
ವಿಜಯಪುರ : ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಸಿ.ಇ.ಟಿ ಮತ್ತು ನಿಟ್ ತರಬೇತಿಯನ್ನು ನೀಡುವ ಕಾರ್ಯವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಾಡಿಕೊಂಡು ಬರುತ್ತಿದೆ ಎಂದು ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಹೇಳಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಉಚಿತ ಸಿ.ಇ.ಟಿ – ನಿಟ್ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ಜಗತ್ತಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಕಾಣಬೇಕಾಗಿದರೆ ವಿದ್ಯಾರ್ಥಿಗಳು ಜೀವನದ ಮುಂದಿನ ಗುರಿಯನ್ನು ಇಟ್ಟುಕೊಂಡು ಅಧ್ಯಯನ ಶೀಲರಾಗಬೇಕು ಎಂದರು. ತಾವು ಪಡೆಯುವ ಶಿಕ್ಷಣ ಕೇವಲ ತಮಗಾಗಿ ಅಷ್ಟೇ ಸೀಮಿತವಾಗದೆ, ಸಮಾಜಕ್ಕೆ ಅಗತ್ಯವಿರುವ ಕಾರ್ಯಗಳಿಗೆ ಉಪಯೋಗವಾಗುವಂತೆ ಮುಂದಿನ ದಿನಗಳಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ವ್ಯಕ್ತಿಗಳು ಆಗಬೇಕು ಎಂದರು.

ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ ನಾಟಿಕಾರ ಮಾತನಾಡಿ, ಬಡ ರೈತ ಕಾರ್ಮಿಕರ ಮಕ್ಕಳಿಗೆ ಹೆಚ್ಚು ಹಣ ನೀಡಿ ಶಿಕ್ಷಣ ಪಡೆಯಲು ಕಷ್ಟ ಆಗುತ್ತಿರುವ ಸಂದರ್ಭದಲ್ಲಿ ಉಚಿತವಾಗಿ ತರಗತಿ ನಡೆಸುತ್ತಿರುವ ಎಬಿವಿಪಿಯ ಕಾರ್ಯ ಶ್ಲಾಘನೀಯ ಎಂದರು. ಉಪನ್ಯಾಸಕ ಅಮಿತ ಸೋಲಾಪುರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪರಿಶ್ರಮದ ಮೂಲಕ ಯಶಸ್ವಿ ಕಂಡಾಗ ನಮ್ಮ ಸಂಬಂಧಿಕರು, ಕಾಲೇಜಿನ ಅಧ್ಯಾಪಕರು ಹಾಗೂ ಇತರರೂ ನಮಗೆಲ್ಲ ಗೌರವ ನೀಡುತ್ತಾರೆ. ಅದಕ್ಕೆ ನಾವೆಲ್ಲರೂ ಪರಿಶ್ರಮದಿಂದ ಅಧ್ಯಯನ ಮಾಡಬೇಕು ಎಂದರು. ಎಬಿವಿಪಿಯ ನಗರ ಅಧ್ಯಕ್ಷರಾದ ಡಾ. ಸುಮಾ ಬೋಳರೆಡ್ಡಿ, ಚೇತನ ಕೋರವಾರ, ಸಂದೀಪ ಅರಳಗುಂಡಿ, ಸ್ನೇಹಾ ಹಿರೇಮಠ, ಐಶರ್ಯ ಆಸಂಗಿ ಉಪಸ್ಥಿತರಿದ್ದರು.