

ರಾಮನಗರ : ಸಾಯಿ ಬಾಬಾ ಅವರ ಜನ್ಮದಿನ ಪ್ರಯುಕ್ತ, ನಗರದ ಕೋರ್ಟ್ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಭಾನುವಾರ ಸಾಯಿರಾಮೋತ್ಸವ ಆಚರಿಸಲಾಯಿತು. ಬೆಳಿಗ್ಗೆ ಸಾಯಿಬಾಬಾ ಪ್ರತಿಮೆಗೆ ಪೂಜೆ, ಅಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಿದ ನಂತರ ವಿವಿಧ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಬಾಬಾ ಭಕ್ತರು ಬೆಳಿಗ್ಗೆಯಿಂದ ಸಂಜೆವರೆಗೆ ಮಂದಿರಕ್ಕೆ ಭೇಟಿ ನೀಡಿ, ಸಾಯಿಬಾಬಾ ದರ್ಶನ ಪಡೆದರು. ದೇವಾಲಯದ ಪ್ರಾಂಗಣದಲ್ಲಿ ಮಂಜುನಾಥ ಗುರುಕುಲದ ಮಕ್ಕಳಿಂದ ಭರತನಾಟ್ಯ, ಚನ್ನಪಟ್ಟಣದ ರಜತಾದ್ರಿ ಭಜನ ಮಂಡಳಿ ಹಾಗೂ ರಾಮನಗರದ ವಾಸವಿ ಭಜನಾ ಮಂಡಳಿ ವತಿಯಿಂದ ಭಜನೆ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಭಕ್ತರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಅರ್ಚಕ ಕಮಲೇಶ್ ಕುಮಾರ್ ಯಾಶ್ ನೇತೃತ್ವದಲ್ಲಿ ತೇಜಾರತಿಯೊಂದಿಗೆ ಸಾಯಿರಾಮೋತ್ಸವ ಕೊನೆಗೊಂಡಿತು. ಶಿರಡಿ ಸಾಯಿಬಾಬಾ ಭಕ್ತ ಮಂಡಳಿ ಟ್ರಸ್ಟ್ ಅಧ್ಯಕ್ಷ ಪ್ರಕಾಶ್, ಭಕ್ತರಾದ ಲೋಕೇಶ್, ನಾಗರಾಜು ಹಾಗೂ ಇತರರು ಇದ್ದರು.