
ದಾವಣಗೆರೆ: ಇದೇ ವರ್ಷದ ಅಂದರೆ 2025ರ ಜನವರಿ ಕೊನೆಯಲ್ಲಿ 52,000 ರೂಪಾಯಿ ಒಳಗಿದ್ದ ಕ್ವಿಂಟಾಲ್ ಅಡಿಕೆ ದರ, ಫೆಬ್ರವರಿಯಲ್ಲಿ ಮತ್ತೆ 53,000 ರೂಪಾಯಿ ಗಡಿ ದಾಟಿತ್ತು. ಆಗಿನಿಂದಲೂ ಸತತವಾಗಿ ಏರಿಕೆಯಾಗುತ್ತಲೇ ಬಂದಿತ್ತು. ಅಲ್ಲದೆ, ಏಪ್ರಿಲ್ ಅಂತ್ಯದಲ್ಲಿ 60,000 ರೂಪಾಯಿ ಗಡಿ ದಾಡಿತ್ತು. ಆದರೆ, ಇದೀಗ ಜೂನ್ ಆರಂಭದಲ್ಲಿ ಇಳಿಕೆಯಾಗಿ ಮತ್ತೆ ಏರಿಕೆಯತ್ತ ಸಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ 60,000 ಮುಟ್ಟಿದರೂ ಆಶ್ಚರ್ಯವಿಲ್ಲ. ಹೀಗೆ ಅಡಿಕೆ ದರದಲ್ಲಿ ಏರಿಕೆಯಾಗುತ್ತಿರುವುದರಿಂದ ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.

j3tvkannada
ಇದೀಗ ಚನ್ನಗಿರಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್ಗಳಲ್ಲಿ) ಗರಿಷ್ಠ ದರ 59,009 ರೂಪಾಯಿ, ಕನಿಷ್ಠ ದರ 54,021 ರೂಪಾಯಿ ಇದ್ದು, ಸರಾಸರಿ ಬೆಲೆ 57,561ರೂಪಾಯಿ ಇದೆ. ಬೆಟ್ಟೆ ಅಡಿಕೆ ಗರಿಷ್ಠ ದರ 29,187 ರೂಪಾಯಿ, ಕನಿಷ್ಠ ದರ 28,187 ರೂಪಾಯಿ, ಸರಾಸರಿ ದರ 28,687 ರೂಪಾಯಿ ಆಗಿದೆ. ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ.
2023ರ ಜುಲೈ ತಿಂಗಳಲ್ಲಿ ಗರಿಷ್ಠ ದರ 57,000 ರೂಪಾಯಿ ಮುಟ್ಟಿತ್ತು. ಕಳೆದ ವರ್ಷ ಅಂದರೆ, 2024ರ ಮೇ ತಿಂಗಳಿನಲ್ಲಿ ಗರಿಷ್ಠ 55,000 ರೂಪಾಯಿಗೆ ಬಂದು ತಲುಪಿತ್ತು. ಇದೀಗ 2025ರ ಏಪ್ರಿಲ್ ತಿಂಗಳ ಆರಂಭದಿಂದ ಏರಿಕೆ ಆಗುತ್ತಲೇ ಬಂದಿತ್ತು. ಆದರೆ, ಮತ್ತೆ ಮೇ ತಿಂಗಳಲ್ಲಿ ಮತ್ತೆ ಇಳಿಕೆಯಾಗಿ, ಇದೀಗ ಏರಿಕೆಯತ್ತ ಸಾಗಿದೆ. ಕಳೆದ ಬಾರಿ ಮುಂಗಾರು ಮಳೆ ಆರ್ಭಟದಿಂದ ಉತ್ತಮ ಫಸಲು ಏನೋ ಬಂದಿತ್ತು. ಇನ್ನೂ ಈ ಬಾರಿ ಅವಧಿಗೂ ಮುನ್ನ ಮುಂಗಾರು ಎಂಟ್ರಿ ಕೊಟ್ಟಿದೆ.
ಈ ಹಿನ್ನೆಲೆ ಉತ್ತಮ ಫಸಲಿನ ಜೊತೆ, ಮತ್ತಷ್ಟು ಬೆಲೆ ಏರಿಕೆ ಆಗುವ ಭರವಸೆಯಲ್ಲಿ ಅಡಿಕೆ ಬೆಳೆಗಾರರಿದ್ದಾರೆ. ಮತ್ತೊಂದೆಡೆ ಮಳೆಗಾಲದಲ್ಲಿ ಅಡಿಕೆಯನ್ನು ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎನ್ನುವ ಆತಂಕವೂ ಕೂಡ ಬೆಳೆಗಾರರನ್ನು ಕಾಡುತ್ತಿದೆ. ಸದ್ಯ ಇದೀಗ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಆರ್ಭಟಿಸಿದ ಪರಿಣಾಮ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ. ಅದರಲ್ಲೂ ಇನ್ನೂ ಮುಂದಿನ ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಒಳನಾಡು, ಕರಾವಳಿ ಕರ್ನಾಟಕ ಸೇರಿದಂತೆ ಉತ್ತರ ಒಳನಡಿನ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡಿದೆ. ದಾವಣಗೆರೆ ಜಿಲ್ಲೆ ಸಹ ದಕ್ಷಿಣ ಒಳನಾಡಿಗೆ ಸೇರಲಿದೆ. ಇಲ್ಲಿನ ರೈತರಿಗೆ ಒಂದೆಡೆ ಸಂತಸವಾದರೆ ಮತ್ತೊಂದೆಡೆ ಭಾರೀ ಮಳೆಯಾದರೆ ಅಡಿಕೆಯನ್ನು ಹೇಗೆ ಒಣಗಿಸುವುದು ಎನ್ನುವ ಆತಂಕವೂ ಶುರುವಾಗಿದೆ.