
ಹಾವೇರಿ : ರೈತಾಪಿ ನಾಡಾಗಿರುವ ಹಾವೇರಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ‘ಸಗಣಿ ಕಣಗಳು‘ ಕಣ್ಮರೆಯಾಗುತ್ತಿದ್ದು, ರೈತರು ತಾವು ಬೆಳೆದ ಬೆಳೆಯನ್ನು ರಾಷ್ಟ್ರೀಯ- ರಾಜ್ಯ ಹೆದ್ದಾರಿಗಳಲ್ಲಿ ಒಕ್ಕಲು ಮಾಡುತ್ತಿದ್ದಾರೆ. ಗ್ರಾಮಕ್ಕೊಂದು “ಕಾಂಕ್ರಿಟ್ ಕಣ” ನಿರ್ಮಿಸಬೇಕೆಂಬ ರೈತರ ಆಗ್ರಹ, ಹಲವು ವರ್ಷಗಳಿಂದ ಕನಸಾಗಿಯೇ ಉಳಿದಿದೆ. ಜಿಲ್ಲೆಯಲ್ಲಿ ಗೋವಿನಜೋಳ, ಸೋಯಾಬಿನ್, ಭತ್ತ, ಕಡಲೆ, ಹೆಸರು ಸೇರಿದಂತೆ ಹಲವು ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಬೆಳೆಯ ಫಸಲು ಕೈಗೆ ಬರುತ್ತಿದ್ದಂತೆ, ಬೆಳೆಯನ್ನು ಎಲ್ಲಿ ಒಣಗಿಸಬೇಕೆಂಬ ಚಿಂತೆ ರೈತರನ್ನು ಕಾಡುತ್ತಿದೆ. ಜಾನುವಾರು ಸಾಕಿರುವ ಕೆಲವರು ಹಳೇ ಪದ್ಧತಿ ಪ್ರಕಾರ, ಸಗಣಿ ಕಣಗಳನ್ನು ನಿರ್ಮಿಸಿ ಬೆಳೆ ಸಂಸ್ಕರಣೆ ಮಾಡುತ್ತಿದ್ದಾರೆ. ಉಳಿದವರು, ರಾಷ್ಟ್ರೀಯ- ರಾಜ್ಯ ಹಾಗೂ ಇತರೆ ರಸ್ತೆಗಳನ್ನೇ ಕಣವನ್ನಾಗಿ ಮಾಡಿಕೊಂಡಿದ್ದಾರೆ.

ಸಗಣಿ ಲಭ್ಯವಿದ್ದವರು ತಮ್ಮದೇ ಹೊಲದ ಜಾಗದಲ್ಲಿ ಸಗಣಿ ಕಣ ಮಾಡುತ್ತಿದ್ದಾರೆ. ಜಾನುವಾರು ಸಾಕದ ರೈತರು, ಬೇರೆ ಕಡೆಯಿಂದ ಸಗಣಿ ತಂದು ಕಣ ಮಾಡಲು ಪ್ರಯತ್ನಿಸುತ್ತಿಲ್ಲ. ಅವರೆಲ್ಲೂ ಡಾಂಬರ್ ರಸ್ತೆಯನ್ನೇ ಕಣ ಮಾಡಿಕೊಂಡು, ತಮ್ಮ ಬೆಳೆಗಳನ್ನು ಒಕ್ಕಲು ಮಾಡಿ ಒಣಗಿಸಿ ಮಾರುಕಟ್ಟೆಗೆ ಕೊಂಡೊಯ್ಯುತ್ತಿದ್ದಾರೆ. ಬೆಳೆ ಒಣಗಿಸಲು ಡಾಂಬರ್ ರಸ್ತೆಗಳು ಸೂಕ್ತವೆನಿಸಿದರೂ ಇದು ಹೆಚ್ಚು ಅಪಾಯಕಾರಿ. ವಾಹನಗಳ ಸಂಚರಿಸುವ ಜಾಗದಲ್ಲಿ ಬೆಳೆಗಳನ್ನು ಹಾಕಿದರೆ, ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಜೊತೆಗೆ, ಬೆಳೆಗಳನ್ನು ಹಗಲು ರಾತ್ರಿ ಕಾಯಬೇಕು. ಇದಕ್ಕಾಗಿ ರೈತರು ರಾತ್ರಿಯೂ ರಸ್ತೆ ಬದಿಯಲ್ಲಿ ಮಲಗಬೇಕು. ಇಂಥ ಸಂದರ್ಭದಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸಿದರೆ, ರೈತರ ಪ್ರಾಣಕ್ಕೆ ಕುತ್ತು ಉಂಟಾಗುವ ಸಂಭವವಿರುತ್ತದೆ. : ಹೊಲದಲ್ಲಿ ಸಗಣಿ ಕಣ ಮಾಡಲು ಹೆಚ್ಚಿನ ವೆಚ್ಚವಾಗುತ್ತದೆ. ಜೊತೆಗೆ, ಕಾರ್ಮಿಕರ ಅಗತ್ಯವಿರುತ್ತದೆ. ಆದರೆ, ಡಾಂಬರ್ ರಸ್ತೆಗೆ ಯಾವುದೇ ಖರ್ಚು ಇಲ್ಲ. ಬೆಳೆಯನ್ನು ನೇರವಾಗಿ ರಸ್ತೆಗೆ ಕೊಂಡೊಯ್ದ ಒಣಗಲು ಹಾಕಿದರೆ ರೈತರ ಕೆಲಸ ಮುಗಿದಂತೆ. ಇದೇ ಕಾರಣಕ್ಕೆ ರೈತರು, ಸಗಣಿ ಕಣಕ್ಕಿಂತಲೂ ಡಾಂಬರ್ ರಸ್ತೆಯನ್ನೇ ಕಣವನ್ನಾಗಿ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ.

ಮನೆಯಲ್ಲಿ ದನ-ಕರುಗಳು ಇದ್ದರೆ, ಸಗಣಿ ಸಿಗುತ್ತದೆ. ಅದರಿಂದ ಕಣವನ್ನು ಮಾಡಬಹುದು. ಇಂಥ ಕಣ ಮಾಡಲು ಖರ್ಚು ಹೆಚ್ಚಾಗುತ್ತದೆ. ಆದರೆ, ದನಕರುಗಳು ಇಲ್ಲದಿದ್ದರೆ ಸಗಣಿ ಇಲ್ಲ. ಹೀಗಾಗಿ, ಬಹುತೇಕರು ಡಾಂಬರ್ ರಸ್ತೆ ಕಣಗಳ ಮೊರೆ ಹೋಗುತ್ತಿದ್ದಾರೆ’ ಎಂದು ದೇವಗಿರಿ ಗ್ರಾಮದ ರೈತ ಚನ್ನಬಸಪ್ಪ ಹೇಳಿದರು. ಸಗಣಿ ಕಣದಲ್ಲೂ ಬೆಳೆಯನ್ನು ಒಣಗಿಸಿ, ಸಂಸ್ಕರಣೆ ಮಾಡಬಹುದು. ಅದೇ ರೀತಿಯಲ್ಲಿ ಡಾಂಬರ್ ಕಣದಲ್ಲೂ ಎಲ್ಲ ಕೆಲಸಗಳನ್ನು ಮಾಡಬಹುದು. ಹೊಲದಿಂದ ಬೆಳೆಯನ್ನು ರಸ್ತೆಗೆ ಸಾಗಿಸಲು ತೊಂದರೆಯಾಗುತ್ತದೆ. ಆದರೆ, ಡಾಂಬರ್ ರಸ್ತೆಗೆ ಹೋದ ನಂತರ ಅಲ್ಲಿಂದ ಮಾರುಕಟ್ಟೆಗೆ ಬೆಳೆಯನ್ನು ಕೊಂಡೊಯ್ಯುವುದು ಸುಲಭ ಎಂದರು. ‘ಇತ್ತೀಚಿನ ದಿನಗಳಲ್ಲಿ ಕೆಲವರಷ್ಟೇ ಸಗಣಿ ಕಣ ಮಾಡುತ್ತಿದ್ದಾರೆ. ಅದರಲ್ಲೂ ಭತ್ತ ಬೆಳೆಯುವವರು ಹೆಚ್ಚಾಗಿ, ಸಗಣಿ ಕಣಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಕೆಲವೇ ದಿನಗಳಲ್ಲಿ ಸಗಣಿ ಕಣಗಳು ಸಂಪೂರ್ಣ ಕಣ್ಮರೆಯಾಗಲಿವೆ’ ಎಂದು ಹೇಳಿದರು.
ಜಿಲ್ಲೆಯ ರಾಣೆಬೆನ್ನೂರು, ಮೋಟೆಬೆನ್ನೂರು, ಹಾವೇರಿ, ಬಂಕಾಪುರ, ಶಿಗ್ಗಾವಿ, ತಡಸ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಜಿಲ್ಲೆಯ ಹಲವು ಕಡೆಗಳಲ್ಲಿ ರಾಜ್ಯ ಹೆದ್ದಾರಿಗಳಿವೆ. ಜೊತೆಗೆ, ಹಲವು ಗ್ರಾಮದ ರಸ್ತೆಗಳು ಉತ್ತಮವಾಗಿದೆ. ಈ ಎಲ್ಲ ಕಡೆಗಳಲ್ಲೂ ರೈತರ ಬೆಳೆಯ ರಾಶಿಗಳು ಕಂಡುಬರುತ್ತಿವೆ. ಬಹುತೇಕ ರಸ್ತೆಗಳಲ್ಲಿ ಅಡ್ಡವಾಗಿ ಹಾಕಿರುವ ಬೆಳೆಗಳಿಂದ ಅಪಘಾತಗಳು ಸಂಭವಿಸುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಇದೇ ಕಾರಣಕ್ಕೆ ರಸ್ತೆಯಲ್ಲಿ ಗಸ್ತು ತಿರುಗುತ್ತಿರುವ ಪೊಲೀಸರು, ರಸ್ತೆಯಲ್ಲಿ ಬೆಳೆ ಹಾಕುವ ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಗ್ರಾಮದಲ್ಲಿಯೇ ಕಣಗಳನ್ನು ನಿಗದಿಪಡಿಸಿಕೊಂಡು, ಅಲ್ಲಿಯೇ ಒಕ್ಕಲು ಮಾಡಿ ಒಣಗಲು ಹಾಕುವಂತೆ ಕೋರುತ್ತಾರೆ. ಆದರೆ, ಗ್ರಾಮದಲ್ಲಿ ಕಣದ ಕೊರತೆ ಇರುವುದರಿಂದಲೇ ರಸ್ತೆಗೆ ಬಂದಿರುವುದಾಗಿ ರೈತರು ಉತ್ತರಿಸುತ್ತಿದ್ದಾರೆ. ರಸ್ತೆ ಮಾತ್ರವಲ್ಲದೇ ಬಸ್ ನಿಲ್ದಾಣ, ಸರ್ಕಾರಿ ಕಚೇರಿ ಆವರಣ, ಆಟದ ಮೈದಾನ ಹೀಗೆ ಸಮತಟ್ಟಾದ ಪ್ರದೇಶಗಳನ್ನು ರೈತರು ಕಣವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಇಂಥ ಸ್ಥಳಗಳಲ್ಲಿ ವಾಹನಗಳು ಓಡಾಡುವುದರಿಂದ, ಅಪಘಾತದ ಭಯವೂ ಕಾಡುತ್ತಿದೆ.

ಸಗಣಿ ಕಣಗಳಿಗೆ ಪರ್ಯಾಯವಾಗಿ ಗ್ರಾಮಕ್ಕೊಂದು ಕಾಂಕ್ರಿಟ್ ಕಣ ನಿರ್ಮಾಣ ಮಾಡುವಂತೆ ಜಿಲ್ಲೆಯ ರೈತರು ಹಲವು ವರ್ಷಗಳಿಂದ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ರೈತ ಸಂಘಗಳ ಮುಖಂಡರು ಹಾಗೂ ರೈತರು, ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ, ಕಾಂಕ್ರಿಟ್ ಕಣ ನಿರ್ಮಾಣದ ಕನಸು ಮಾತ್ರ ನನಸಾಗಿಲ್ಲ. ಆಧುನಿಕ ಯುಗಕ್ಕೆ ತಕ್ಕಂತೆ ಕೃಷಿ ಪದ್ಧತಿಯೂ ಬದಲಾಗುತ್ತಿದೆ. ಸಗಣಿ ಕಣ ಮಾಡುವಷ್ಟು ಸಮಯ ಯಾರ ಬಳಿಯೂ ಇಲ್ಲ. ಬೆಳೆಯನ್ನು ಕಟಾವು ಮಾಡುವ ರೈತರು, ತಮ್ಮೂರಿನ ಸಮೀಪದ ರಸ್ತೆಗೆ ಕೊಂಡೊಯ್ಯುತ್ತಿದ್ದಾರೆ. ಅಲ್ಲಿಯೇ ಒಣಗಿಸಿ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ಇಂಥ ರೈತರು ಅನುಕೂಲಕ್ಕಾಗಿ ಪ್ರತಿ ಗ್ರಾಮದಲ್ಲೂ ಕಾಂಕ್ರಿಟ್ ಕಣದ ಅಗತ್ಯವಿದೆ ಎಂದು ರೈತ ಮುಖಂಡ ಭುವನೇಶ್ವರ ಶಿಡ್ಡಾಪೂರ ಹೇಳಿದರು. ಜಿಲ್ಲೆಯ ಪ್ರತಿ ಗ್ರಾಮದಲ್ಲೂ ರೈತರಿದ್ದಾರೆ. ಕೃಷಿ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ವರ್ಷಪೂರ್ತಿ ಹೊಲದಲ್ಲಿ ದುಡಿಮೆ ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ಇಂಥ ಬೆಳೆಯನ್ನು ಕಟಾವು ಮಾಡಿದ ನಂತರ, ಅದನ್ನು ಸಂಸ್ಕರಣೆ ಮಾಡಲು ಸೂಕ್ತ ಜಾಗ ಬೇಕು. ಅದೇ ಕಾರಣಕ್ಕೆ ಗ್ರಾಮಕ್ಕೊಂಡು ಕಾಂಕ್ರಿಟ್ ಕಣ ಮಾಡುವಂತೆ ಹಲವು ವರ್ಷಗಳಿಂದ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು. ‘ಗ್ರಾಮದಲ್ಲಿರುವ ಸರ್ಕಾರದ ಜಾಗವನ್ನೇ ಕಾಂಕ್ರಿಟ್ ಕಣಕ್ಕೆ ಮೀಸಲಿಡಬೇಕು. ಸರ್ಕಾರ ಜಾಗವಿಲ್ಲದಿದ್ದರೆ, ಖಾಸಗಿ ಜಾಗವನ್ನು ಖರೀದಿಸಬೇಕು. ನಿರ್ದಿಷ್ಟ ಅಳತೆಯ ಕಣಗಳನ್ನು ಮಾಡಿ ರೈತರಿಗೆ ಬಳಸಲು ನೀಡಬೇಕು. ಈ ರೀತಿಯಾದರೆ, ರೈತರು ರಸ್ತೆಗೆ ಹೋಗುವುದು ತಪ್ಪುತ್ತದೆ. ಅಪಘಾತದ ಭಯವೂ ಇರುವುದಿಲ್ಲ ಎಂದು ಹೇಳಿದರು.