

ತುಮಕೂರು: ಅಪರಿಚಿತರು ಹನಿಟ್ರ್ಯಾಪ್ಗೆ ಪ್ರಯತ್ನಿಸಿದ್ದು, ನನ್ನ ಬಳಿ ಅದಕ್ಕೆ ಯಾವುದೇ ದಾಖಲೆಗಳು ಇಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬೆಂಗಳೂರಿನ ಮನೆಯಲ್ಲಿ ಸಿ.ಸಿ.ಟಿ.ವಿ ಇಲ್ಲ. ಹಾಗಾಗಿ ಯಾವುದೇ ವಿಡಿಯೊ ದಾಖಲಾಗಿಲ್ಲ. ಮನೆಗೆ ಯಾರು ಬಂದಿದ್ದಾರೆ ಎಂದು ಚೆಕ್ ಮಾಡಲು ಪ್ರಯತ್ನಿಸಿದೆ. ಯಾವುದೇ ಮಾಹಿತಿ ಸಿಕ್ಕಿಲ್ಲ. ಅವರ ಫೋಟೊ ತೋರಿಸಿದರೆ ಗುರುತು ಹಿಡಿಯುತ್ತೇನೆ’ ಎಂದು ಹೇಳಿದರು. ಎರಡು ಬಾರಿ ಮನೆಗೆ ಬಂದಾಗಲೂ ಅವರ ಜತೆಗೆ ಒಬ್ಬ ಹುಡುಗ ಇದ್ದ. ಆದರೆ ಬೇರೆಬೇರೆ ಹುಡುಗಿಯರು ಬಂದಿದ್ದರು. ಜೀನ್ಸ್ ಪ್ಯಾಂಟ್, ಬ್ಲೂ ಟಾಪ್ ಹಾಕಿಕೊಂಡಿದ್ದರು. ಹೈಕೋರ್ಟ್ ವಕೀಲರು ಎಂದು ಪರಿಚಯಿಸಿಕೊಂಡಿದ್ದರು. ‘ಪರ್ಸನಲ್ಲಾಗಿ ನಿಮ್ಮ ಜತೆಗೆ ಕುಳಿತು ಬಹಳ ಮಾತನಾಡಬೇಕಿದೆ’ ಎಂದು ಹೇಳಿಕೊಂಡಿದ್ದರು ಎಂದು ವಿವರಿಸಿದರು. ‘ನ್ಯಾಯಾಧೀಶರನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ನಾನು ಹೇಳಿಲ್ಲ. ಎಲ್ಲ ಪಕ್ಷದ ರಾಜಕಾರಣಿಗಳ ಮೇಲೆ ಕಳಂಕ ತರಲು ಈ ರೀತಿ ಮಾಡಿದ್ದಾರೆ ಎಂದಷ್ಟೇ ಹೇಳಿದ್ದೇನೆ’ ಎಂದರು. ಸಮಯ ಸಿಗದೆ ದೂರು ನೀಡಿರಲಿಲ್ಲ. ಈಗ ಮೂರು ಪುಟಗಳ ದೂರು ಸಿದ್ಧಪಡಿಸಿದ್ದು, ಗೃಹ ಸಚಿವ ಜಿ.ಪರಮೇಶ್ವರ ಅವರನ್ನು ಭೇಟಿಮಾಡಿ ನೀಡುತ್ತೇನೆ. ಎಫ್ಐಆರ್ ದಾಖಲಾದ ನಂತರ ತನಿಖೆ ನಡೆಯಲಿದೆ ಎಂದು ತಿಳಿಸಿದರು.