
ಕಲಬುರಗಿ : ಆಪರಾಧ ಕೃತ್ಯಗಳು ಹೆಚ್ಚುತ್ತಿದ್ದರಿಂದ ಆರೋಪಿಗಳನ್ನು ಹಿಡಿಯಲು, ಕ್ರೈಂ ಕಂಟ್ರೋಲ್ ಮಾಡಲು 24 ಗಂಟೆ ಗಸ್ತು ವಾಹನಗಳಲ್ಲಿ ಕರ್ತವ್ಯದಲ್ಲಿರುವ ಎ.ಎಸ್.ಐ.ಗಳಿಗೆ ಪಿಸ್ತೂಲ್ ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಆರೋಪಿಗಳು ಪ್ರತಿಯಾಗಿ ಗುಂಡಿನ ದಾಳಿ ನಡೆಸಿದರೆ ಆತ್ಮರಕ್ಷಣೆಗೂ ಇದು ಸಹಕಾರಿಯಾಗಲಿದೆ. ಬೀದರ್ನಲ್ಲಿ ಇತ್ತೀಚೆಗೆ ಎಟಿಎಂಗೆ ಹಣ ಹಾಕಲು ಬಂದ ಸಿಬ್ಬಂದಿಗೆ ಕಳ್ಳರು ಗುಂಡು ಹೊಡೆದು ಹಣ ಪಡೆದು ಪರಾರಿ ಆದ ಘಟನೆಗೆ ಎಚ್ಚೆತ್ತುಕೊಂಡ ಪೊಲೀಸ್ ಪ್ರಧಾನ ಕಚೇರಿ, ಡಿಜಿ -ಐಜಿ ಆದೇಶದ ಮೇರೆಗೆ ಕಲಬುರಗಿ ಜಿಲ್ಲಾ ಗ್ರಾಮೀಣ ಪೊಲೀಸ್ ಇಲಾಖೆ ಹಾಗೂ ನಗರ ಪೊಲೀಸ್ ಇಲಾಖೆಯು ಸಹಾಯಕ ಸಬ್ ಇನ್ಸ್ಪೆಕ್ಟರ್(ಎಎಸ್ಐ) ಅಧಿಕಾರಿಗಳು 24 ಗಂಟೆ ಗಸ್ತು ವಾಹನದಲ್ಲಿ ಕರ್ತವ್ಯದಲ್ಲಿಇರುವ ವೇಳೆ ಪಿಸ್ತೂಲ್ ಇಟ್ಟುಕೊಂಡು ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇದುವರೆಗೂ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಮತ್ತು ಅವರಿಗಿಂತ ಮೇಲಿನ ಹಂತದ ಅಧಿಕಾರಿಗಳಿಗೆ ಮಾತ್ರ ಪಿಸ್ತೂಲ್ ನೀಡಲಾಗಿತ್ತು. ಆದರೆ, ಈಗ ಕಲಬುರಗಿ ಜಿಲ್ಲಾ ಗ್ರಾಮೀಣ ಪೊಲೀಸ್ ವ್ಯಾಪ್ತಿಯಲ್ಲಿ 147, ನಗರ ಪೊಲೀಸ್ ವ್ಯಾಪ್ತಿಯಲ್ಲಿ 94 ಒಟ್ಟು 241 ಸಹಾಯಕ ಉಪ ನಿರೀಕ್ಷಕರಿಗೆ ಕಡ್ಡಾಯವಾಗಿ ಪಿಸ್ತೂಲ್ ನೀಡಲಾಗಿದೆ. ಈಗಾಗಲೇ ಕಲಬುರಗಿಯಲ್ಲಿ’ಗುಂಡು-ಗುರಿ’ ತರಬೇತಿಯನ್ನೂ ನೀಡಲಾಗಿದೆ.

ಈ ಹಿಂದೆ ಎ.ಎಸ್.ಐ ಹಂತದ ಅಧಿಕಾರಿಗಳಿಗೆ 112 ವಾಹನ, ಹೈವೆ ಪೆಟ್ರೊಲಿಂಗ್ ವಾಹನಗಳಿಗೆ ಪಿಸ್ತೂಲ್ ಅವಕಾಶ ಕೊಟ್ಟಿರಲಿಲ್ಲ. ಈಗ ಎಎಸ್ಐಗಳು ಗಸ್ತಿನಲ್ಲಿ ಇದ್ದಾಗ ಕಡ್ಡಾಯವಾಗಿ ಪಿಸ್ತೂಲ್ ಬಳಸಬೇಕು. ಎಲ್ಲಿಯಾದರೂ ಅಪರಾಧ ಕೃತ್ಯಗಳು, ಕಳ್ಳತನ ನಡೆದ ಸಂದರ್ಭದಲ್ಲಿ ಆರೋಪಿ ಕಾಲಿಗೆ ಕೂಡಲೇ ಗುಂಡು ಹಾರಿಸಿ ಆತ ಪರಾರಿಯಾಗದಂತೆ ತಡೆಯಬಹುದು ಎಂದು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಎ.ಎಸ್.ಐ.ಗಳು 112 ವಾಹನ, ಹೈವೇ ಪೆಟ್ರೊಲಿಂಗ್ ವಾಹನ ಗಸ್ತು ಡ್ಯೂಟಿಗೆ ನಿಯೋಜಿಸಿದಾಗ ಅವರು ಕಡ್ಡಾಯವಾಗಿ ಪಿಸ್ತೂಲ್ ತೆಗೆದುಕೊಂಡು ಹೋಗಬೇಕು. ಆರೋಪಿಗಳನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆ ಪದೇ-ಪದೆ ದಾಳಿಗಳು ನಡೆಯುತ್ತಿರುತ್ತವೆ. ಇದಕ್ಕಾಗಿ ಕಡಿವಾಣ ಹಾಕಲು ಎಎಸ್ಐಗಳ ಕೈಗೆ ಪಿಸ್ತೂಲ್ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ನೆರೆಯ ಬೀದರ್ ಹಾಗೂ ಮಂಗಳೂರಿನ ಬ್ಯಾಂಕ್ಗಳಲ್ಲಿಇತ್ತೀಚೆಗೆ ನಡೆದ ದರೋಡೆ ಪ್ರಕರಣ ಹಿನ್ನೆಲೆ ಅಲರ್ಟ್ ಆದ ಕಲಬುರಗಿ ಜಿಲ್ಲಾ ಪೊಲೀಸ್ ಇಲಾಖೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿದೆ.

ಕಮಿಷನರ್ ಡಾ.ಶರಣಪ್ಪ ಅವರು ಮಾತನಾಡಿ, ಬ್ಯಾಂಕ್ ಮತ್ತು ಎ.ಟಿ.ಎಂ ದ್ವಾರಗಳಲ್ಲಿಯೇ ಸಿ.ಸಿ ಕ್ಯಾಮೆರಾ ಅಳವಡಿಸಬೇಕು. ಕ್ಯಾಮೆರಾದಲ್ಲಿ ಬರುವ ಮತ್ತು ಹೋಗುವವರ ಸಂಪೂರ್ಣ ಚಹರೆ ಕಾಣಿಸುವ ಸ್ಥಳದಲ್ಲಿ ಕ್ಯಾಮೆರಾ ಫಿಕ್ಸ್ ಮಾಡಬೇಕು. ಸಾಧ್ಯವಾದರೆ ಹೆಚ್ಚಿನ ಪಿಕ್ಸೆಲ್ಗಳ ಕ್ಯಾಮೆರಾ ಅಳವಡಿಕೆ ಮಾಡಿಕೊಳ್ಳಬೇಕು. ಕಳ್ಳತನದ ಎಚ್ಚರಿಕೆ ನೀಡುವ ಅಲಾರಾಂ, ಮೋಷನ್ ಡಿಟೆಕ್ಟರ್ಗಳನ್ನು ಅಳವಡಿಸಲು ಸೂಚನೆ ನೀಡಲಾಗಿತ್ತು. ಬ್ಯಾಂಕ್ ಹಾಗೂ ಎ.ಟಿ.ಎಂ.ಗಳಲ್ಲಿ ತರಬೇತಿ ಹೊಂದಿದ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ಎಟಿಎಂಗೆ ಹಣ ಸರಬರಾಜು ಮಾಡುವ ಕಂಪನಿಗಳು ನುರಿತ ಭದ್ರತಾ ಸಿಬ್ಬಂದಿಯನ್ನು ಆಯುಧದೊಂದಿಗೆ ಕಳುಹಿಸಬೇಕು. ಖಾಸಗಿ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವಾಗ ಕಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ಪರಿಶೀಲನಾ ಪ್ರಮಾಣ ಪತ್ರ ಸಲ್ಲಿಸಿದವರನ್ನು ಮಾತ್ರ ನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು.