
ಚಿಕ್ಕಮಗಳೂರು: ಪರಿಸರ ಸೂಕ್ಷ್ಮ ಪ್ರದೇಶ ಹಾಗೂ ಚಾರ್ಮಾಡಿ ಘಾಟಿ ಆರಂಭದ ಸ್ಥಳದ ಕೂಗಳತೆ ದೂರದಲ್ಲಿ ಗುಡ್ಡಗಳನ್ನೇ ಬಗೆದು ಮಣ್ಣು ಮಾರಾಟ ಮಾಡುವ ದಂಧೆ ಸದ್ದಿಲ್ಲದೆ ನಡೆಯುತ್ತಿದೆ.

ಮಳೆಗಾಲದಲ್ಲಿ ಮಲೆನಾಡು ಭೂಕುಸಿತದ ಆತಂಕ ಎದುರಿಸಿದರೆ, ಬೇಸಿಗೆಯಲ್ಲಿ ಗುಡ್ಡಗಳನ್ನು ಅಗೆಯುವ ಕೆಲಸ ನಡೆಯುತ್ತಿದೆ. ಗದ್ದೆಗಳ ತುಂಬ ಸಾವಿರಾರು ಲೋಡ್ಗಳಷ್ಟು ಗುಡ್ಡದ ಮಣ್ಣು ತುಂಬುತ್ತಿದ್ದು, ಗುಡ್ಡ ಮತ್ತು ಗದ್ದೆಯ ಸ್ವರೂಪ ಬದಲಾಗುತ್ತಿದೆ. 2019ರಲ್ಲಿ ಮೂಡಿಗೆರೆ ತಾಲ್ಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿತ್ತು. ಪ್ರತಿವರ್ಷ ಅಲ್ಲಲ್ಲಿ ಸಣ್ಣಪುಟ್ಟ ಭೂಕುಸಿತ ಉಂಟಾಗುತ್ತಲೇ ಇವೆ. ಭೂಕುಸಿತದ ಆತಂಕದಲ್ಲೇ ಮಲೆನಾಡಿನ ಜನ ಮಳೆಗಾಲ ಕಳೆಯುತ್ತಾರೆ. ಭಾರತೀಯ ಭೂಸರ್ವೇಕ್ಷಣಾ ಸಂಸ್ಥೆಯ(ಜಿಎಸ್ಐ) ತಂಡ ಕೂಡ ಕಳೆದ ವರ್ಷ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಭೂಕುಸಿತದ ಸಂಭವನೀಯ ಪ್ರದೇಶಗಳ ರಾಷ್ಟ್ರೀಯ ದಾಖಲೀಕರಣ (ಎನ್ಎಲ್ಎಸ್ಎಂ) ಪ್ರಕಾರ ಜಿಲ್ಲೆಯಲ್ಲಿ ಶೇ 4.60ರಷ್ಟು ಪ್ರದೇಶವು ಹೆಚ್ಚು ಅಪಾಯದ ಸ್ಥಳಗಳು, ಶೇ 20.92ರಷ್ಟು ಮಧ್ಯಮ ಅಪಾಯದ ಸ್ಥಳಗಳು ಮತ್ತು ಶೇ 74.47ರಷ್ಟು ಪ್ರದೇಶವು ಕಡಿಮೆ ಸಾಧ್ಯತೆಗಳಿರುವ ಪ್ರದೇಶ ಎಂದು ಗುರುತಿಸಿದೆ. ಅಡ್ಡಾದಿಡ್ಡಿಯಾಗಿ ಗುಡ್ಡಗಳನ್ನು ಅಗೆದರೆ ಮಳೆಗಾಲದಲ್ಲಿ ಭೂಕುಸಿತ ಉಂಟಾಗಲಿದೆ ಎಂದೂ ವರದಿ ಸಲ್ಲಿಸಿಲಾಗಿದೆ.