
ಬಾಗಲಕೋಟೆ : ಬೆಟ್ಟ, ಗುಡ್ಡ, ಹೊಲಗಳಲ್ಲಿ ಕುರಿ ಕಾಯುವ, ಅಲ್ಲಿಯೇ ವಸತಿ ಮಾಡುವ ಕುರಿಗಾಹಿಗಳಿಗೆ ಸ್ವರಕ್ಷಣೆಗಾಗಿ ಬಂದೂಕು ತರಬೇತಿ ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ. ನಾಗರಿಕರಿಗೆ ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತರಬೇತಿ ನೀಡಲಾಗುತ್ತದೆ. ಆದರೆ, ಕುರಿಗಾಹಿಗಳಿಗೆ ಬಂದೂಕು ತರಬೇತಿ ನೀಡುತ್ತಿರುವುದು ರಾಜ್ಯದಲ್ಲಿ ಇದೇ ಮೊದಲು ಎನ್ನುತ್ತಾರೆ ಪೊಲೀಸರು. ಲಕ್ಷಾಂತರ ಬೆಲೆ ಬಾಳುವ ಕುರಿಗಳ ಹಿಂಡಿನೊಂದಿಗೆ ಊರ ಹೊರಗಡೆಯಿರುವ ಹೊಲಗಳಲ್ಲಿ ಬೀಡು ಬಿಡುವ ಕುರಿಗಾಹಿಗಳ ಮೇಲೆ ಹಲ್ಲೆ ನಡೆಸಿ, ಅವರನ್ನು ಕೊಲೆ ಮಾಡಿ ಕುರಿ ಕಳ್ಳತನ ಮಾಡುವ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿವೆ. ಅವುಗಳನ್ನು ತಡೆಯುವ ನಿಟ್ಟಿನಲ್ಲಿ ಕುರಿಗಾಹಿಗಳಿಗೆ ಬಂದೂಕು ತರಬೇತಿ ನೀಡಲಾಗುತ್ತಿದೆ. ಬಂದೂಕು ತರಬೇತಿ ಪಡೆಯಲು ಈಗಾಗಲೇ 630 ಮಂದಿ ಕುರಿಗಾಹಿಗಳು ಪೊಲೀಸ್ ಇಲಾಖೆಯಿಂದ ಅರ್ಜಿ ಪಡೆದುಕೊಂಡಿದ್ದಾರೆ. ಅದರಲ್ಲಿ 250 ಮಂದಿ ಅರ್ಜಿ ತುಂಬಿ ಕೊಟ್ಟಿದ್ದಾರೆ. ಇನ್ನೂ ಕೆಲವರು ಅರ್ಜಿಯೊಂದಿಗೆ ನೇರವಾಗಿ ತರಬೇತಿಗೆ ಹಾಜರಾಗುವ ನಿರೀಕ್ಷೆ ಇದೆ. ಬಾಗಲಕೋಟೆಯ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಲ್ಲಿ ಏ.7 ರಿಂದ 13ರವರೆಗೆ ಬೆಳಿಗ್ಗೆ 7 ರಿಂದ 9.30ರವರೆಗೆ ತರಬೇತಿ ಆಯೋಜಿಸಲಾಗಿದೆ.

ಜಿಲ್ಲೆಯ ಬಾದಾಮಿ ತಾಲ್ಲೂಕಿನ ಉಗಲವಾಟದಲ್ಲಿ ಶರಣಪ್ಪ ಜುಮ್ಮನಕಟ್ಟಿ ಅವರು ಕುರಿಗಳೊಂದಿಗೆ ಹೊಲದಲ್ಲಿ ಬೀಡು ಬಿಟ್ಟಿದ್ದರು. ಮೂವರು ಕುರಿ ಕದಿಯಲು ಬಂದಿದ್ದರು. ಅವರನ್ನು ತಡೆಯಲು ಹೋದ ಶರಣಪ್ಪ ಅವರನ್ನು ಕೊಲೆ ಮಾಡಲಾಗಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆಗ ಪ್ರತಿಭಟನೆ ಮಾಡಿದ್ದ ಕುರಿಗಾಹಿಗಳು, ರಕ್ಷಣೆಗೆ ಕಾನೂನು ತರಬೇಕು. ಬಂದೂಕು ತರಬೇತಿ ನೀಡಬೇಕು ಎಂದು ಮನವಿ ಮಾಡಿದ್ದರು.ಒಂದು ವಾರ ಕಾಲ ನಡೆಯುವ ತರಬೇತಿಯಲ್ಲಿ 0.2, ರಿವಾಲ್ವರ್, ಬಂದೂಕುಗಳ ಬಗೆಗೆ ಮಾಹಿತಿ ನೀಡಲಾಗುತ್ತದೆ. ಅವುಗಳನ್ನು ಸುರಕ್ಷಿತವಾಗಿ ಹೇಗೆ ಇಟ್ಟುಕೊಳ್ಳಬೇಕು. ಬಂದೂಕು ಹೇಗೆ ಚಲಾಯಿಸಬೇಕು ಎಂದು ತರಗತಿಗಳಲ್ಲಿ ತಿಳಿಸಿಕೊಡಲಾಗುತ್ತದೆ. ಕೊನೆ ದಿನ ಪ್ರಾಯೋಗಿಕವಾಗಿ ಬಂದೂಕು ಚಲಾಯಿಸಲು ಕಲಿಸಿಕೊಡಲಾಗುತ್ತದೆ. ಇದರಲ್ಲಿ ಉತ್ತೀರ್ಣರಾಗುವವರಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ.