
ಮೈಸೂರು: ಕಳೆದ ವಾರ ಪುನೀತ್ ರಾಜ್ ಕುಮಾರ ಅವರ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ರಾಜ್ಯದಾದ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಿದ್ದರು. ಮೈಸೂರಿನಲ್ಲಿ ಮಾತ್ರ ಅಪ್ಪು ಹಬ್ಬ ಮುಂದುವರೆದಿದ್ದು, ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ. ಡಾ. ಪುನೀತ್ ರಾಜ್ ಕುಮಾರ ಅವರ ಹುಟ್ಟುಹಬ್ಬಕ್ಕೆ ಅವರ ಚಲನಚಿತ್ರವನ್ನು ರೀ ರಿಲೀಸ್ ಮಾಡಲಾಗಿತ್ತು. ಈ ವೇಳೆ ಅಪ್ಪು ಭಾವಚಿತ್ರವನ್ನು ಮೆರವಣಿಗೆ ನಡೆಸಿ, ಅನ್ನಧಾನ ಮಾಡಿದ್ದ ಅಭಿಮಾನಿಗಳು, ಈ ಬಾರಿ ಅಪ್ಪು ಹಬ್ಬದ ಪ್ರಯುಕ್ತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದ್ದರು. ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಪುನೀತ್ ರಾಜ್ಕುಮಾರ್ ಸಮಾಜ ಸೇವಾ ಸಮಿತಿಯಿಂದ ಸಾಮೂಹಿಕ ವಿವಾಹವನ್ನು ಅಯೋಜನೆ ಮಾಡಲಾಗಿತ್ತು. ಅಪ್ಪು ಹುಟ್ಟು ಹಬ್ಬ ಈ ತಿಂಗಳು 17 ರಂದು ನಡೆದರು ಅವರ ಅಭಿಮಾನಿಗಳು ಈ ತಿಂಗಳ ಪೂರ್ತಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ಅದೇ ರೀತಿ ಮಾರ್ಚ್ 23ರ 11:45ರ ಶುಭ ಗಳಿಗೆಯಲ್ಲಿ 8 ಜೋಡಿಗಳಿಗೆ ಸಮಿತಿಯ ವತಿಯಿಂದ ಮದುವೆ ಭಾಗ್ಯ ಕೂಡಿ ಬಂದಿದೆ. ಸಾಮೂಹಿಕ ವಿವಾಹದ ಪ್ರಯುಕ್ತ ಪುನೀತ್ ರಾಜ್ ಕುಮಾರ ಸಮಾಜ ಸೇವ ಸಮಿತಿಯ ವತಿಯಿಂದ ನೂತನ ವಧು-ವರರಿಗೆ ತಾಳಿ, ಸೀರೆ, ಪಂಚೆ, ಕಾಲುಂಗುರುಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಈ ಒಂದು ಸಾಮೂಹಿಕ ವಿವಾಹಕ್ಕೆ ದೊಡ್ಮನೆಯ ಕುಟುಂಬಸ್ಥರಾದ ನಟ ವಿನಯ್ ರಾಜಕುಮಾರ್, ರಾಜಕುಮಾರ ಪುತ್ರಿ ಲಕ್ಷ್ಮಿ, ಷಣ್ಮುಖ, ನಟ ಶ್ರೀ ಮುರುಳಿ ಅವರು ಭಾಗವಹಿಸಿ, ಅಪ್ಪು ಭಾವಚಿತ್ರಕ್ಕೆ ಪುಷ್ಪಗಳನ್ನು ಹಾಕಿ, ನೂತನ ವಧು-ವರರಿಗೆ ಶುಭಾಶಯ ಕೋರಿದರು. ಈ ವೇಳೆ ಖುಷಿ ಹಂಚಿಕೊಂಡ ನವ ಜೋಡಿಗಳು, ಅಪ್ಪು ಅವರು ನಮಗೆ ಆದರ್ಶದ ವ್ಯಕ್ತಿ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಜೀವನ ಮಾಡುತ್ತೇವೆ. ಅವರು ಇಲ್ಲದಿದ್ದರೂ ಅವರ ಆಶೀರ್ವಾದ ನಮಗೆ ಇದೆ ಎಂದು ಭಾವಿಸುತ್ತೇವೆ. ಅವರಂತೆ ಆದರ್ಶ ದಂಪತಿಗಳಾಗಿ ಬದುಕಿ ತೋರಿಸುತ್ತವೆ ಎಂದಿದ್ದಾರೆ. ಇದೇ ವೇಳೆ ವಿನಯ್ ರಾಜ್ ಕುಮಾರ್ ನೂತನ ವಧುವರರಿಗೆ ಶುಭ ಕೋರಿದ್ದಾರೆ.