
ಉತ್ತರ ಕನ್ನಡ: ಮುಂಡಗೋಡ ತಾಲ್ಲೂಕಿನ ಮೈನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಬೀಸಿದ ರಭಸದ ಗಾಳಿ, ಮಳೆಗೆ ಎರಡು ಮನೆಗಳ ಚಾವಣಿ ಹಾರಿ ಹೋಗಿ, ಸುಮಾರು ಹತ್ತು ಮನೆಗಳಿಗೆ ಅಲ್ಪಪ್ರಮಾಣದ ಹಾನಿಯಾಗಿದೆ.

ಶಿಡ್ಲಗುಂಡಿ ಗ್ರಾಮದ ಬಯ್ಯಾಬಾಯಿ ಗಾವಡೆ ಎಂಬುವರ ಮನೆಯ ಅಡುಗೆ ಕೋಣೆ ಹಾನಿಯಾಗಿ, ಚಾವಣಿ ಹಾರಿ ಹೋಗಿದೆ. ಲಕ್ಕುಬಾಯಿ ಶಳಕೆ, ಲಾಲಸಾಬ ಎಂಬುವರ ಚಾವಣಿ ಹಾರಿ ಹೋಗಿದೆ. ಜನ್ನಾಬಾಯಿ ಹಾಗೂ ಚಿದಾನಂದ ರಾಣೋಜಿ ಎಂಬುವರ ಮನೆಯ ಮೇಲೆ ಮಾವಿನ ಮರವೊಂದು ಬಿದ್ದು ಮನೆಗೆ ಹಾನಿಯಾಗಿದೆ. ಭಾರಿ ಗಾಳಿಯಿಂದ ಜನ್ನು ಲುಗಡೆ ಎಂಬುವರ ಬಾಳೆ ಗಿಡಗಳು ನೆಲಕ್ಕುರುಳಿವೆ. ಗ್ರಾಮ ಪಂಚಾಯಿತಿ ಪಿಡಿಒ ಮಂಜುನಾಥ, ಗ್ರಾಮ ಲೆಕ್ಕಾಧಿಕಾರಿ ಪ್ರಜ್ವಲ್ ನಾವಿ, ಪಂಚಾಯತ್ ರಾಜ ಇಲಾಖೆಯ ಎಇಇ ಪ್ರದೀಪ ಭಟ್ ಭೇಟಿ ನೀಡಿ ಹಾನಿಯ ಅಂದಾಜು ಪರಿಶೀಲಿಸಿದರು.