
ಕಾರವಾರ : ಇಲ್ಲಿನ ದೋಬಿಘಾಟ್ ಬಳಿ ಅಪಾರ್ಟಮೆಂಟ್ ನಿರ್ಮಾಣದ ಉದ್ದೇಶಕ್ಕೆ ಗುಡ್ಡದ ಕಲ್ಲುಗಳನ್ನು ತೆರವುಗೊಳಿಸಲಾಗುತ್ತಿರುವ ದೂರುಗಳಿದ್ದು, ಮಳೆಗಾಲದಲ್ಲಿ ಭೂಕುಸಿತ ಉಂಟಾಗುವ ಆತಂಕವನ್ನು ಸ್ಥಳೀಯ ನಿವಾಸಿಗಳು ವ್ಯಕ್ತಪಡಿಸಿದ್ದಾರೆ. ನಗರಸಭೆ ವ್ಯಾಪ್ತಿಯ ವಾರ್ಡ್ ನಂ.10ರ ವ್ಯಾಪ್ತಿಯಲ್ಲಿ ಈಗಾಗಲೆ ನಿರ್ಮಾಣಗೊಂಡಿರುವ ಕಟ್ಟಡಕ್ಕೆ ಹೊಂದಿಕೊಂಡು ಮೂರನೆ ಹಂತದ ಕಟ್ಟಡ ನಿರ್ಮಿಸಲು ಸಿದ್ಧತೆ ನಡೆದಿದೆ. ಅದಕ್ಕಾಗಿ ಪಕ್ಕದಲ್ಲಿರುವ ಗುಡ್ಡದ ಮಣ್ಣು, ಕಲ್ಲುಗಳನ್ನು ತೆರವುಗೊಳಿಸಲಾಗುತ್ತಿದೆ ಎಂಬುದು ಸ್ಥಳೀಯರ ದೂರು.
‘ಉದ್ಯಮಿಯೊಬ್ಬರಿಗೆ ಸೇರಿದ ಮಾಲ್ಕಿ ಜಾಗ ಸಮತಟ್ಟುಗೊಳಿಸಲಾಗುತ್ತಿದೆ. ಜಾಗ ಸಮತಟ್ಟುಗೊಳಿಸಿದ್ದರೆ ಸಮಸ್ಯೆ ಇರಲಿಲ್ಲ. ಆದರೆ, ಪಕ್ಕದಲ್ಲೇ ಇರುವ ಗುಡ್ಡದ ಬುಡದಲ್ಲಿನ ದೊಡ್ಡ ಗಾತ್ರದ ಕಲ್ಲುಗಳನ್ನು ಒಡೆದು ತೆರವುಗೊಳಿಸಲಾಗುತ್ತಿದೆ. ಇದರಿಂದ ಗುಡ್ಡದ ಮಣ್ಣು ಸಡಿಲಗೊಳ್ಳುವ ಅಪಾಯವಿದ್ದು, ಮಳೆಗಾಲದಲ್ಲಿ ಕುಸಿದು ಬೀಳುವ ಅಪಾಯವಿದೆ’ ಎಂದು ಸ್ಥಳೀಯರಾದ ಬಾಬು ಮಾಳೇಕರ್, ಸುನೀತಾ ಶೆಟ್ಟಿ, ಇತರರು ದೂರಿದರು.

ಗುಡ್ಡದ ಇನ್ನೊಂದು ಬದಿಯಲ್ಲಿರುವ ಸಾಯಿ ಮಂದಿರ ಪಕ್ಕದಲ್ಲಿ ಕಳೆದ ಮಳೆಗಾಲದಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ಇದೇ ಗುಡ್ಡವು ಹಬ್ಬುವಾಡಾ ಸಮೀಪದಲ್ಲಿಯೂ ಕುಸಿದಿತ್ತು. ದೋಬಿಘಾಟ್ ಬಳಿ ಗುಡ್ಡಕ್ಕೆ ಹಾನಿಯುಂಟು ಮಾಡುವ ಕೆಲಸ ಹಲವು ವರ್ಷದಿಂದ ನಡೆದಿದೆ. ವ್ಯಾಪಕ ಪ್ರಮಾಣದಲ್ಲಿ ಕಲ್ಲು, ಮಣ್ಣು ತೆರವುಗೊಳಿಸಲಾಗಿದೆ. ಮಳೆಗಾಲದಲ್ಲಿ ಗುಡ್ಡದಿಂದ ಇಳಿದು ಬರುವ ನೀರು ಸರಾಗವಾಗಿ ಹಾದುಹೋಗುವ ಕಾಲುವೆಯನ್ನೂ ಮುಚ್ಚಲಾಗಿದೆ’ ಎಂದೂ ಆರೋಪಿಸಿದರು. ಕಟ್ಟಡ ನಿರ್ಮಾಣಕ್ಕೆ ಕಾಲುವೆ ಮುಚ್ಚಿರುವ ಜೊತೆಗೆ ಕಲ್ಲುಗಳನ್ನು ತೆರವುಗೊಳಿಸಿದ್ದರ ಬಗ್ಗೆ ಹಲವು ವರ್ಷದಿಂದಲೂ ಸ್ಥಳೀಯರಿಂದ ವಿರೋಧವಿದೆ. ಕಟ್ಟಡದ ಎರಡನೇ ಹಂತದ ನಿರ್ಮಾಣಕ್ಕೆ ಮುನ್ನ ಕಾಲುವೆ ನಿರ್ಮಿಸಿಕೊಡಲು ಕಟ್ಟಡ ಮಾಲೀಕರಿಗೆ ಸೂಚಿಸಲಾಗಿತ್ತು. ಇದುವರೆಗೂ ಕಾಲುವೆ ನಿರ್ಮಿಸದ ಕಾರಣಕ್ಕೆ ನಗರಸಭೆಯಿಂದ ನೋಟಿಸ್ ನೀಡಲಾಗಿದೆ’ ಎಂದು ವಾರ್ಡ್ ಸದಸ್ಯರೂ ಆಗಿರುವ ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೇಕರ್ ಹೇಳಿದರು.