
ಗಜೇಂದ್ರಗಡ ಸಮೀಪದ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರ್ತಗೇರಿ ಗ್ರಾಮದಲ್ಲಿ ಹಳೆಯ ಸಮಸ್ಯೆಗಳು ದಶಕಗಳಿಂದ ಜೀವಂತವಾಗಿದ್ದು, ಗ್ರಾಮದ ಜನರು ಮೂಲಸೌಲಭ್ಯಗಳ ಕೊರತೆ ಎದುರಿಸುತ್ತಿದ್ದಾರೆ.

ಗ್ರಾಮದ ದಲಿತರ ಕಾಲೊನಿ ಪಕ್ಕದಲ್ಲಿರುವ ತಗ್ಗು ಪ್ರದೇಶದಲ್ಲಿ ಕೊಳಚೆ ನೀರು ಶೇಖರಣೆಯಾಗಿ ದುರ್ನಾತ ಬೀರುವುದರ ಜೊತೆಗೆ ಅಲ್ಲಿನ ಜನರು ಹಾವು-ಚೇಳುಗಳ ನಡುವೆ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ.
ಮಳೆಗಾಲದಲ್ಲಿ ತಗ್ಗು ಪ್ರದೇಶ ತುಂಬಿ ಕೊಳಚೆ ನೀರು ಮನೆಗೆ ನುಗ್ಗುವುದು ಸಾಮಾನ್ಯವಾಗಿದೆ. ಈ ಸಮಸ್ಯೆ ದಶಕಗಳಷ್ಟು ಹಳೆಯದಾಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತೀವ್ರ ಸಮಸ್ಯೆಯಾದಾಗ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಮಾತುಗಳನ್ನಾಡುತ್ತಾರೆ. ಆದರೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂಬುದು ಅಲ್ಲಿನ ನಿವಾಸಿಗಳ ಅಳಲಾಗಿದೆ. ಅಲ್ಲದೆ ಗ್ರಾಮದ ಕಲಕೇರಿಯವರ ಪ್ಲಾಟ್ ಹಾಗೂ ಸೈನಿಕ ನಗರದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣವಾಗಿಲ್ಲ. ಹೀಗಾಗಿ ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತಿರುವುದರಿಂದ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಗ್ರಾಮದ ಚರಂಡಿ ನೀರು ಹರಿದು ಹಳ್ಳಕ್ಕೆ ಸೇರುವ ಮುಖ್ಯ ಚರಂಡಿ ಹೂಳು ತುಂಬಿಕೊಂಡಿದ್ದು, ಗಬ್ಬೆದ್ದು ನಾರುತ್ತಿದೆ. ಗಜೇಂದ್ರಗಡದ ಗುಡ್ಡದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 8 ಎಕರೆ ಸುಮಾರು 20 ಅಡಿಯಷ್ಟು ಗರಸು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ತಾಲ್ಲೂಕು ಆಡಳಿತ ಪುರ್ತಗೇರಿ ಗ್ರಾಮದ ದಲಿತರ ಕಾಲೊನಿಯಲ್ಲಿನ ತಗ್ಗು ಪ್ರದೇಶಕ್ಕೆ ಗರಸು ಹಾಕಿಸಿ ಸಮತಟ್ಟು ಮಾಡುವ ಮೂಲಕ ದಶಕಗಳಷ್ಟು ಹಳೆಯದಾಗಿರುವ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಬೇಕು. ಅಲ್ಲದೆ ಗಜೇಂದ್ರಗಡದ ಚರಂಡಿಯ ಕೊಳಚೆ ನೀರು ಹಳ್ಳದಲ್ಲಿ ಶೇಖರಣೆಯಾಗಿ ಅಂತರ್ಜಲ ಸೇರುತ್ತಿದ್ದು, ಗ್ರಾಮದ ಜನರು ವಿಷಯುಕ್ತ ನೀರು ಸೇವಿಸುವಂತಾಗಿದೆ. ಮಾಲಿನ್ಯ ನಿಯಂತ್ರಣಾಧಿಕಾರಿಗಳು ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಾಳಾಜಿರಾವ್ ಭೋಸಲೆ ಹೇಳಿದರು.