
ದಾವಣಗೆರೆ : ನೇಚರ್ ಕಾಲ್ ಹೋಗುತ್ತೇನೆಂದು ಹೇಳಿ ತಪ್ಪಿಸಿಕೊಳ್ಳಲು ಹೋದ ದರೋಡೆಕೋರನ ಮೇಲೆ ವಿದ್ಯಾನಗರ ಪಿಎಸ್ಐ ಶಿಲ್ಪಾ ಫೈರ್ ಮಾಡಿದ್ದಾರೆ.
ಈಗಾಗಲೇ ಲೇಡಿ ಸಿಂಗಂ ನಾಮಪಡೆದ ಉಮಾಪ್ರಶಾಂತ್ ಜಿಲ್ಲೆಯಲ್ಲಿ ನಡೆಯುತ್ತಿರುವ ಕ್ರೈಂ ಮಟ್ಟ ಹಾಕುತ್ತಿದ್ದು, ದರೋಡೆಕೋರರು ಸೇರಿದಂತೆ ರೌಡಿಗಳ ಚಲನವನ ಮೇಲೆ ಕಣ್ಣಿಟ್ಟಿದ್ದಾರೆ. ಅಂತೆಯೇ ದರೋಡೆಕೋರ ನವೀನ್ ಎಂಬಾತನ ಮೇಲೆಯೂ ಎಸ್ಪಿ ಉಮಾಪ್ರಶಾಂತ್ ವಿದ್ಯಾನಗರ ಪಿಎಸ್ಐ ಶಿಲ್ಪಾಗೆ ಕಣ್ಣೀಡಲು ಹೇಳಿದ್ದರು. ಹಾಗಾಗಿ ತಂಡ ರಚನೆ ಮಾಡಿಕೊಂಡ ಪಿಎಸ್ ಐ ಶಿಲ್ಪಾ ಗ್ರಾಮಾಂತರ ಠಾಣೆಯ ಸಿಪಿಐ ಕಿರಣ್ ಕುಮಾರ್ ಜತೆಗೂಡಿ ನವೀನ್ ಎಂಬ ದರೋಡೆಕೋರನನ್ನು ಬಂಧಿಸಿದ್ದರು.
ಏನಿದು ಘಟನೆ
ತುಮಕೂರು ಗೊಲ್ಲರಹಳ್ಳಿಯ ದರೋಡೆಕೋರ ನವೀನ್ ವಿದ್ಯಾನಗರ ಠಾಣಾ ವ್ಯಾಪ್ತಿಯ ಎಸ್.ಎಸ್.ಲೇ ಔಟ್ ನಲ್ಲಿ ವೃದ್ದೆಯ ತಲೆ ಒಡೆದು ನಗದು, ಬಂಗಾರ ದೋಚಿದ್ದ. ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಗುಂಡು ಹಾರಿಸಲು ಕಾರಣ
ದರೋಡೆಕೋರ ನವೀನ್ ನನ್ನು ಪಂಚನಾಮೆಗೆಂದು ದಾವಣಗೆರೆ ವಿಶ್ವವಿದ್ಯಾಲಯದ ಹಿಂಭಾಗಕ್ಕೆ ಕರೆದುಕೊಂಡು ಬಂದಾಗ ಬಹಿರ್ದೆಸೆಗೆ ಹೋಗಬೇಕೆಂದು ಇಳಿದಿದ್ದಾನೆ. ನಂತರ ತಪ್ಪಿಸಿಕೊಳ್ಳಲು ಯತ್ನಿಸಿದಲ್ಲದೇ ಸಿಪಿಐ ಶಿಲ್ಪಾರ ಮೇಲೆ ಹಲ್ಲೆ ನಡೆಸಲು ಮುಂದಾಗಿ ಓಡಿ ಹೋಗಿದ್ದಾನೆ. ಈತನಿಗೆ ಮೊದಲಿಗೆ ಎಚ್ಚರಿಕೆ ನೀಡಲಾಗಿದೆ. ನಂತರ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಆದರೂ ಮಾತು ಕೇಳಿದ ಈತನ ಕಾಲಿಗೆ ಸಿಪಿಐ ಶಿಲ್ಪಾ ಗುಂಡು ಹಾರಿಸಿದ್ದಾರೆ ಎಂದು ಎಸ್ಪಿ ಉಮಾಪ್ರಶಾಂತ್ ತಿಳಿಸಿದ್ದಾರೆ.
ರಾತ್ರೋ ರಾತ್ರಿ ಸ್ಥಳಕ್ಕೆ ಬಂದ ಎಸ್ಪಿ ಉಮಾಪ್ರಶಾಂತ್
ಸಂಸಾರದ ನೌಕೆ ಜತೆ ಕ್ರೈಂ ಜಗತ್ತನ್ನು ಆಳುತ್ತಿರುವವರನ್ನು ಮಟ್ಟ ಹಾಕುತ್ತಿರುವ ಉಮಾಪ್ರಶಾಂತ್ ರಾತ್ರೋ ರಾತ್ರಿ ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಗಾಯಗೊಂಡ ದರೋಡೆಕೋರನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನು ದರೋಡೆಕೋರ ನವೀನ್ ಸುಮಾರು ಐವತ್ತು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇನ್ನಷ್ಟು ಮಾಹಿತಿ ಹೊರ ಬರಬೇಕಿದೆ.