
ಶಿವಮೊಗ್ಗ: ಉದ್ಯೋಗ ಖಾತರಿ ( ನರೇಗಾ) ಯೋಜನೆಯಡಿ ಸೊರಬ ತಾಲ್ಲೂಕಿನ ಹುರುಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಶಂಕುಸ್ಥಾಪನೆ ಮತ್ತು ಶ್ರಮದಾನ ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಸೋಮವಾರ ಚಾಲನೆ ನೀಡಿದರು.
ಶಾಲೆಯ ಕಾಂಪೌಂಡ್ ನಿರ್ಮಾಣಕ್ಕೆ ಶಿಕ್ಷಣ ಸಚಿವರಿಂದಲೇ ಶ್ರಮದಾನ ನಡೆಸಿರುವುದು ವಿಶೇಷವಾಗಿತ್ತು. ಬಿರು ಬಿಸಿಲಿನಲ್ಲಿ ತಲೆಗೆ ಟವೆಲ್ ಕಟ್ಟಿಕೊಂಡ ಸಚಿವರು, ಪಿಕಾಸಿ, ಗುದ್ದಲಿ ಹಿಡಿದು ಕಾಂಪೌಂಡ್ ನಿರ್ಮಾಣ ಕಾಮಗಾರಿಯ ಗುಂಡಿ ಅಗೆದರು. ಗುದ್ದಲಿಯಿಂದ ಬುಟ್ಟಿಗೆ ಮಣ್ಣು ತುಂಬಿ, ಬೇರೆಡೆ ಹೊತ್ತು ಸುರಿದರು.
ಬೆಳಿಗ್ಗೆ 10 ಗಂಟೆಗೆ ಕಾಮಗಾರಿ ಆರಂಭಿಸಿ, ಸತತ ಒಂದು ಗಂಟೆಗೂ ಹೆಚ್ಚು ಕಾಲ ಸಚಿವರು, ಶ್ರಮದಾನದಲ್ಲಿ ತೊಡಗಿದ್ದರು.

‘ನರೇಗಾ ಯೋಜನೆಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡರೆ ಗ್ರಾಮಗಳ ಚಿತ್ರಣವನ್ನೇ ಬದಲಿಸಬಹುದು. ಈ ರೀತಿಯ ಕಾರ್ಯಕ್ರಮಗಳು ದೇಶಕ್ಕೇ ಮಾದರಿಯಾಗಬೇಕು. ಇದು ಎಲ್ಲರಿಗೂ ಪ್ರೇರಣೆಯಾಗಬೇಕು’ ಎಂದು ಸಚಿವ ಮಧುಬಂಗಾರಪ್ಪ ಅಭಿಪ್ರಾಯಪಟ್ಟರು.
ಶ್ರಮದಾನ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮಸ್ಥರ ಆರೋಗ್ಯ ತಪಾಸಣಾ ಉಚಿತ ಶಿಬಿರ ಆಯೋಜಿಸಲಾಗಿತ್ತು.
ರಾಜ್ಯ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್, ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಶಾಸಕಿ ಬಲ್ಕಿಶ್ ಬಾನು, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಗ್ರಾಮಸ್ಥರು ಸಚಿವರಿಗೆ ಸಾಥ್ ನೀಡಿದರು.