
ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಹಾಗೂ ಇಲ್ಲಿ ಪ್ರಧಾನ ಕಚೇರಿ ಹೊಂದಿರುವ ‘ವಿಕಾಸ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ₹1,000 ಕೋಟಿಗಿಂತ ಅಧಿಕ ಠೇವಣಿ ಸಂಗ್ರಹಿಸಿದ್ದು’, ಶೆಡ್ಯೂಲ್ ಬ್ಯಾಂಕ್ ದರ್ಜೆಯ ಸ್ಥಾನಮಾನ ಪಡೆಯುವ ಹಂತದಲ್ಲಿದೆ ಎಂದು ಬ್ಯಾಂಕ್ನ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ಹೇಳಿದರು. ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಮಾರ್ಚ್ಗೆ ಮೊದಲು ಇದೇ ಸಾಧನೆ ಮುಂದುವರಿದರೆ ಬ್ಯಾಂಕ್ಗೆ ಶೆಡ್ಯೂಲ್ ಮಾನ್ಯತೆ ದೊರಕಲಿದೆ. ರಾಜ್ಯದಲ್ಲಿ ಸದ್ಯ ಒಂದು ಸಹಕಾರ ಬ್ಯಾಂಕ್ ಮಾತ್ರ ಶೆಡ್ಯೂಲ್ ಸ್ಥಾನಮಾನ ಪಡೆದಿದ್ದು, 10 ರಿಂದ 12 ಬ್ಯಾಂಕ್ಗಳು ಇಂತಹ ಪ್ರಯತ್ನದಲ್ಲಿವೆ. ಅದರಲ್ಲಿ ವಿಕಾಸ ಬ್ಯಾಂಕ್ ಸಹ ಒಂದು ಎಂದು ಹೇಳಲು ಹೆಮ್ಮೆ ಆಗುತ್ತಿದೆ ಎಂದರು. 2024-25ನೇ ಸಾಲಿನಲ್ಲಿ ಬ್ಯಾಂಕ್ ₹1,656 ಕೋಟಿಯ ವ್ಯವಹಾರ ನಡೆಸಿದ್ದು, ಠೇವಣಿ ಸಂಗ್ರಹ ₹1,016 ಕೋಟಿ ಆಗಿದೆ. ₹640 ಕೋಟಿ ಸಾಲ ನೀಡಲಾಗಿದೆ. ನಿವ್ವಳ ಅನುತ್ಪಾದಕ ಆಸ್ತಿ ಪ್ರಮಾಣ ₹11.61 ಕೋಟಿ (ಶೇ 1.87) ಇದೆ. ಒಟ್ಟು ಲಾಭ ₹21.31 ಕೋಟಿ ಇದ್ದರೆ, ತೆರಿಗೆ ನಂತರದ ನಿವ್ವಳ ಲಾಭ ₹10.04 ಕೋಟಿಯಷ್ಟಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.

ಸದ್ಯ ಬ್ಯಾಂಕ್ನ 18 ಶಾಖೆಗಳು ಕಾರ್ಯಾಚರಿಸುತ್ತಿವೆ. ನೂತನ ಮುಖ್ಯ ಕಚೇರಿ ಕಟ್ಟಡ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಆಗಸ್ಟ್ ವೇಳೆಗೆ ಉದ್ಘಾಟನೆಗೊಳ್ಳಲಿದೆ. ನಾಲ್ಕು ಅಂತಸ್ತಿನ ಈ ಕಟ್ಟಡದಲ್ಲಿ ತರಬೇತಿ ಕೇಂದ್ರ, ವಸತಿ ವ್ಯವಸ್ಥೆಯೂ ಇರಲಿದೆ. ಮುಂಬರುವ ದಿನಗಳಲ್ಲಿ ಕೆಲವು ಅಶಕ್ತ ಬ್ಯಾಂಕ್ಗಳನ್ನು ತನ್ನಲ್ಲಿ ವಿಲೀನ ಮಾಡಿಕೊಳ್ಳುವ ಇರಾದೆಯನ್ನೂ ಹೊಂದಿದೆ. ಕೃತಕ ಬುದ್ದಿ ಮತ್ತೆ ಸಹಿತ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಬ್ಯಾಂಕ್ ವಿಶೇಷ ಗಮನ ಹರಿಸಿದೆ ಎಂದು ವಿಶ್ವನಾಥ ಹಿರೇಮಠ ಹೇಳಿದರು. ಬ್ಯಾಂಕ್ನ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ಬಿ.ಜೆ.ಕುಲಕರ್ಣಿ, ನಿರ್ದೇಶಕರಾದ ಚಂದಾ ಹುಸೇನ್, ಛಾಯಾ ದಿವಾಕರ್, ರಮೇಶ್ ಪುರೋಹಿತ್, ಕೆ.ವಿಕಾಸ, ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ ಇದ್ದರು.