
ಶಿವಮೊಗ್ಗ: ಬಿರು ಬಿಸಿಲಿನಲ್ಲಿ ದೇಹ ತಣ್ಣಗೆ ಇಟ್ಟುಕೊಳ್ಳಲು ಸಹಾಯ ಮಾಡುವ ಕಲ್ಲಂಗಡಿ ಹಣ್ಣಿನ ಬೆಲೆ ಕಡಿಮೆಯಾದರೂ, ಕೊಳ್ಳಲು ಗ್ರಾಹಕರು ಮುಂದೆ ಬರುತ್ತಿಲ್ಲ. ಇದರಿಂದ ಮಾರಾಟಗಾರರು ಮಾತ್ರವಲ್ಲ, ರೈತರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ತಮಿಳುನಾಡು, ಆಂಧ್ರಪ್ರದೇಶದಿಂದ ಬೇಡಿಕೆಗೂ ಮೀರಿ ಅತಿ ಹೆಚ್ಚು ಕಲ್ಲಂಗಡಿ ಅಮದಾಗಿದೆ. ಅಲ್ಲದೆ, ರಾಸಾಯನಿಕ ಸೇರ್ಪಡೆ ವದಂತಿಯಿಂದ ಇಲ್ಲಿನ ರೈತರು ಬೆಳೆದ ಕಲ್ಲಂಗಡಿಗೆ ಬೇಡಿಕೆ ಕುಸಿದಿದೆ. ಇದರಿಂದ ರೈತರು ಬೆಳೆಯನ್ನು ಮಾರಾಟ ಮಾಡಲು ಆಗದೆ, ಹೊಲದಲ್ಲಿ ಬಿಡಲು ಆಗದೆ ನಷ್ಟ ಅನುಭವಿಸುವಂತಾಗಿದೆ. ಉತ್ತಮ ದರ ಸಿಗುತ್ತದೆ ಎನ್ನುವ ಕಾರಣಕ್ಕೆ ಅತಿ ಹೆಚ್ಚು ರೈತರು ಕಲ್ಲಂಗಡಿ ಬಿತ್ತನೆ ಮಾಡಿದ್ದರು. ಉತ್ತಮ ವಾತಾವರಣವಿದ್ದ ಹಿನ್ನೆಲೆಯಲ್ಲಿ ಇಳುವರಿಯೂ ಹೆಚ್ಚಾಗಿದೆ. ಆದರೆ, ಪ್ರಸ್ತುತ ಹೋಲ್ಸೇಲ್ ಮಾರಾಟಗಾರರು ರೈತರಿಂದ 8, 10 ರೂ.ಗೆ ಕಲ್ಲಂಗಡಿ ಖರೀದಿಸುತ್ತಿದ್ದಾರೆ. ಅಕ್ಟೋಬರ್ನಲ್ಲಿ ಕೆಜಿಗೆ 18 ರೂ., ನವೆಂಬರ್ನಲ್ಲಿ ಕೆಜಿಗೆ 10-12 ರೂ. ಬೆಲೆ ಇತ್ತು. ಆದರೆ ಈಗ ಪಾತಾಳಕ್ಕೆ ಕುಸಿದಿದೆ. ಚಿಲ್ಲರೆ ಮಾರುಕಟ್ಟೆಯಲ್ಲೆ ಕಲ್ಲಂಗಡಿ ಪ್ರತಿ ಕೆಜಿಗೆ 15-20 ರೂ.ಗೆ ಮಾರಾಟವಾಗುತ್ತಿದೆ. ಕಳೆದ ವರ್ಷದ ಒಂದು ಲೋಡ್ ಕಲ್ಲಂಗಡಿ ಮೂರು ದಿನದಲ್ಲಿ ಖಾಲಿ ಆಗುತ್ತಿತ್ತು. ಈ ಬಾರಿ ಹತ್ತು ದಿನಗಳಾದರೂ ಹಣ್ಣು ಖಾಲಿಯಾಗುತ್ತಿಲ್ಲ. ಶೇ.90ರಷ್ಟು ನೀರಿನಾಂಶ ಹೊಂದಿರುವ ಕಲ್ಲಂಗಡಿ ಬೇಸಿಗೆ ಸಮಯದಲ್ಲಿ ದೇಹವನ್ನು ತಂಪಾಗಿಸುತ್ತದೆ. ಇದರಲ್ಲಿನ ಪೊಟಾಶಿಯಮ್, ಸೋಡಿಯಂ, ಕಾರ್ಬೋಹೈಡ್ರೇಟ್ಸ್, ನಾರಿನಾಂಶ ಮೊದಲಾದವು ಬಿಸಿಲಿಗೆ ದೇಹಕ್ಕೆ ರಕ್ಷಣೆ ನೀಡುವ ಜತೆಗೆ, ದೇಹದಲ್ಲಿನ ನೀರಿನ ಮಟ್ಟವನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತವೆ.

ಒಂದು ಎಕರೆಯಲ್ಲಿ 15 ಟನ್ ಕಲ್ಲಂಗಡಿ ಬೆಳೆಯಬಹುದು. ಸುಮಾರು 8 ಸಾವಿರ ಕಲ್ಲಂಗಡಿ ಬರುತ್ತವೆ. ಈ ಎಲ್ಲವೂಗಳಿಗೆ ಇಂಜೆಕ್ಷನ್ ನೀಡುವುದು ಬೆಳೆಗಾರರಿಗೆ ಆರ್ಥಿಕ ಹೊರೆ. ಇದು ಸುಳ್ಳು ಸುದ್ದಿಎಂದರೂ ಜನ ನಂಬಲು ಸಿದ್ಧರಿಲ್ಲಎನ್ನುತ್ತಾರೆ ವ್ಯಾಪಾರಿಗಳು. ಒಟ್ಟಿನಲ್ಲಿ ಹೆಚ್ಚಾದ ಇಳುವರಿ, ರಾಸಾಯನಿಕ ಚುಚ್ಚಲಾಗುತ್ತದೆ ಎಂಬ ವದಂತಿ, ಹೊರರಾಜ್ಯಗಳಿಂದ ಬರುತ್ತಿರುವ ಕಲ್ಲಂಗಡಿಯಿಂದ ದರ ಕುಸಿದಿದ್ದು, ರಾಜ್ಯದ ರೈತರು ನಷ್ಟ ಅನುಭವಿಸುವಂತಾಗಿದೆ. ಕಲ್ಲಂಗಡಿಗೆ ಬಣ್ಣ ಹಾಗೂ ಸಿಹಿ ಬರುವ ಇಂಜೆಕ್ಷನ್ ನೀಡಲಾಗುತ್ತಿದೆ ಎಂಬ ವದಂತಿ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇಂಜೆಕ್ಷನ್ ಮಾಡಿದ ಹಣ್ಣನ್ನು ತಿಂದರೆ ಆರೋಗ್ಯಕ್ಕೆ ಅಪಾಯ ಎಂದು ಬಹಳಷ್ಟು ಜನ ಕಲ್ಲಂಗಡಿ ತಿನ್ನುವ ಮನಸ್ಸು ಮಾಡುತ್ತಿಲ್ಲ. ಹಿಂದೆ ಸಿಹಿಯಾಗಿರುವ ಕಲ್ಲಂಗಡಿ ಕೊಡಿ ಎನ್ನುತ್ತಿದ್ದ ಗ್ರಾಹಕರು ಈಗ, ಇಂಜೆಕ್ಷನ್ ಮಾಡದಿರುವ ಕಲ್ಲಂಗಡಿ ಕೊಡಿ ಎನ್ನುವ ಸ್ಥಿತಿ ಬಂದಿದೆ. ಹಣ್ಣಿಗೆ ಇಂಜೆಕ್ಷನ್ ಕೊಡಲು ಬರುವುದಿಲ್ಲ ಎಂದರೆ ಜನ ನಂಬುತ್ತಿಲ್ಲ ಎಂದು ವ್ಯಾಪಾರಿಗಳು ಅಸಹಾಯಕತೆ ವ್ಯಕ್ತಪಡುತ್ತಾರೆ. ಕಲ್ಲಂಗಡಿ ಹಣ್ಣಿಗೆ ಬಣ್ಣ ಹಾಗೂ ಸಿಹಿ ರುಚಿ ಬರುವ ಇಂಜೆಕ್ಷನ್ ನೀಡಲು ಸಾಧ್ಯವಿಲ್ಲ ಎಂದು ವೈಜ್ಞಾನಿಕವಾಗಿ ರುಜುವಾಗಿದೆ. ಗ್ರಾಹಕರು ಈ ರೀತಿಯ ವದಂತಿಗಳಿಗೆ ಕಿವಿಗೊಡದೆ ಕಲ್ಲಂಗಡಿ ಹಣ್ಣನ್ನು ಆರಾಮಾವಾಗಿ ತಿನ್ನಬಹುದು.