಾಪಾರಕ್ಕೆ ಯಾವುದೇ ಅಡೆತಡೆ ಇಲ್ಲದ ಕಾರಣ ವರ್ಷಕ್ಕೊಂದರಂತೆ ನಾಯಿಕೊಡೆ ರೀತಿ ತಲೆ ಎತ್ತುತ್ತಿವೆ. ಜನಸಾಮಾನ್ಯರ ಬಳಿ ಕರ ವಸೂಲಿ ಮಾಡುವ ಸ್ಥಳೀಯ ಆಡಳಿತವು ಸಾಮಿಲ್ಗಳಂತ ದೊಡ್ಡ ವ್ಯಾಪಾರಸ್ಥರಿಗೆ ಪರವಾನಗಿ ಇಲ್ಲದೇ ಹಾಗೂ ನಿಯಮ ಬಾಹಿರವಾಗಿ ಮರಗಳನ್ನು ಕಡಿದು, ಕಟ್ಟಿಗೆಯ ವ್ಯಾಪಾರ ನಡೆಸಿದರೂ ಸಹ ತಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಇದ್ದಾರೆ. ಇದರಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ. ರೈತರ ಹೊಲಗಳಲ್ಲಿನ ಕೊಳವೆಬಾವಿಯಲ್ಲಿ ಯಾವುದೇ ಸಣ್ಣ ಸಮಸ್ಯೆಯಾದರೂ ಪವರ್ ಕಟ್ ಮಾಡುವ ಹೆಸ್ಕಾಂ ಅಧಿಕಾರಿಗಳು ನಿಯಮ ಪಾಲಿಸದ ಸಾಮಿಲ್ಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುತ್ತಾರೆ. ಸಾರ್ವಜನಿಕರ ದೂರಿನ ಅನ್ವಯ ಪಟ್ಟಣದ ಅನಧಿಕೃತ ಹಾಗೂ ಪರವಾನಗಿ ನವೀಕರಿಸದ ಕಟ್ಟಿಗೆ ಅಡ್ಡೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸದರೂ ಅಧಿಕಾರಿಗಳು ಇದಕ್ಕೆ ಮುಂದಾಗುತ್ತಿಲ್ಲ. ಇದರಿಂದ ಕಟ್ಟಿಗೆ ಅಡ್ಡೆ ಮಾಲಿಕರು ಹಾಗೂ ಹೆಸ್ಕಾಂ ಅಧಿಕಾರಿಗಳ ನಡುವೆ ಒಳ ಒಪ್ಪಂದ ಇರುವಂತೆ ಕಾಣಿಸುತ್ತದೆ ಎಂದು ಜನರು ಆರೋಪಿಸಿದ್ದಾರೆ. ಸಾಮಿಲ್ಗಳ ಮಾಲೀಕರು ರೈತರಿಗೆ ಹಣದ ಆಮಿಷ ತೋರಿ ಹೊಲಗಳಿಲ್ಲನ ಮರಗಳನ್ನು ಕಡಿಯುತ್ತಿದ್ದಾರೆ. ಅದೇ ಮರಗಳ ತುಂಡುಗಳನ್ನು ತಂದು ಸಾಮಿಲ್ಗಳಲ್ಲಿ ರೈತರಿಗೆ ಬೇಕಾದ ಕುಂಟೆ, ರಂಟೆ, ಚಕ್ಕಡಿಗಳ ಸಾಮಾನುಗಳನ್ನು ಎರಡು ಪಟ್ಟು ಬೆಲೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಸಾಮಿಲ್ಗಳ ಮಾಲೀಕರು ರೈತರ ಮುಗ್ಧತೆಯ ಜೊತೆ ಆಟವಾಡುತ್ತಿದ್ದಾರೆ ಎಂದು ರೈತ ಮುಖಂಡರು ಕಿಡಿಕಾರಿದ್ದಾರೆ.